ಜೀವನಾಡಿ ಹೇಮಾವತಿ ಉಳಿಸಿಕೊಳ್ಳಲು ಕಳೆದ ಒಂದೂವರೆ ವರ್ಷದ ಹೋರಾಟದ ಕಾವು ಹೆಚ್ಚಿ ನೀರಿಗಾಗಿ ಎಲ್ಲದಕ್ಕೂ ಸಿದ್ದ ಎಂದು ಸಾವಿರಾರು ರೈತರು 144 ಸೆಕ್ಷನ್ ನಿಷೇಧಾಜ್ಞೆ ಹೇರಿದ್ದ ಸ್ಥಳದಲ್ಲೇ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ನಡೆಸಿ, ಸಭೆ ಕೂಡಾ ನಡೆಸಿ ಪಾದಯಾತ್ರೆ ಮೂಲಕ ನಿಷೇಧಾಜ್ಞೆ ಮುರಿದು ನುಗ್ಗಿ ಕಾಮಗಾರಿ ಸ್ಥಳದಲ್ಲಿ ಅಲ್ಲಿನ ಬ್ಯಾರಿಕೆಟ್ ಕಿತ್ತೊಗೆದು, ಪೈಪ್ ಗಳನ್ನು ಉರುಳಿಸಿ ಕೆನಾಲ್ ಮುಚ್ಚುವ ಕೆಲಸ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ನಿಟ್ಟೂರು ಬಳಿ ಪೊಲೀಸರು ಸರ್ಪಗಾವಲು ರಚಿಸಿ ರೈತರನ್ನು ತಡೆಯುವ ಎಲ್ಲಾ ತಯಾರಿ ನಡೆಸಿದ್ದರು. ಅಲ್ಲಲ್ಲೇ ಗುಂಪಾಗಿ ಕಾಣಿಸಿಕೊಂಡ ರೈತರು ನಿಟ್ಟೂರು ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜಮಾಯಿಸ ತೊಡಗಿದರು. ನೂರರ ಸಂಖ್ಯೆ ಸಾವಿರ ಆಗುತ್ತಿದ್ದಂತೆ ರೈತರು ರಸ್ತೆಗಿಳಿಯತೊಡಗಿದರು. ರೈತ ಸಂಘದ ಮುಖಂಡರು, ಬಿಜೆಪಿ ಜೆಡಿಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ ತಕ್ಷಣ ಪ್ರತಿಭಟನೆ ತೀವ್ರ ಸ್ವರೂಪ ಕಂಡಿತು. ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆಯಲ್ಲಿ ಕೆನಾಲ್ ಕಾಮಗಾರಿ ಸ್ಥಳ ಸುಂಕಾಪುರದತ್ತ ಹೊರಟಾಗ ಪೊಲೀಸರು ಎಲ್ಲಾ ಮುಖಂಡರನ್ನು ಹಾಗೂ ಮಠಾಧೀಶರನ್ನು ಬಂಧಿಸುವ ಪ್ರಯತ್ನ ಮಾಡಿದರು. ತಕ್ಷಣ ರೊಚ್ಚಿಗೆದ್ದ ರೈತರು ಪೊಲೀಸರ ಬಸ್ಸುಗಳನ್ನು ತಡೆದು ಚಕ್ರದ ಟೈರ್ಗಳಲ್ಲಿ ಗಾಳಿ ಬಿಟ್ಟು ಬಸ್ಸುಗಳನ್ನು ಅಲ್ಲಾಡಿಸಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದರು. ಬಂಧಿತ ಮುಖಂಡರನ್ನು ಬಿಟ್ಟ ನಂತರ ಬಿಗುವಿನ ವಾತಾವರಣ ಸಡಿಲ ಗೊಂಡಿತು. ಅಲ್ಲಿಂದ ನೇರ ಸುಂಕಾಪುರದವರೆಗೆ ಸುಮಾರು 7 ಕಿಮೀ ಪಾದಯಾತ್ರೆ ನಡೆಸಿದರು.

ಪ್ರತಿಭಟನೆಗೆ ಪೊಲೀಸರ ತಡೆ ಆಗುವ ಸಾಧ್ಯತೆಗೆ ಹೋರಾಟ ಸಮಿತಿ ಪ್ರತಿಭಟನೆಯನ್ನು ಮೂರು ಭಾಗದಲ್ಲಿ ನಡೆಸಲು ಸಜ್ಜಾಗಿದ್ದರು. ರೈತಸಂಘ ಸದಸ್ಯರ ಒಂದು ಗುಂಪು ತಾಲ್ಲೂಕಿನ ಗಡಿ ಕಳ್ಳಿಪಾಳ್ಯ ಬಳಿ ಹೆದ್ದಾರಿಗೆ ಮಣ್ಣು ಸುರಿದು ಸಂಚಾರಕ್ಕೆ ತಡೆಯೊಡ್ಡಲಾಯಿತು. ಮತ್ತೊಂದು ಗಡಿ ಯಲ್ಲಾಪುರ ಗೇಟ್ ಬಳಿ ಕೂಡಾ ಮಣ್ಣು ಸುರಿದು ಹೆದ್ದಾರಿ ಬಂದ್ ಮಾಡಿ ಮಧ್ಯದಲ್ಲಿ ನಿಟ್ಟೂರು ಬಳಿ ಸಾವಿರಾರು ರೈತರು ಹೋರಾಟ ಆರಂಭಿಸಿದರು. ನಂತರ ಸುಂಕಾಪುರ ಬಳಿ ನಡೆದಿದ್ದ ಕಾಮಗಾರಿ ಸ್ಥಳದಲ್ಲಿ ದೊಡ್ಡ ಕೆನಾಲ್ ಬಳಿ ಕೆಲಸ ಸ್ಥಗಿತ ಮಾಡಲು ಬಂದಿದ್ದ ಕಾರಣ ಅಲ್ಲಿನ ಸಿಬ್ಬಂದಿಗಳು ಈ ಮೊದಲೇ ಕೆಲಸ ನಿಲ್ಲಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು. ರೊಚ್ಚಿಗೆದ್ದ ರೈತರು ಕೆನಾಲ್ ಒಳಗೆ ಮಣ್ಣು ಸುರಿದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿನ ಬ್ಯಾರಿಕೇಟ್ ಗಳನ್ನೂ ಕಿತ್ತೊಗೆದರು. ದೊಡ್ಡ ಪೈಪ್ ಉರುಳಿಸಿದರು. ಗುತ್ತಿಗೆದಾರರ ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ಕೆನಾಲ್ ಗೆ ಸುರಿದರು. ಸ್ಥಳದಲ್ಲಿ ಡಿಸಿಎಂ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, “ಕುಣಿಗಲ್ ತಾಲ್ಲೂಕಿಗೆ 3.3 ಟಿಎಂಸಿ ತೆಗೆದುಕೊಂಡು ಹೋಗಲಿ. ಅದಕ್ಕೆ ಎಂದೂ ಅಡ್ಡಿ ಮಾಡೋಲ್ಲ. ಕುಣಿಗಲ್ ಹೆಸರಿನಲ್ಲಿ ಮುಂದಕ್ಕೆ ರಾಮನಗರ ಜಿಲ್ಲೆಗೆ ನೀರು ಹರಿಸುವ ಅಕ್ರಮಕ್ಕೆ ನಮ್ಮ ರೈತರು ಬಿಡುವುದಿಲ್ಲ. ಶಾಸಕ ರಂಗನಾಥ್ ಅವರ ಮಾವ ಆಗಿರುವ ಶಿವಕುಮಾರ್ ಅವರಿಗೆ ಬದ್ಧರಾಗಿ ಕೆಲಸ ಮಾಡಲೇಬೇಕು. ಅದಕ್ಕೆ ಜಿಲ್ಲೆಯ ರೈತರನ್ನು ಬಲಿ ಪಡೆಯುವ ಕೆಲಸ ಮಾಡಲು ಬಿಡುವುದಿಲ್ಲ. ಮುಖ್ಯ ನಾಲೆಯ ಮೂಲಕ ಅಲೋಕೇಶನ್ ಮಾಡಿದಷ್ಟು ನೀರು ತೆಗೆದುಕೊಂಡು ಹೋಗಿ” ಎಂದು ಗುಡುಗಿದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, “ರೈತರಿಗೆ ಅನ್ಯಾಯ ಮಾಡಿದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಸಜ್ಜಾಗಿದ್ದೆ. ಇಲ್ಲಿನ ಪ್ರತಿಭಟನೆಯಿಂದ ಆಗುವ ಅನಾಹುತಕ್ಕೆ ಸರ್ಕಾರ ನೇರ ಹೊಣೆ. ಜೈಲಿಗೆ ಸಾವಿರಾರು ರೈತರು ಒಟ್ಟಿಗೆ ಹೋಗೋಣ. ನಮ್ಮ ಹಕ್ಕು ಪ್ರತಿಪಾದಿಸಲು ಸ್ಥಳಕ್ಕೆ ಹೋಗೋಣ. ಶಾಂತಿಯುತ ಪ್ರತಿಭಟನೆ ನಡೆಸೋಣ. ಗುಬ್ಬಿ ಶಾಸಕರು ಕಾಂಗ್ರೆಸ್ ಸೇರಿ ಮಾತು ಕಟ್ಟಿಕೊಂಡಿದ್ದಾರೆ. ಈಗ ಜನಶಕ್ತಿ ಪ್ರದರ್ಶನ ಮಾಡಿಯೇ ನಮ್ಮ ನೀರು ಉಳಿಸಿಕೊಳ್ಳೋಣ” ಎಂದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, “ಹೇಮಾವತಿ ಜಿಲ್ಲೆಯ ಜೀವನಾಡಿ. ಕೃಷಿಕರಿಗೆ, ನಾಗರಿಕರಿಗೆ ಕುಡಿಯುವ ನೀರು ಇದಾಗಿದೆ. ಹೇಮಾವತಿ ಹತ್ತು ವಿಧಾನಸಭಾ ಕ್ಷೇತ್ರದ ಋಣ ಇದೆ. ಕುಣಿಗಲ್ ತಾಲ್ಲೂಕಿನ ಹೆಸರು ನೆಪಕ್ಕೆ ಹೇಳಿ ರಾಮನಗರ ಜಿಲ್ಲೆ ಕಡೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ರೈತರಿಗೆ ವಿಷ ಕೊಡುವ ಕೆಲಸ. ಮುಂದಿನ ದಿನದಲ್ಲಿ ತುರುವೇಕೆರೆ, ಗುಬ್ಬಿ, ತುಮಕೂರು ತಾಲ್ಲೂಕಿಗೆ ದೊಡ್ಡ ಪೆಟ್ಟು ಬೀಳಲಿದೆ” ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, “ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಅಕ್ರಮ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರದ್ದು ಮಾಡಿದ್ದ ಈ ಕಾಮಗಾರಿಗೆ ಮರು ಚಾಲನೆ ನೀಡಿ ಸಾವಿರ ಕೋಟಿ ಕಾಮಗಾರಿ ಆರಂಭಿಸಿದ್ದಾರೆ. ಜಿಲ್ಲೆಯ ಉಳಿದ ತಾಲ್ಲೂಕಿಗೆ ಹೇಮಾವತಿ ನೀರು ವಂಚಿತವಾಗುತ್ತದೆ. ಈ ಪೈಪ್ ಲೈನ್ ಕಾಮಗಾರಿ ನಿಲ್ಲಿಸಿದರೆ ಯಾವ ತಾಲ್ಲೂಕಿಗೂ ಅನ್ಯಾಯ ಆಗುವುದಿಲ್ಲ. ಮತ ನೀಡಿ ಬೀದಿಗೆ ಬಂದ ರೈತರ ಪರ ಜನಪ್ರತಿನಿಧಿಗಳು ಹಿಡಿ ಶಾಪ ಹಾಕುತ್ತಾರೆ. ಕಾಂಗ್ರೆಸ್ ಶಾಸಕರು, ಸಚಿವರು ಸರ್ಕಾರಕ್ಕೆ ಮನದಟ್ಟು ಮಾಡಬೇಕಿತ್ತು. ಪ್ರಭಾವಿ ಡಿಸಿಎಂ ಅವರಿಗೆ ಹೆದರುವ ಅವಶ್ಯವಿಲ್ಲ. ನಿಷೇಧಾಜ್ಞೆ ಹೇರುವ ಅಗತ್ಯವಿಲ್ಲ. ಶಾಂತಿಯುತ ಹೋರಾಟ ನಮ್ಮದು. ಪೊಲೀಸರನ್ನು ಕರೆ ತಂದು ಬೆದರಿಸುವ ಅಗತ್ಯವಿರಲಿಲ್ಲ. ಸಾವಿರಾರು ರೈತರನ್ನು ಬರದಂತೆ ಕೂಡಾ ಮಾಡಿದ್ದಾರೆ. ಹತ್ತಿಕ್ಕುವ ಕೆಲಸ ಖಂಡನೀಯ” ಎಂದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, “650 ಕೋಟಿ ಕಾಮಗಾರಿಯನ್ನು ಸಾವಿರ ಕೋಟಿ ಎಂದು ಹೇಳಿ 350 ಕಿಕ್ ಬ್ಯಾಕ್ ಗುತ್ತಿಗೆ ಇದಾಗಿದೆ. ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿ ತನಿಖೆ ಮಾಡಬೇಕಿದೆ. ನಮ್ಮ ಶಾಸಕರ ಪರಿಸ್ಥಿತಿ ಅತ್ತ ಕೆರೆ ಇತ್ತ ಹಳ್ಳ ಎನ್ನುವಂತಿದೆ. ಶಾಸಕ ರಂಗನಾಥ್ ಅವರ ಧೈರ್ಯ ಮೆಚ್ಚುವಂತದ್ದು. ನಿಮ್ಮ ಕೆಚ್ಚು ನಮ್ಮ ಶಾಸಕರಿಗೆ ಬರಬೇಕಿದೆ. ನಿಮ್ಮ ಕಾಲು ಕೆಳಗೆ ಮೂರು ಸಾರಿ ನುಸುಳಿಸಿ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರು ದಯವಿಟ್ಟು ಈ ಕಾಮಗಾರಿ ಬಗ್ಗೆ ಕೂಲಂಕುಷ ಪರಿಶೀಲನೆ ಮಾಡಿ. ಜಿಲ್ಲಾ ಸಚಿವರು ಸರ್ವ ಪಕ್ಷಗಳ ಸಭೆ ಕರೆದು ಅಂತಿಮ ತೀರ್ಮಾನ ಮಾಡಬೇಕು ಎಂದ ಅವರು ಶಾಸಕ ರಂಗನಾಥ್ ಅವರು ಡಾಕ್ಟರ್ ಎಂದು ಹೇಳುತ್ತಾರೆ. ಹೇಗೆ ಆದರೂ ಗೊತ್ತಿಲ್ಲ. ಕುಣಿಗಲ್ ಕೆರೆಗೆ ನೀರು ಸರಾಗವಾಗಿ ಹರಿಸಿಕೊಳ್ಳದೆ ರಾಮನಗರ ಚಿಂತೆ ಮಾಡುತ್ತಿದ್ದಾರೆ. ಇದು ಅವರ ಸಂಬಂಧ ಪ್ರೀತಿ” ಎಂದು ಟೀಕಿಸಿದರು.
ಇದನ್ನೂ ಓದಿ: ತುಮಕೂರು | ಎಕ್ಸ್ಪ್ರೆಸ್ ಕೆನಾಲ್ಗೆ ಮಾಧುಸ್ವಾಮಿ ವಿರೋಧ
ಪ್ರತಿಭಟನೆಯಲ್ಲಿ ತೇವಡೆಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವಶಂಕರ ಸ್ವಾಮೀಜಿ, ಕಾರದ ಮಠದ ಶ್ರೀ ಕಾರದ ಬಸವ ಸ್ವಾಮೀಜಿ, ಮುಖಂಡರಾದ ರವಿ ಹೆಬ್ಬಾಕ, ಭೈರಪ್ಪ, ಪಂಚಾಕ್ಷರಿ, ಕೆ.ಟಿ.ಶಾಂತಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಬೆಟ್ಟಸ್ವಾಮಿ, ಚಂದ್ರಶೇಖರ ಬಾಬು, ನಿಟ್ಟೂರು ಪ್ರಕಾಶ್, ಬಲರಾಮಯ್ಯ, ರೈತ ಸಂಘದ ವೆಂಕಟೇಗೌಡ, ಸಿ.ಜಿ.ಲೋಕೇಶ್ ಇತರರು ಇದ್ದರು.