- ನಾನು ಹೇಳಿರುವುದೇ ಒಂದು, ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತಿರುವುದೇ ಒಂದು
- ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರು ತಮ್ಮ ಜನ್ಮದಿನಕ್ಕೆ ಹಂಚಿದ್ದಾರೆ
ನಾನು ಹೇಳಿರುವುದೇ ಒಂದು, ಸಾಮಾಜಿಕ ಮಾಧ್ಯಮ–ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತಿರುವುದೇ ಒಂದು. ಕುಕ್ಕರ್ ಕುರಿತ ನನ್ನ ಹೇಳಿಕೆ ಆ ರೀತಿಯ ಅರ್ಥ ಕೊಟ್ಟಿರಲೂಬಹುದು. ಆದರೆ, ಚುನಾವಣೆಗೋಸ್ಕರ ಸಿದ್ದರಾಮಯ್ಯ ಕುಕ್ಕರ್ ಕೊಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆ ಹಂಚಿಕೆ ವಿಚಾರವಾಗಿ ಎದ್ದಿರುವ ವಿವಾದದ ಕುರಿತು ಮೈಸೂರಿನಲ್ಲಿ ಶುಕ್ರವಾರ ಸ್ಪಷ್ಟನೆ ನೀಡಿದ ಅವರು, “ಕುಕ್ಕರ್ ವಿತರಣೆಯನ್ನು ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಗೂ ಮುನ್ನವೇ ಮಾಡಲಾಗಿದೆ. ಜ.26ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ವಿತರಿಸಲಾಗಿದೆ” ಎಂದರು.
“ಆ ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೊಗಳಿವೆ. ಕುಕ್ಕರ್ ಮೇಲೆ ಎಲ್ಲಿಯೂ ಸಿದ್ದರಾಮಯ್ಯ ಅವರ ಹೆಸರಾಗಲಿ ಅಥವಾ ಫೋಟೋ ಆಗಲಿ ಇಲ್ಲ. ಅಲ್ಲದೇ ನಮ್ಮ ತಂದೆಯವರು ಸ್ವತಃ ಕೈಯಿಂದಲೂ ಅವುಗಳನ್ನು ಕೊಟ್ಟಿಲ್ಲ. ಆದರೆ, ಚುನಾವಣೆಗಾಗಿ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ಹಂಚಲಾಗಿದೆ ಎಂದು ಮಾಧ್ಯಮದಲ್ಲಿ ತಿರುಚಲಾಗಿದೆ. ತಂದೆ ಅವರ ಕೈಯಿಂದ ದುಡ್ಡು ಕೊಟ್ಟು ಎಲ್ಲಿಯೂ ಹಂಚಿಲ್ಲ” ಎಂದು ವಿವರಣೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಮುಂದೆ ಬಿಜೆಪಿ ಸಂಸದರು ಬಾಯಿ ತೆಗೆಯಲು ಹೆದರುತ್ತಾರೆ: ಪ್ರಿಯಾಂಕ್ ಕಿಡಿ
“ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಮಡಿವಾಳ ಸಮುದಾಯದವರಿಗೆ ಕುಕ್ಕರ್ ಹಾಗೂ ಇಸ್ತ್ರಿಪೆಟ್ಟಿಗೆಗಳನ್ನು ಕೊಟ್ಟಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾನು ಮಾತನಾಡುವಾಗ ಸರಿಯಾಗಿ ಮಾತನಾಡಿಲ್ಲದಿರಬಹುದಷ್ಟೆ” ಎಂದು ಸಮಜಾಯಿಷಿ ನೀಡಿದರು.