ಸಾರಿಗೆ ಸಿಬ್ಬಂದಿಯೇ ಕೆಎಸ್ಆರ್ಟಿಸಿ ಡಿಸಿಗೆ ಚಾಕು ಇರಿಯಲು ಯತ್ನಿಸಿರುವ ಘಟನೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಘಟನೆಯಿಂದ ಗಾಯಗೊಂಡಿರುವ ಕೆಎಸ್ಆರ್ಟಿಸಿ ಡಿಸಿಯಾಗಿರುವ ಜಗದೀಶ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಕುವಿನಿಂದ ದಾಳಿ ಮಾಡಿರುವ ಸಾರಿಗೆ ಸಿಬ್ಬಂದಿಯನ್ನು ಜೂನಿಯರ್ ಅಸಿಸ್ಟೆಂಟ್ ರಿತೇಶ್ ಎಂದು ಗುರುತಿಸಲಾಗಿದೆ. ಗಾಯಗೊಳಿಸಿದ ನಂತರ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ರಿತೇಶ್ ಹಾಜರಾತಿ ಸರಿಯಿಲ್ಲ ಎಂದು ಕುಟುಂಬವನ್ನ ಕರೆಸಿ ಜಗದೀಶ್ ಕುಮಾರ್ ಅವರು ಕೌನ್ಸೆಲಿಂಗ್ ಮಾಡಿದ್ದರು. ಕುಟುಂಬದವರ ಮನವಿಯ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ರಿತೇಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ರಿತೇಶ್, ಇಂದು ಸಂಜೆ 7.30ರ ವೇಳೆಗೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.
ಚಾಕುವಿನಿಂದ ದಾಳಿ ಮಾಡುತ್ತಿದ್ದಾಗ ಕೈ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಕೆ.ಎಸ್.ಆರ್.ಟಿ.ಸಿ. ಡಿಸಿ ಜಗದೀಶ್ ಕುಮಾರ್ ಅವರ ಎಡಗೈನ ಎರಡು ಬೆರಳುಗಳಿಗೆ ಗಾಯವಾಗಿದೆ.
ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದ ಒಳಗೆಯೇ ಈ ಘಟನೆ ನಡೆದಿರುವುದು ಅಧಿಕಾರಿಗಳಿಗೆ ಆಘಾತ ಉಂಟು ಮಾಡಿದೆ. ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಸಿಬ್ಬಂದಿ ರಿತೇಶ್ ನಾಪತ್ತೆಯಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲೆಗಡುಕರಿಗೆ ಗಲ್ಲು ಶಿಕ್ಷೆಯನ್ನು ವಿದಿಸದಿದ್ದರೆ ಅಂತಹ ಸರ್ಕಾರದ ಆಡಳಿತದಲ್ಲಿ ನಾಗರೀಕರಿಗೆ ನೆಮ್ಮದಿ, ಶಾಂತಿ ಶಾಶ್ವತವಾಗಿ ಲಭಿಸದು.