ತಮ್ಮ ಗ್ರಾಮದ ದಲಿತರ ಕಾಲೋನಿಯಲ್ಲಿರುವ ಮಹಿಳಾ ಶೌಚಾಲಯವನ್ನು ನೆಲಸಮಗೊಳಿಸಿರುದನ್ನು ಖಂಡಿಸಿ, ಕೈಯಲ್ಲಿ ಚೆಂಬು ಹಿಡಿದು ಅಣಕು ಬಹಿರ್ದೆಸೆಗೆ ಕುಳಿತು ಕಲ್ಲೂರು ಗ್ರಾಮಸ್ಥರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿ ಕಚೇರಿ ಎದುರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ರಾಷ್ಟ್ರೀಯ ಮೂಲನಿವಾಸಿ ಬಹುಜನ ಮಹಿಳಾ ಸಂಘ ಹಾಗೂ ಬಹುಜನ ವಿದ್ಯಾರ್ಥಿ ಫೆಡರೇಷನ್ ಆಫ್ ಈಕ್ವಾಲಿಟಿ ಜಂಟಿ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಚಿಂಚೋಳಿ ತಹಶೀಲ್ದಾರ್ಗೆ ಹಕ್ಕೊತ್ತಾ ಪತ್ರ ಸಲ್ಲಿಸಿದ್ದಾರೆ.
“ತಾಲೂಕಿನ ಕಲ್ಲೂರು ಗ್ರಾಮದ ದಲಿತರ ಕಾಲೋನಿಯಲ್ಲಿರುವ ಮಹಿಳಾ ಶೌಚಾಲಯ ಕೆಡವಿ ನೆಲಸಮ ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಿ ಪುನಃ ಮಹಿಳಾ ಶೌಚಾಲಯ ನಿರ್ಮಿಸಬೇಕು. ಕುಂಚಾವರಮ, ವೆಂಕಟಾಪುರ, ಪಸ್ತಪೂರ, ಗಡಿಕೇಶ್ವರ, ಚಿಮ್ಮನಚೋಡ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
“ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮ ಪಂಚಾಯಿತಿಯಲ್ಲಿ 2021-2022 ಮತ್ತು 2022-2023ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಲ್ಲಿ ಉಂಟಾದ ಅವ್ಯವಹಾರವನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಕಲ್ಲೂರು ಗ್ರಾಮದ ಸರ್ವೆ ನಂಬರ್ 151 ಗೈರಾಣಿ ಜಮೀನಿನಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
“ಗಾರಂಪಳ್ಳಿ ಗ್ರಾಮದ ದಲಿತರ ಕಾಲೋನಿಯಲ್ಲಿ ಎರಡು ಹೈಮಾಸ್ಟ್ ದೀಪ ಅಳವಡಿಸಬೇಕು ಮತ್ತು ಡಾ. ಬಿ ಆರ್ ಅಂಬೇಡ್ಕರ್ ನಾಮಫಲಕದ ಬಳಿ ಇರುವ ಸಿ ಸಿ ಕ್ಯಾಮರಾ ದುರಸ್ತಿ ಮಾಡಬೇಕು. ತಾಡಪಳ್ಳಿ ಗ್ರಾಮದ ಜನರು ಪಸ್ತಾಪೂರ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಹೋಗಿ ಪಡಿತರ ತರಲು ಸಮಸ್ಯೆಯಾಗುತ್ತಿರುವುದರಿಂದ ತಾಡಪಳ್ಳಿ ಗ್ರಾಮದಲ್ಲಿ ಪಡಿತರ ವಿತರಣೆ ಮಾಡಲು ಸೂಚಿಸಬೇಕು” ಎಂದು ಮನವಿ ಮಾಡಿದರು.
“ಐನಾಪೂರ ಗ್ರಾಮದಲ್ಲಿ ದಲಿತರ ರುದ್ರಭೂಮಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಕೂಡಲೆ ಸಿಸಿ ರಸ್ತೆ ನಿರ್ಮಿಸಬೇಕು. ಚಿಂಚೋಳಿ ತಾಲೂಕಿನ ದೇಗಲ್ಮಡಿ ಗ್ರಾಮ ಪಂಚಾಯಿತಿಯ ದೇಗಲ್ಮಡಿ ಗ್ರಾಮದ 3 ನೇ ವಾರ್ಡ್ನಿಂದ ಹೊಸಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಕೂಡಲೆ ಡಾಂಬರೀಕರಣ ರಸ್ತೆ ಮಾಡಬೇಕು. ಕೊಳ್ಳೂರ, ಐನೊಳ್ಳಿ, ಮಿರಿಯಾಣ, ಕುಪನೂರ, ಐನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಳಪೆ ಕಾಮಗಾರಿಯ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಶೇಖರಗೌಡ ರಾಮತ್ನಾಳ
“ದೇಗಲ್ಮಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಬೇಕು. ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್ ಡ್ರೈವರ್ಗಳು ರಾತ್ರಿ ಸಮಯದಲ್ಲಿ ಟೇಪರಿಕಾರ್ಡರ್ನ ಅಧಿಕ ಶಬ್ದದೊಂದಿಗೆ ಮರಳು ಸಾಗಾಣಿಕೆ ಮಾಡುವವರಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ಆಗುತ್ತಿದೆ. ಆದ್ದರಿಂದ ಕೂಡಲೇ ಅಕ್ರಮ ಮರಳು ಮಾರಾಟ ತಡೆಯಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಿ ಕಲ್ಲೂರ, ಮಂಜುಳಾ, ಶರಣಮ್ಮಾ, ಶೀವಲೀಲಾ, ಪುಷ್ಪಾವತಿ, ಸುನೀತಾ, ಗುಣವಂತಿ, ಸಂಗೀತಾ, ಕವಿತಾ, ಚೆನ್ನಮ್ಮಾ, ರತ್ನಮ್ಮಾ, ನೀಲಮ್ಮಾ, ಮಾರುತಿ ಗಂಜಗಿರಿ ಸೇರಿದಂತೆ ಬಹುತೇಕರು ಇದ್ದರು.