ಏ.30 ರಂದು ಕಲಬುರಗಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಲು ಶನಿವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜಗತ್ ವೃತ್ತದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಮತ್ತು ವೇದಿಕೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು, ಆಮಂತ್ರಣ ಪತ್ರಿಕೆ ಸಿದ್ದಪಡಿಸಿ ಗಣ್ಯರಿಗೆ ಮುಂಚಿತವಾಗಿ ವಿತರಿಸಲು ಮತ್ತು ಉಪನ್ಯಾಸಕರನ್ನು ನಿಯೋಜಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ʼಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಏಪ್ರಿಲ್ 30 ರಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ವಹಿಸಬೇಕು. ಕಲಬುರಗಿ ನಗರದಲ್ಲಿ ಜಿಲ್ಲಾಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಲೋಪದೋಷವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜಗತ್ ವೃತ್ತ ಮತ್ತು ಬಸವೇಶ್ವರ ಪ್ರತಿಮೆ ಸುತ್ತ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು ಮತ್ತು ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕುʼ ಎಂದರು.
ಅಫಜಲಪುರ ಶಾಸಕ ಮತ್ತು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿರುವ ಎಂ.ವೈ.ಪಾಟೀಲ ಮಾತನಾಡಿ, ʼಜಯಂತಿ ಆಚರಣೆಗೆ ಯಾರ ಬಳಿಯು ಚಂದಾ ಹಣ ಎತ್ತದೆ ಕಲಬುರಗಿಯಲ್ಲಿ ಎಲ್ಲ ಸಮಾಜದವರನ್ನು ಸೇರಿಸಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆಗೆ ನಿರ್ಧರಿಸಿದ್ದು, ಸಮಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣನವರ ಚಿಂತನೆಗಳನ್ನು ರಾಜ್ಯದುದ್ದಕ್ಕೂ ತಲುಪುವಂತೆ ಮಾದರಿಯಾಗಿ ಜಯಂತಿ ಕಾರ್ಯಕ್ರಮಕ್ಕೆ ರೂಪುರೇಷ ಸಿದ್ದಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಶರಣರ 100 ವಚನಗಳನ್ನು ಒಳಗೊಂಡ ಕಿರುಪಸ್ತಕ ಹಂಚಲಾಗುವುದುʼ ಎಂದರು.
ಕರ್ನಾಟಕ ಪರಿಸರ ಮಾಲಿನ ನಿಯಂತ್ರಣ ಮಂಡಳಿ ಸದಸ್ಯರು ಮತ್ತು ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ಮಾತನಾಡಿ, ʼಬಸವ ಜಯಂತಿ ಅಂಗವಾಗಿ ಏ.29 ರಂದು ಅಪ್ಪ ಜಾತ್ರೆ ಮೈದಾನದಲ್ಲಿ ಸಮಾಜದ ಸಮಾವೇಶ ಮಾಡಲಾಗುತ್ತಿದ್ದು, ಸುಮಾರು 25 ಸಾವಿರ ಜನಸಂಖ್ಯೆ ಬರುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಕಡೆ ಗಮನ ಹರಿಸಬೇಕು. ವಿಶೇಷವಾಗಿ ಜಗತ್ ವೃತ್ತ ಮತ್ತು ಬಸವಣ್ಣನವರ ಪ್ರತಿಮೆ ಸುತ್ತ ಸೌಂದರ್ಯೀಕರಣ ಕೆಲಸಗಳು ಆಗಬೇಕು. ಏ.30 ರಂದು ಸಂಜೆ 4 ಗಂಟೆಗೆ ನಗರೇಶ್ವರ ಶಾಲೆಯಿಂದ ಬಸವಣ್ಣನವರ ಮತ್ತು ಬಸವಾದಿ ಶರಣರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯುದ್ದಕ್ಕೂ ಅಗತ್ಯ ಕ್ರಮ ವಹಿಸಬೇಕುʼ ಎಂದರು.
ಕಲಬುರಗಿಗೆ ಏಪ್ರಿಲ್ 24 ರಂದು ರಥಯಾತ್ರೆ:
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇದೇ ಏಪ್ರಿಲ್ 29 ಮತ್ತು 30 ರಂದು ಎರಡು ದಿನಗಳ ಕಾಲ ʼಅನುಭವ ಮಂಟಪ-ಬಸವಾದಿ ಶರಣರ ವೈಭವʼ ಕಾರ್ಯಕ್ರಮ ಆಯೋಜಿಸಿದ ಪ್ರಯುಕ್ತ ನಾಡಿನಾದ್ಯಂತ ವ್ಯಾಪಕ ಪ್ರಚೂರಪಡಿಸಲು ಹೊರಟಿರುವ ರಥಯಾತ್ರೆಯು ಏಪ್ರಿಲ್ 24 ರಂದು ಬೆಳಿಗ್ಗೆ ಕಲಬುರಗಿ ನಗರಕ್ಕೆ ಆಗಮಿಸಲಿದ್ದು, ಅಂದು ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ರಥಕ್ಕೆ ಸ್ವಾಗತ ಕೋರಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಮಾತನಾಡಿ, ʼರಾಜ್ಯದಲ್ಲಿಯೆ ಕಲಬುರಗಿ ಬಸವ ಜಯಂತಿ ಮಾದರಿಯಾಗಿ ಆಚರಿಸಲಾಗುವುದು, ಎಲ್ಲರು ಒಮ್ಮತದಿಂದ ಸಹಕರಿಸಬೇಕುʼ ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ ಎಕ್ಸ್ಕ್ಲೂಸಿವ್ ಬ್ರೇಕಿಂಗ್ ನ್ಯೂಸ್: ಮುನಿರತ್ನ ವಿರುದ್ಧ ಚಾರ್ಜ್ಶೀಟ್ ಹಾಕಲು ಸ್ಪೀಕರ್ ಅನುಮತಿ!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಪರ ಜಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರ ಪೊಲೀಸ್ ಉಪ ಅಯುಕ್ತ ಪ್ರವೀಣ ಹೆಚ್. ನಾಯಕ್, ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ, ಜೆಸ್ಕಾಂ ಇಇ ವೀರಭದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ಸಮಾಜದ ಮುಖಂಡರಾದ ಎ.ಕೆ.ರಾಮೇಶ್ವರ, ಭೀಮಪ್ಪ ಬೋನಾಳ, ಡಾ.ವಿಶಾಲಾಕ್ಷ ಕರಡಿ, ಡಾ.ಸುಧಾ ಹಾಲಕಾಯಿ, ಸುನೀಲ ಮಾನ್ಪಡೆ, ಮಹೇಶ ಹುಬ್ಳಿ, ರವಿಂದ್ರ ಶಾಬಾದಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.