ರಾಜ್ಯ ಹೆದ್ದಾರಿ ಸಂಖ್ಯೆ 126ರ ಸೇತುವೆ ಕುಸಿತ ಉಂಟಾಗಿದ್ದು, ಎರಡು ತಿಂಗಳಾದರೂ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ರಾಜ್ಯ ಹೆದ್ದಾರಿ ಸಂಖ್ಯೆ 126ರ ರಸ್ತೆಮಾರ್ಗ ಕಮಲಾಪುರದಿಂದ ಜೀವಣಗಿ, ರಟಗಲ್, ಟೆಂಗಳಿ ಕ್ರಾಸ್, ಚಿತ್ತಾಪುರ, ಚಿಂಚೋಳಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆ ಮಧ್ಯೆ ಕಮಲಾಪುರದಿಂದ 500ಮೀಟರ್ ದೂರದಲ್ಲಿ ಸೇತುವೆಯಿದೆ. ಆ ಸೇತುವೆ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜೀವಣಗಿ, ರಟಗಲ್, ಟೆಂಗಳಿ ಕ್ರಾಸ್, ಚಿತ್ತಾಪುರ, ಚಿಂಚೋಳಿ ಗ್ರಾಮ ತಾಲೂಕುಗಳಿಗೆ ಸಂಚರಿಸಲು ಅದೊಂದೆ ಮಾರ್ಗವಾಗಿತ್ತು. ಈ ರಸ್ತೆ ಮೂಲಕ ನಿರಂತರವಾಗಿ ಬೃಹತ್ ವಾಹನಗಳಾದ ಬಸ್, ಲಾರಿ, ಗೂಡ್ಸ್ ವಾಹನಗಳು ಮತ್ತು ದ್ವಿಚಕ್ರ ವಾಹನ ಸಾವಿರಾರು ಈ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದರೂ ಸೇತುವೆ ಕುಸಿದು ಬಿದ್ದು ವಾಹನ ಸಾವರರು ತುಂಬಾ ತೊಂದರೆ ಎದುರಿಸುತ್ತಿರುವುದು ಕಂಡುಬಂದಿದೆ.
“ಸೇತುವೆ ಬಿದ್ದಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೇತುವೆ ವೀಕ್ಷಿಸಿ ಕಮಲಾಪುರ ತಹಶೀಲ್ದಾರ್ ಅವರಿಗೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಸೂಚಿಸಿದರು. ಆದರೆ ಈವರೆಗೆ ಸೇತುವೆ ನಿರ್ಮಾಣದ ಕುರಿತು, ತಾತ್ಕಾಲಿಕ ರಸ್ತೆ ಕುರಿತು ಅಧಿಕಾರಿಗಳು ಯಾವುದೇ ಕಾಮಗಾರಿ ನಡೆಸಿರುವುದಿಲ್ಲ. ಸೇತುವೆ ಬಿದ್ದು ತಿಂಗಳಾದರೂ ಅಧಿಕಾರಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದರು.

ದಲಿತ ಮುಂಖಡ ವಿದ್ಯಾಧರ್ ಮಾಳಗೆ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಕಮಲಾಪುರದಿಂದ ಜೀವಣಗಿಗೆ ಹೋಗುವ ರಸ್ತೆ ಮಧ್ಯೆಯ ಸೇತುವೆ ಬಿದ್ದು ಎರಡು ತಿಂಗಳಾಗಿದೆ. ಸುಮಾರು ಇಪ್ಪತ್ತೈದು ಗ್ರಾಮಗಳಿಗೆ ಮತ್ತು ತಾಲೂಕು ಚಿಂಚೋಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹಲವಾರು ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಈ ರಸ್ತೆ ಮೂಲಕ ಬರುತ್ತಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಬೈಕ್ ಸವಾರರು ಸೇತುವೆ ಬಿದ್ದಿರುವ ಮಾಹಿತಿ ತಿಳಿಯದೆ ರಾತ್ರಿಹೊತ್ತು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳಿವೆ. ರಸ್ತೆ ದುರಸ್ತಿ ಮಾಡಲು ಮೆಟೀರಿಯಲ್ ತಂದುಹಾಕಿ ತಿಂಗಳಾಗುತ್ತ ಬಂತು ಯಾವುದೇ ಕಾಮಗಾರಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ವಿಚಾರ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಮಟೀರಿಯಲ್ ತಂದು ಹಾಕಿದ್ದಾರೆ ಕಾಮಗಾರಿ ಶುರುವಾಗುತ್ತದೆಂದು ಕುಂಟುನೆಪ ಹೇಳುತ್ತಿದ್ದಾರೆ” ಎಂದು ದೂರಿದರು.
“ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೀವ್ರವಾದ ಹೋರಾಟದ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ದಸಂಸ ತಾಲೂಕು ಸಂಚಾಲಕ ವಿಜಯಕುಮಾರ್ ಟೈಗರ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಬ್ರಿಡ್ಜ್ ಬಿದ್ದು ಸುಮಾರು ಎರಡು ತಿಂಗಳಾಗಿದೆ. ಈ ರಸ್ತೆ ಮೂಲಕ ಬುಯಾರ್, ಜಿವಣಗಿ, ಬೆಲೂರು, ರಟಗಲ್, ಅಣಕಲ್, ಚಿಂಚೋಳಿ, ಚೆಂಗಟ, ಚಂದನಕೇರಾ ಕಲಮೋಡ್, ಈ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಈ ಸೇತುವೆ ಬಿದ್ದಿದು ಎಲ್ಲಾ ಅಧಿಕಾರಿಗಳು ವೀಕ್ಷಿಸಿದ್ದಾರೆ. ಪಟ್ಟಣ ಪಂಚಾಯತ್ ಅವರು ಮೂರು ದಿನಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆಂದು ಸುಳ್ಳು ಆಶ್ವಾಸನೆ ನೀಡಿದ್ದಾರೆ” ಎಂದು ಆರೋಪಿಸಿದರು.
“ಸೇತುವೆ ಬಿದ್ದು ತಿಂಗಳಾದರೂ ಏನಾಗಿದೆಯೆಂದು ಬಂದು ನೋಡುವ ಕನಿಷ್ಠ ಸೌಜನ್ಯವಿಲ್ಲ” ಎಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಸೇತುವೆ ದುರಸ್ತಿಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಸೇತುವೆ ಬಿದ್ದು ಇಷ್ಟು ದಿನಗಳಾದರೂ ಸೇತುವೆ ನಿರ್ಮಾಣ, ತಾತ್ಕಾಲಿಕ ರಸ್ತೆ ನಿರ್ಮಾಣ ಕುರಿತು ವಿಚಾರಿಸಿಲ್ಲ. ಮುಂದೇನಾದರೂ ಅನಾಹುತಗಳಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ. ಆದಷ್ಟು ಬೇಗಾ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಿರೆಪ್ಪ ಬೆಳಕೋಟಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸೇತುವೆ ಬಿದ್ದು ಎರಡೂವರೆ ತಿಂಗಳಾಗಿದೆ. ತಾಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ತೊರುತ್ತಿದ್ದಾರೆ. ಏಜೆನ್ಸಿಯವರು ಮೆಟೀರಿಯಲ್ ತಂದು ಹಾಕಿ ತಿಂಗಳುಗಳೇ ಕಳೆದಿವೆ. ಆದರೆ ಯಾವುದೇ ದುರಸ್ತಿ ಕಂಡಿಲ್ಲ. ಸೇತುವೆ ಬಿದ್ದಾಗ ಸಚಿವ ಕೃಷ್ಣಬೈರೇಗೌಡರು ಬಂದು ವೀಕ್ಷಿಸಿದ್ದಾರೆ. ಸರ್ವಾಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಸೇತುವೆ ಬಿದ್ದಿರುವ ಮಾಹಿತಿ ತಿಳಿಯದೆ ಚೆಂಗಟ ತಾಂಡದ ವ್ಯಕ್ತಿಯೊಬ್ಬರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೋಣೆ? ಈ ಘಟನೆ ಮರುಕಳಿಸದಂತೆ ಆದಷ್ಟು ಬೇಗಾ ಸೇತುವೆ ನಿರ್ಮಾಣ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಕಮಲಾಪುರ್ ತಹಶೀಲ್ದಾರ್ ಮಹಮ್ಮದ್ ಮೋಸಿನ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನಿರಂತರ ಸಂಪರ್ಕ ಮಾಡುತ್ತಿದ್ದೇನೆ. ಮೆಟೀರಿಯಲ್ ತಂದು ಹಾಕಿದ್ದಾರೆ. ಕೆಲಸಗಾರರು ಸಿಗುತ್ತಿಲ್ಲ. ಹಬ್ಬ ಮುಗಿದ ಬಳಿಕ ಮಾಡುತ್ತೇವೆಂದು ಕೆಲಸ ಆರಂಭಿಸುವುದಾಗಿ ಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ. ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಎಸ್ಟಿಮೇಟ್ ಹೆಚ್ಚಿಗೆ ಮಾಡಿರುವುದರಿಂದ ತಾತ್ಕಾಲಿಕ ಕಾಮಗಾರಿ ನಡೆಸದೆ ಪರಮನೆಂಟ್ ಸೇತುವೆ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಾರು ಅಡ್ಡ ಹಾಕಿದ್ದಕ್ಕೆ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನೇ ಎಳೆದೊಯ್ದ ಚಾಲಕ!
“ಕೃಷ್ಣಬೈರೇಗೌಡ ಅವರು ತಾತ್ಕಾಲಿಕವಾಗಿ ನಿರ್ಮಾಣ ಮಾಡಲು ತಿಳಿಸಿದರು. ತಾತ್ಕಾಲಿಕ ಮಾಡಬೇಕೆಂದರೆ ನಮಗೆ ಪವರ್ ಇರೋದು ಬರೀ ಒಂದು ಲಕ್ಷ ಬಜೆಟ್ ಮಾತ್ರ. ಆ ಬಜೆಟ್ನಲ್ಲಿ ಮಾಡುವುದು ಅಸಾಧ್ಯ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮೂವತ್ತು ಲಕ್ಷ ಎಸ್ಟಿಮೇಟ್ ಆಗುತ್ತೆ. ಹಾಗಾಗಿ ಪಿಡಬ್ಲ್ಯೂಡಿ ಇಲಾಖೆಯವರು ಮೂರು ಕೋಟಿ ಎಸ್ಟಿಮೇಟ್ ಬಜೆಟ್ನಲ್ಲಿ ಕಾಂಕ್ರೀಟ್ ಸಿಮೆಂಟ್ನಲ್ಲಿ ಪರಮನೆಂಟ್ ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ” ಎಂದು ತಿಳಿದರು.
ಪಿಡಬ್ಲ್ಯೂಡಿ ಎಇಇ ಪಟ್ಟಣಶೆಟ್ಟಿ ಮಾತನಾಡಿ, “ಪ್ರೊಸೀಜರ್ ತಡವಾದ ಕಾರಣ ಸೇತುವೆ ನಿರ್ಮಾಣ ಮಾಡುವುದು ತಡವಾಗಿದೆ ಮಟೀರಿಯಲ್ ತಂದು ಹಾಕಿದ್ದೇವೆ. ಈ ವಾರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಶುರು ಮಾಡುತ್ತೇವೆ” ಎಂದು ತಿಳಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.