ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮ ಸಮೀಪ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜು.30ರಂದು ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಸಂಶಯಾಸ್ಪದವಾಗಿದ್ದು, ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ವಿಶ್ವವಿದ್ಯಾಲಯ ಎದುರುಗಡೆ ಪ್ರತಿಭಟನೆ ನಡೆಯಿತು.
ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ, ಡಿವೈಎಫ್ಐ, ದಲಿತ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು.
ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ʼಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಅನೇಕ ತೊಂದರೆಗಳು ಅನುಭವಿಸುತ್ತಿದ್ದರೂ ವಿವಿ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿಂದೆ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಜರುಗಿತು. ಅದಾದ ನಂತರ ಎಚ್ಚೆತುಕೊಂಡರೆ ಜಯಶ್ರೀ ನಾಯಕ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲʼ ಎಂದರು.
‘ವಿದ್ಯಾರ್ಥಿನಿ ಜಯಶ್ರೀ ನಾಯಕ ಆತ್ಮಹತ್ಯೆಗೆ ಕಾರಣ ಏನೆಂಬುದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಇಂತಹ ಅನೇಕ ಘಟನೆಗಳು ನಡೆದರೂ ಇಲ್ಲಿನ ಕುಲಪತಿ ಅವರು ಪ್ರಕರಣಗಳು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳು ವಿವಿ ಸುಧಾರಣೆ ಮಾಡದೆ ಆರ್ಎಸ್ಎಸ್, ಭಜರಂಗದಳ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆʼ ಎಂದು ಆರೋಪಿಸಿದರು.

ಜನಾವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ʼವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಶಿಕ್ಷಕರೇ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿನಿ ಜಯಶ್ರೀ ಸಾವಿಗೂ ಮುನ್ನ ತನ್ನ ನೋವು ಇಲ್ಲಿನ ಪ್ರಾಧ್ಯಾಪಕರೊಬ್ಬರ ಮುಂದೆ ತೊಡಿಕೊಂಡಿದ್ದಳು. ಆದರೂ, ವಿದ್ಯಾರ್ಥಿನಿಯ ನೋವಿಗೆ ಸ್ಪಂದಿಸದಕ್ಕೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಸಾವು ತೀವ್ರವಾಗಿ ಖಂಡಿಸುತ್ತೇವೆʼ ಎಂದರು.
ಡಿವೈಎಫ್ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ ಮಾತನಾಡಿ, ʼಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಸ್ಪರ ಮಾತನಾಡುವ ಸ್ವಾತಂತ್ರ್ಯವೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಆಲಿಸಬೇಕಾದ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆʼ ಎಂದು ದೂರಿದರು.
ಮನವಿ ಪತ್ರ ಸ್ವೀಕರಿಸಲು ಕುಲಪತಿ ಅವರೇ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕುಲಪತಿ ಅವರು ಸಭೆಯಲ್ಲಿ ಇದ್ದಾರೆಂದು ಪೊಲೀಸರ ಮುಖಾಂತರ ತಿಳಿಸಿದ ಬಳಿಕ ಪ್ರತಿಭಟನಾಕಾರರು ವಿವಿ ಮುಖ್ಯದ್ವಾರ ಬಂದ್ ಮಾಡಿ ಕುಲಪತಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ.ಆರ್.ಆರ್.ಬಿರಾದಾರ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು.
‘ಕೇಂದ್ರೀಯ ವಿವಿಯಲ್ಲಿ ಕೋಮುವಾದಿ ಚಟುವಟಿಕೆಗಳು ನಡೆಯಲು ನಿಮ್ಮದೇ ಕುಮ್ಮಕ್ಕು ಮತ್ತು ನೇರ ಭಾಗಿದಾರಿಕೆ ಇದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಈ ಹಿಂದೆ ಲೈಂಗಿಕ ದೌರ್ಜನ್ಯ ನಡೆದ ವಿದ್ಯಾರ್ಥಿನಿ ದೂರನ್ನು ಯಾಕೆ ಮುಚ್ಚಿ ಹಾಕಿದ್ದು, ವಿವಿ ಆವರಣದಲ್ಲಿ ಗೋರಿ ನಿರ್ಮಾಣ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದ್ದು ಹೇಗೆ ಅವಕಾಶ ನೀಡಿದ್ದೀರಾ ಎಂದು ಪ್ರತಿಭಟನಾಕಾರರು ಕುಲಸಚಿವ ಆರ್ .ಆರ್.ಬಿರಾದರ್ ಅವರನ್ನು ಪ್ರಶ್ನಿಸಿದರು. ʼನಾವು ಯಾವುದಕ್ಕೂ ಅವಕಾಶ ನೀಡಲಿಲ್ಲʼ ಎಂದು ಸಮಜಾಯಿಸಿ ನೀಡಿದರು.
ಇದನ್ನೂ ಓದಿ : ವ್ಯಕ್ತಿ ಚಿತ್ರ | ಕೊನೆ ದಿನಗಳಲ್ಲೂ ದೃಢ ದನಿ ಎತ್ತಿ, ಹಿಂಸೆಗೆ ಗುರಿಯಾಗಿ ಮರೆಯಾದ ಮಲಿಕ್
ಪ್ರತಿಭಟನೆಯಲ್ಲಿ ಡಾ.ಪ್ರಭು ಖಾನಾಪುರೆ, ಮಹೇಶಕುಮಾರ್ ರಾಠೋಡ್, ಭೀಮಶಂಕರ ಮಾಡಿಯಾಳ, ಪದ್ಮಿನಿ ಕಿರಣಗಿ, ಸುಜಾತ ವೈ, ಸರ್ವೇಶ್ ಮಾವಿನಕರ, ಸಲ್ಮಾನ್ ದೆವಂತಗಿ, ಪ್ರಮೋದ ಪಾಂಚಾಳ, ಪಾಂಡುರಂಗ ಮಾವಿನಕರ್, ವಿಜಯಲಕ್ಷ್ಮಿ ಗಡ್ಡೆ, ಚಂದಮ್ಮ ಗೋಳಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.