ಯಾದಗಿರ ಜಿಲ್ಲೆಯ ಪಿ.ಎಸ್.ಐ ಪರಶುರಾಮ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕುವಂತೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದಲಿತ ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಪಿ.ಎಸ್.ಐ ಪರಶುರಾಮ ರವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಹಾಗಯ ಆಳಂದ ತಾಲೂಕಿನಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯನ್ನು ಅವಮಾನಿಸಿದ ಕುಲಪತಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.
ಬಳಿಕ ದಲಿತ ಸೇನೆಯ ಮುಖಂಡರು ತಹಶೀಲ್ದಾರ್ ಅವರ ಮುಖಾಂತರ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿದ ಬಳಿಕ ಅಧ್ಯಕ್ಷ ಧರ್ಮಾ ಜಿ. ಬಂಗರಗಿ ಮಾತನಾಡಿ, “ಕರ್ನಾಟಕದಲ್ಲಿ 1.4 ಕೋಟಿ ದಲಿತರು ಇದ್ದರೂ ಕೂಡಾ ದಲಿತರರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರನ್ನು ತಮಗೆ ಬೇಕಾದ ಹಾಗೆ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ದಲಿತರ ಯೋಜನೆಗಳು ಹಾಗೂ ದಲಿತರ ಅನುದಾನ ದುರ್ಬಳಕೆ ಮಾಡಿಕೊಂಡು ದಲಿತರ ದಮನ ಮಾಡುವ ಕುತಂತ್ರ ನಡೆಯುತ್ತಿದೆ” ಎಂದು ದೂರಿದರು.
ಪಿ.ಎಸ್.ಐ ಪರಶುರಾಮ ಅವರನ್ನು ಮಾನಸಿಕ ಹಿಂಸೆ ನೀಡಿ ವರ್ಗಾವಣೆಗಾಗಿ ಅಲ್ಲಿನ ಶಾಸಕ ಮತ್ತು ಅವನ ಮಗನ ಹಿಂಸೆ ತಾಳಲಾರದೆ ಮಾನಸಿಕ ಒತ್ತಡಕ್ಕೆ ಸಿಲುಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕುಲಪತಿಯವರು ಬೀಳ್ಕೊಡುಗೆ ಸಮಾರಂಭದಲ್ಲಿ ದಲಿತ ವಿದ್ಯಾರ್ಥಿಯಾದ ನಂದಪ್ಪಾ ಅವರನ್ನು ದ್ವಾರದಲ್ಲಿಯೇ ತಡೆದು ಜಾತಿ ನಿಂದನೆ ಮಾಡಿರುವುದು ಖಂಡನೀಯ. ಕುಲಪತಿ, ಪ್ರೊಫೆಸರ್ ಮೇಲೆ ಕೇಸು ದಾಖಲಾಗಿದ್ದರೂ ಕೂಡ ಅವರನ್ನು ಬಂಧಿಸಿಲ್ಲ ಎಂದ ಅವರು, ವಿಶ್ವ ವಿದ್ಯಾಲಯದಲ್ಲಿ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟುವಂತೆ ಆಗ್ರಹಿಸಿದರು.
ಎಲ್ಲ ಬೇಡಿಕೆಗಳನ್ನು ಈಡೇರಿಸಲು ದಲಿತ ಸೇನೆ ರಾಮ ವಿಲಾಸ ಸಂಘಟನೆ ತಾಲೂಕು ಸಮಿತಿಯ ವತಿಯಿಂದ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀಮಾಶಂಕರ ತಳಕೇರಿ, ಶರಣು ಕವಲಗಾ, ದಿಲೀಪ್ ಮಂಟಗಿ, ರೇವಣಸಿದ್ಧ ಮಂಡ್ಲೆ, ಅಶೋಕ್ ಮೋಘಾ, ಮಲ್ಲಿನಾಥ್ ಚಿಂಚೋಳಿ, ಲಕ್ಷ್ಮಣ ನಿಂಬಾಳಕರ, ಮಂಜು ಸಿಂಗೆ, ಲಕ್ಷ್ಮಣ ಸಂಗೋಳಗಿ, ಸಂದೀಪ್ ಆಯಾ ಜಂಗಲ್, ಶಾಂತಪ್ಪಾ ಜಿಡಾಗ, ಶಶಿಕಾಂತ್ ಮುನ್ನೊಳ್ಳಿ, ಕಾರ್ತಿಕ್ ಕಟ್ಟಿಮನಿ, ಕೃಷ್ಣಪ್ಪ ರಂಜುಣಗಿ, ಬಾಬುರಾವ ಅರುಣೋದಯ, ಮಾದೇವ ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.
