ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ತಾಲೂಕಾ ಸಮಿತಿ ಸೇಡಂ ನೇತೃತ್ವದಲ್ಲಿ ದಲಿತರ ಭೂಮಿ-ವಸತಿ ಹಕ್ಕಿಗಾಗಿ ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನಾ ಧರಣಿ ನಡೆಸಿ ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಮಾರುತಿ ಹುಳಗೋಳಕರ ಮಾತನಾಡಿ, ʼಭೂಮಿ ಒಂದು ಉತ್ಪಾದನಾ ಸಾಧನವಾಗಿದ್ದು, ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗಗಳ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ಆದರೆ ತಲಾತಲಾಂತರಗಳಿಂದ ದಲಿತರನ್ನು ಭೂಮಿ, ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಲೇ ಬಂದಿದ್ದಾರೆ, ಅಂಬೇಡ್ಕರ್ ಅವರ ಅಂದೋಲನದಿಂದಾಗಿ ದಲಿತ ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಾಹ್ಮಣಶಾಹಿ ಬಂಡವಾಳಶಾಹಿಗಳಿಗೆ ನುಂಗಲಾರದ ತುತ್ತಾಗಿದೆʼ ಎಂದು ಆಕ್ರೋಶ ಹೊರಹಾಕಿದರು.
ʼಕಳೆದ ನಾಲ್ಕು ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿದ್ದರು ಸಹ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ11ರಷ್ಟು ಭೂಮಿ ಮಾತ್ರ ಹೊಂದಿದ್ದಾರೆʼ ಎಂದರು.
“70ರ ದಶಕದಲ್ಲಿ ಬಿ.ಬಸವಲಿಂಗಪ್ಪನವರ ದೂರದೃಷ್ಟಿಯ ಫಲದಿಂದ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದರೂ ಸಹ ಜಾತಿವಾದಿಗಳು ಹಾಗೂ ಅಧಿಕಾರ ಶಾಹಿ ಕುತಂತ್ರದಿಂದ ಸರ್ಕಾರವು ಪಿಟಿಸಿಎಲ್ ಜಮೀನುಗಳ ಪ್ರಕರಣದಲ್ಲಿ ದಲಿತ ಸಮುದಾಯಗಳು ಕೋರ್ಟ್ಗೆ ಅಲೆದಾಡಿ ವಂಚನೆಗೆ ಒಳಗಾಗಿದ್ದಾರೆʼ ಎಂದು ದೂರಿದರು.
ʼಫಾರಂ 50, 53, 57ರ ಅಡಿ ಅರ್ಜಿ ಸಲ್ಲಿಸಿದ ಬಗರ್ ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಹೈಕೋರ್ಟ್ಗಳಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾಗೊಳ್ಳುತ್ತಿದ್ದು, ನುರಿತ ವಕೀಲರನ್ನು ನೇಮಿಸಿ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ನಿರ್ವಹಣೆಗೆ ಸರ್ಕಾರ ಸ್ಥಾಪಿಸಿರುವ ಡಿಸಿಆರ್ಇ ಪೊಲೀಸ್ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯ ಒದಗಿಸಬೇಕು’ ಎಂದರು.
ಇದನ್ನೂ ಓದಿ : ಯಾದಗಿರಿ | ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಾಜು ಡಿ.ಟಿ, ನರಸಪ್ಪ ಸಕ್ಪಾಲ್, ಅಶೋಕ ಬೇಡಕಪಳ್ಳಿ, ನಾಗೇಶ ದೊಡ್ಡಮನಿ, ಪ್ರವೀಣ ಕುಮಾರ್ ಮಂತ್ರಿ, ಓಂಕಾರ ಸೂರವಾರ, ಗೌತಮಿ ಜಮಾದಾರ, ರಂಗಮ್ಮ ಜಾಪನೂರ, ತುಳಜಮ್ಮ ಆಡಿನ ಮನಿ, ಭಾಗ್ಯಶ್ರೀ ಜಾಪನೂರ, ಮಲ್ಲಮ್ಮ ಆಡಿನ, ಚಂದ್ರಕಲಾ ಕೊಡ ದೂರ, ಶೀಲಾ ಕೇರೋಳ್ಳಿ, ಅನುಸೂಯ ಕೋರವಾರ, ತುಳಜಮ್ಮ ಜಾಪನೂರ, ಮಮತಾ ಜಾಪನೂರ, ಸುನೀತಾ ಆಡಿನ ಇನ್ನಿತರರು ಭಾಗವಹಿಸಿದ್ದರು.