ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ದೇವನಹಳ್ಳಿಯಲ್ಲಿ ನಡೆಯುತ್ತಿದ್ದ ಬಲವಂತದ ಭೂಸ್ವಾಧೀನ ವಿರೋಧಿ ರೈತ-ಹೋರಾಟಗಾರರನ್ನು ಬಂಧಿಸಿದ ಪೊಲೀಸರ ದೌರ್ಜನ್ಯ ಖಂಡಿಸಿ ಸಿಪಿಐ(ಎಂ) ಮುಖಂಡರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.
ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
‘ಕಳೆದ 1,177 ದಿನಗಳಿಂದ ಶಾಂತಿಯುತವಾಗಿ ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ 13 ಗ್ರಾಮಗಳ ರೈತರು ನಡೆಸಿದ ವಿವಿಧ ಮಾದರಿಯ ಹೋರಾಟಕ್ಕೆ ಸರಕಾರ ಕಿವಿಕೊಡದ ಕಾರಣದಿಂದಾಗಿ ಬುಧವಾರ (ಜೂ.26) ದೇವನಹಳ್ಳಿ ಸಂತೇಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಗಳ ಸಾವಿರಾರು ಜನ ಸೇರಿದ್ದರು. ಈ ಹೋರಾಟಕ್ಕೆ ಬೆಂಬಲಿಸಿ ರಾಜ್ಯದ ಪ್ರಮುಖ ಕಾರ್ಮಿಕ ಸಂಘಟನೆಗಳ ನಾಯಕರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
‘ಸರಕಾರದಿಂದ ಭೂ ಸ್ವಾಧೀನದ ಆದೇಶವನ್ನು ಹಿಂತೆಗದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವ ತೀರ್ಮಾನಕ್ಕೆ ಬರಲಾಗಿತ್ತು. ಇಡೀ ದಿನ ಶಾಂತಿಯುತವಾಗಿ ನಡೆದ ಹೋರಾಟದ ವೇದಿಕೆಗೆ ಸಂಜೆಯ ವೇಳೆಗೆ ಏಕಾಏಕಿ ನುಗ್ಗಿದ ಪೊಲೀಸರು 5 ಘಂಟೆಯ ನಂತರ ಪ್ರತಿಭಟನೆಗೆ ಅವಕಾಶವಿಲ್ಲ, ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಹಾಗಿಲ್ಲ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಿರೆಂದು ಹೇಳಿ ವೇದಿಕೆಯಲ್ಲಿ ಇರುವವರನ್ನು ಎಳೆದಾಡಿ ಬಂಧಿಸಿದ ರೀತಿ ಖಂಡನೀಯʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ರೈತ ವಿರೋಧಿ ಸಂವಿಧಾನದ ಹಕ್ಕುಗಳ ವಿರೋಧಿ ಅನ್ನಕ್ಕೆ ಕೈಹಾಕಿ ಭೂ ಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು. ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವ ಕ್ರಮವನ್ನು ಕೈಬಿಡಬೇಕು. ಒಂದು ವೇಳೆ ಕೈಬಿಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಉಗ್ರವಾದ ಹೋರಾಟ ರೂಪಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಬಿಎಸ್ಎಸ್ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ
ಈ ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಸಮಿತಿ ಕಲಬುರಗಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹಾಗೂ ಪ್ರಮುಖರಾದ ಎಂ.ಬಿ.ಸಜ್ಜನ್, ಭೀಮಾಶಂಕರ ಮಾಡಿಯಾಳ, ಸಿಐಟಿಯು ಶಾಂತಾ ಘಂಟೆ, ಅರ್ಜುನ ಗೊಬ್ಬುರು, ಮಹೇಶ್ ಎಸ್.ಬಿ, ಸಿಐಟಿಯು ಗೌರಮ್ಮ ಪಾಟೀಲ್, ಮಲ್ಲಿಕಾರ್ಜುನ ಕಲ್ಲೂರ್, ಸುನಿಲ್ ಪಾಟೀಲ್, ಸಾಜಿದ ಅಹ್ಮದ್ ದಿಗ್ಗಾಂವಕರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ನೀಲಾ ಕೆ, ಪಾಂಡುರಂಗ ಮಾವಿನಕರ್, ಸುಧಾಮ, ಲವಿತ್ರಾ ಮತ್ತಿತರರು ಪಾಲ್ಗೊಂಡಿದ್ದರು.