ಹುಬ್ಬಳ್ಳಿಯ ಅಂಜಲಿ ಅಂಬಿಗರ, ನೇಹಾ ಹಿರೇಮಠ ಹಾಗೂ ಯಾದಗಿರಿಯ ರಾಕೇಶ್ ಹತ್ಯೆ ಮತ್ತು 10ನೇ ತರಗತಿ ವಿದ್ಯಾರ್ಥಿನಿ ಮೀನಾ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು ತಾಲೂಕು ದಂಡಾಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಡಿಎಸ್ಎಸ್ ತಾಲೂಕು ಸಂಚಾಲಕ ಸಿದ್ದರಾಮಕಟ್ಟಿ, “ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಒಂದು ವರ್ಷದೊಳಗೆ ರಾಜ್ಯದ ಹಲವಾರು ಕಡೆ ಕೊಲೆ, ಸುಲಿಗೆ, ಕಳ್ಳತನ, ದರೋಡೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಯುವತಿಯರ ಕೊಲೆ ಪ್ರಕರಣಗಳು ನಡೆದಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಯಾದಗಿರ ಜಿಲ್ಲೆಯ ಹಿರೆ ಅಗಸಿ ಗ್ರಾಮದ ದಲಿತ ಯುವಕ ರಾಕೇಶನನ್ನು ಅದೆ ಗ್ರಾಮದ 7-8 ಮಂದಿ ಆರೋಪಿಗಳು ಕೊಲೆ ಮಾಡಿದ್ದಾರೆ. ಮಡಿಕೇರಿಯ ಸೂರಲಬ್ಬಿ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೀನಾಳನ್ನು ಪ್ರಕಾಶ ಎಂಬಾತ ಹತ್ಯೆಗೈದಿದ್ದಾನೆ. ಹುಬ್ಬಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿಯನ್ನು ಕೊಲೆ ಮಾಡಲಾಗಿದೆ. ಅಂಜಲಿ ಅವರ ಕುಟುಂಬವು ಘಟನೆಗೂ ಮೊದಲೇ ಪೊಲೀಸರಿಗೆ ದೂರು ನೀಡಿತ್ತು. ಆದರೂ, ಪೊಲೀಸರು ಕ್ರಮ ತೆಗೆದುಕೊಳ್ಳದೆ, ನಿರ್ಲಕ್ಷಿಸಿದ್ದರಿಂದ ಆಕೆ ಕೊಲೆಯಾಗಿದೆ. ಇದಕ್ಕೆ ಪೊಲೀಸರ ಬೇಜವಾಬ್ದಾರಿತನವೇ ಕಾರಣ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಂಕರ್ ಕಟ್ಟಿಸಂಗವಿ ಮಾತನಾಡಿ, “ರಾಜ್ಯದಲ್ಲಿ ಪೋಲಿಸ್ ಇಲಾಖೆ ಬಡವರ, ಶೋಷಿತರ, ನೊಂದವರ ಧ್ವನಿಯಾಗಿ ಕೆಲಸ ನಿರ್ವಹಿಸಿದರೆ ಸರಕಾರಕ್ಕೆ ಗೌರವ. ಯಾಕೆಂದರೆ ದಿನ ಬೆಳಗಾದರೆ ಮನೆಯಿಂದ ಶಾಲಾ/ಕಾಲೇಜು ಮತ್ತು ಕೆಲಸ ಕಾರ್ಯಗಳಿಗೆ ಹೊರಗಡೆ ಹೋಗುವಂತಹ ಬಡ ಕುಟುಂಬದ ಮಹಿಳೆಯರು, ವಿದ್ಯಾರ್ಥಿನಿಯರು ಮರಳಿ ಮನೆಗೆ ಬರಬೇಕಾದರೆ ಜೀವಭಯದಿಂದ, ಬರುವಂತಹ ಪರಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ ‘ಕಾರಣ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣವಾಗುವಂತಹ ವಾತಾವರಣ ಕಲ್ಪಿಸುವುದು ಹಾಗೂ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಹೇಶ್ ಕುಮಾರ್ ರಾಥೋಡ್, ಬಾಬಾ ಪಟೇಲ್, ಮರೆಪ್ಪ ಖಂಡಳಕರ, ಶಿವಕುಮಾರ್ ಬಿ ಹೆಗಡೆ, ಭೀಮಶಂಕರ್, ಪರಮಾನಂದ ಯಲಗೋಡ, ಸಂಗಣ್ಣ ಹೊಸಮನಿ, ಮಹೇಶ್ ಛತ್ರಿ, ದೇವರಾಜ್ ಬಣಮಿ, ಭಾಷಾ ಪಟೇಲ್ ಕಟ್ಟಿಸಂಗಾವಿ, ಶರಣಯ್ಯ ಸ್ವಾಮಿ, ಮಲ್ಲಪ್ಪ ಪೂಜಾರಿ, ಮರಪ್ಪ ಎಂ ಹಸನಾಪೂರ, ಗಫರ್ ಸಾಬ್ ಮಂದೇವಾಲ್, ಶರಣಬಸಪ್ಪ, ಚನ್ನಬಸವ ಕಾಚಾಪುರ್ ಸೇರಿದಂತೆ ಹಲವು ಇದ್ದರು.
ವರದಿ : ಸಿಟಿಜನ್ ಜರ್ನಲಿಸ್ಟ್ ಮಿಲಿಂದ್ ಸಾಗರ್