ಬಾಲಕಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾಗಿದ್ದರಿಂದ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್(ವಿಶೇಷ ಪೋಕ್ಸೊ) ನ್ಯಾಯಾಲಯವು “ಅಪರಾಧಿಯಾದ ಮಗನಿಗೆ 30 ವರ್ಷ ಹಾಗೂ ಆತನ ತಂದೆಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಆರೋಪಿಗಳಾದ ಸತೀಶ್ ಕಾಶಿ ಸೂರ್ಯಕಾಂತ(21) ಹಾಗೂ ಸೂರ್ಯಕಾಂತ ಕಾಶಿ(45) ಶಿಕ್ಷೆಗೆ ಒಳಗಾದವರು. ಬಾಲಕಿಯನ್ನು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದ ಸತೀಶ್, 2022ರ ಮೇ 5ರಂದು ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಆಗ, ಬಾಲಕಿಯ ಕುಟುಂಬಸ್ಥರು ದೂರು ಕೊಡಲು ಮುಂದಾದರು. 18 ವರ್ಷ ತುಂಬಿದ ಬಳಿಕ ಮದುವೆಯಾಗುವುದಾಗಿ ಹೇಳಿದ ಅಪರಾಧಿ, ಬಾಲಕಿಯನ್ನು ತನ್ನ ಮನೆಯಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದು, ಆಗಾಗ ಅತ್ಯಾಚಾರವನ್ನೂ ಎಸಗಿದ್ದ.
ಸತೀಶ್ ಕುಟುಂಬಸ್ಥರು ಬಾಲಕಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರು. ಜತೆಗೆ ಸತೀಶ್ ತಂದೆ ಸೂರ್ಯಕಾಂತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐಗಳಾದ ಶಿವಾನಂದ ಎನ್ ಅಂಬಿಗೇರ ಹಾಗೂ ಪ್ರಕಾಶ್ ಆರ್ ಯಾತನೂರ್ ಅವರು ತನಿಖೆ ನಡೆಸಿದ್ದರು. ವಿವಿಧ ಕಾಯ್ದೆಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಡಿ ದೇವರಾಜ ಅರಸು ಜನ್ಮದಿನಾಚರಣೆ
ವಾದ-ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ(ವಿಶೇಷ ಪೋಕ್ಸೊ) ಎಫ್ಟಿಎಸ್ಸಿ-1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಸತೀಶ್ಗೆ ಪೋಕ್ಸೊ ಕಾಯಿದೆಯ ವಿವಿಧ ಸೆಕ್ಷನ್ಗಳ ಅಡಿ 30 ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ಹಾಗೂ ಸೂರ್ಯಕಾಂತಗೆ 5 ವರ್ಷ ಜೈಲು ಶಿಕ್ಷೆ ಮತ್ತು 3,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹7 ಲಕ್ಷ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ವರದಿ : ವಾಲೆಂಟಿಯರ್ ಅನಂತ ದೇಶಪಾಂಡೆ