ಬೆಳೆ ಹಾನಿ ಸಂಭವಿಸಿದ್ದಕ್ಕೆ ಪ್ರತಿಯಾಗಿ ಪ್ರಿಮಿಯಂ ಪಾವತಿಸಿದ ರೈತರ ₹600 ಕೋಟಿ ಬೆಳೆ ವಿಮೆ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದ ಎಸ್ವಿಪಿ ವೃತ್ತದಲ್ಲಿರುವ ಇಫ್ಕೊ ಟೋಕಿಯೊ ವಿಮಾ ಕಂಪನಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಟೋಕಿಯೊ ವಿಮಾ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
‘ಈಗಾಗಲೇ ಪೂರ್ವ ಮುಂಗಾರು ಮಳೆ ಶುರುವಾಗಿದ್ದು, ರೈತರು ಬಿತ್ತನೆಗೆ ಹೊಲವನ್ನು ಸಜ್ಜು ಗೊಳಿಸಬೇಕಿದೆ. ಬಿತ್ತನೆ ಬೀಜ, ಗೊಬ್ಬರ ಖರೀದಿ, ಹೊಲ ಹಸನು ಮಾಡಲು ಟ್ರ್ಯಾಕ್ಟರ್ ಬಾಡಿಗೆ ಮತ್ತಿತರ ಖರ್ಚುಗಳನ್ನು ತೂಗಿಸಲು ಬೇರೆಡೆ ಸಾಲ ಮಾಡಬೇಕಿದೆ. ಅದನ್ನು ತಪ್ಪಿಸಲು ಕೂಡಲೇ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ‘ತೊಗರಿ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ವರದಿ ತರಿಸಿಕೊಂಡು ಪರಿಹಾರ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ. ಆ ಮೂಲಕ ಮುಖ್ಯಮಂತ್ರಿ ಅವರು ರೈತರ ಬಗ್ಗೆ ನಿಷ್ಕಾಳಜಿ ವಹಿಸಿರುವುದು ಬೇಸರದ ಸಂಗತಿ’ ಎಂದರು.
ಇದನ್ನೂ ಓದಿ : ಕಲಬುರಗಿ | ಸಿಡಿಲು ಬಡಿದು ರೈತ ಸಾವು
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ದಿಲೀಪ್ ನಾಗೂರೆ, ಸಿದ್ದರಾಮ ಧಣ್ಣೂರ, ದೇವು ಬಿರಾದಾರ, ಸುನಿಲ್ ಹೇರೂರು, ಚಂದಪ್ಪ ಪೂಜಾರಿ, ನಾಗೇಂದ್ರಪ್ಪ ಡಿಗ್ಗಿ, ಮಹಾದೇವ ಡಿಗ್ಗಿ, ಸಿದ್ದಣ್ಣಾ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.