ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗದ ವರದಿಯ ಅನುಸಾರ ಮಾದಿಗ ಜಾತಿ ಉಪಜಾತಿಗಳಿಗೆ ಶೇ 6ರಷ್ಟು ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಕಲಬುರಗಿಯಲ್ಲಿ ಮಾದಿಕ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ʼತಮಟೆ ಚಳುವಳಿʼ ನಡೆಸಲಾಯಿತು.
ನಗರದಲ್ಲಿ ಸೋಮವಾರ ಕರ್ನಾಟಕ ಮಾದಿಗ ಜಾತಿ ಉಪಜಾತಿಗಳ ಸಂಘಟನೆಗಳ ರಾಜ್ಯ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಾಗಮೋಹನ್ದಾಸ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ʼತಮಟೆ ಚಳುವಳಿʼ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾದಿಗ ಸಮಾಜದ ಮುಖಂಡ ದಶರಥ ಕಲಗುರ್ತಿ ಮಾತನಾಡಿ, ʼಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಾಗಿರುವ ಒಳಮೀಸಲಾತಿಯ ಬೇಡಿಕೆ ಮತ್ತು ಹೋರಾಟ 35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಈ ಅಸಮಾನತೆಯನ್ನು ಸರಿಪಡಿಸಲು ಆಗಸ್ಟ್ 1 2024ರಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆʼ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದನ್ನು ನಮ್ಮ ಸಮುದಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗಿದ್ದಾರʼ ಎಂದು ಕಳವಳ ವ್ಯಕ್ತಪಡಿಸಿದರು.
ʼಸುಪ್ರೀಂ ಕೋರ್ಟಿನ ತೀರ್ಪಿನ ತರುವಾಯ, ಹರಿಯಾಣಾ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾ ವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಆಗಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ತೀವ್ರವಾದ ವಿಳಂಬ ನೀತಿ ಅನುಸರಿಸುತ್ತಿದ್ದು, ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು 29 ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆʼ ಎಂದು ಹೇಳಿದರು.
ʼನ್ಯಾಯಮೂರ್ತಿ ಸದಾಶಿವ ಆಯೋಗ, ನಾಗಮೋಹನದಾಸ ವರದಿ, ಮಾಧುಸ್ವಾಮಿ ವರದಿ, ಕಾಂತರಾಜ ವರದಿ ಈ ಎಲ್ಲಾ ವರದಿಗಳಲ್ಲಿ ಮಾದಿಗ ಸಮುದಾಯಕ್ಕೆ ಮಾದಿಗ ಜನಸಂಖ್ಯೆಗನುಗುಣವಾಗಿ ಶೇ 6%ರಷ್ಟು, ಹೊಲೆಯ ಸಮುದಾಯಕ್ಕೆ ಶೇ 5.5ರಷ್ಟು ಹಾಗೂ ಲಂಬಾಣಿ ಸಮುದಾಯಕ್ಕೆ ಶೇ 4ರಷ್ಟು ಹೀಗೆ ಆಯಾ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಈ ನಾಲ್ಕೂ ವರದಿಗಳಲ್ಲಿಯೂ ಪ್ರತಿಶತ ಮೀಸಲಾತಿ ಒಂದೇ ರೀತಿಯಾಗಿದೆʼ ಎಂದರು.
ʼಮುಖ್ಯಮಂತ್ರಿ ಸಿದ್ದರಾಮಯ್ಯನರಿಗೆ ನಾಗಮೋಹನ ದಾಸ್ ರವರು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ಜಾರಿಗೊಳಿಸಲು ಕುಂಟು ನೆಪ ಹೂಡಿ ಆಗಸ್ಟ್ 7 ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಮಯ ನಿಗದಿ ಮಾಡಿದ ಮೇಲೂ ಕೂಡಾ ಏಕಾಏಕಿಯಾಗಿ ಮುಂದೂಡಿ ಆಗಸ್ಟ್ 16 ರಂದು ಸಂಪುಟ ಸಭೆ ಕರೆಯಲಾಗಿದ್ದು, ಅದೂ ಕೂಡಾ ಮುಂದೂಡಿ ಆಗಸ್ಟ್ 19ಕ್ಕೆ ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಸಮುದಾಯ, ಯಾವುದೇ ಸಚಿವರ, ನಾಯಕರ ಒತ್ತಡಕ್ಕೆ ಮಣಿಯದೆ ಸಾಮಾಜಿಕ ನ್ಯಾಯಕ್ಕಾಗಿ ನಾಗಮೋಹನ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮಾದಿಗ ಸಮುದಾಯ ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಅಧಿಕ ಮಳೆ : 4 ತಿಂಗಳಲ್ಲಿ 101 ಜನ, 843 ಜಾನುವಾರು ಸಾವು; 15 ಸಾವಿರ ಹೆಕ್ಟೇರ್ ಬೆಳೆ ಹಾನಿ
ಮಾದಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟ ಕಲ್ಯಾಣ ಕರ್ನಾಟಕ ಸಂಚಾಲಕ ರಾಜು ವಾಡೆಕರ್, ಶಾಮ ನಾಟಿಕಾರ, ಭೀಮಣ್ಣ ಬಿಲ್ಲವ್, ಪರಮೇಶ್ವರ ಖಾನಾಪೂರ, ಎ.ಹೆಚ್. ನಾಗೇಶ, ಬಾಬು ಸುಂಠಾಣ, ಲಿಂಗರಾಜ ತಾರಫೈಲ್, ರಮೇಶ ವಾಡೆಕರ್, ಗೋಪಾಲರಾವ ಕಟ್ಟಿಮನಿ, ನಾಗರಾಜ ಗುಂಡಗುರ್ತಿ, ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜಿನಕೇರಿ, ರಾಜು ಮುಕ್ಕಣ್ಣ, ಮಂಜುನಾಥ ನಾಲವಾರಕರ, ಮನೋಹರ ಬೀರನುರ, ಗೋಪಾಲ ನಾಟಿಕಾರ, ದತ್ತು ಭಾಸಗಿ, ಮಲ್ಲಿಕಾರ್ಜುನ ಸರಡಗಿ, ಬಂಡೇಶ ರತ್ನಡಗಿ, ಅಮೃತ ಸಾಗರ, ಕಾಶಿನಾಥ ನಂದೂರ, ಶ್ರೀಮಂತ ಭಂಡಾರಿ, ಬಸವರಾಜ ಬಾಡ್ಯಾಳ, ಹಣಮಂತ ಅಂಕಲಗಿ, ವಿಠಲ ವಾಲಿಕಾರ, ಪ್ರದೀಪ ಬಾಚನಳ್ಳಿ, ಶಿವಶಂಕರ ಬಂದರವಾಡ, ಮಲ್ಲಿಕಾರ್ಜುನ ದೊಡ್ಡಮನಿ, ಶ್ರೀನಿವಾಸ ರಾಮನಾಳಕರ, ಅನೀಲ ಡೊಂಗರಗಾಂವ, ಪ್ರದೀಪ ಭಾವೆ, ರಂಜೀತ ಮೂಲಿಮನಿ, ರಾಜು ಕಟ್ಟಿಮನಿ, ಗುಂಡು ಸಂಗವಾರ, ಪ್ರಲಾದ ಹಡಗೀಲಕರ, ಮಂಜುನಾಥ ಲೇಂಗಟಿ, ಸಚಿನ ಕಟ್ಟಿಮನಿ ಇನ್ನಿತರರು ಉಪಸ್ಥಿತರಿದ್ದರು.