ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮ ಪಂಚಾಯತಿಯ ಕರ್ತವ್ಯ ನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.
ತಾಲ್ಲೂಕು ಪಂಚಾಯತ್ ಕಾರ್ಯಾಲಯದಿಂದ ತಹಸೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಅವರಿಗೆ ಸಲ್ಲಿಸಿದರು.
‘ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ಅವರಿಗೆ ವಾಲೋಜಿ ಅಣದು ರಾಠೋಡ್ ಫೋನ್ ಕರೆ ಮಾಡಿ ಅಸಾಂವಿಧಾನಿಕ ಪದ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಶಾದಿಪೂರ ಪಂಚಾಯತ್ ಪಿಡಿಓ ಮೇಲೆ ಹಲ್ಲೆ ನಡೆಸುತ್ತಿದ್ದೇನೆಂದು ಪೊಲೀಸರಿಗೆ ಕರೆ ಮಾಡಿ ಪಂಚಾಯತಿಗೆ ನುಗ್ಗಿ ಪಂಚಾಯತ್ ನಲ್ಲಿ ಕರ್ತವ್ಯ ನಿರತ ಪಿಡಿಓ ಶ್ರೀಧರ ಎಂಬುವವರ ಮೇಲೆ ವಾಲೋಜಿ ಅಣದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆʼ ಎಂದು ಆರೋಪಿಸಿದರು.
ಘಟನೆ ಸಂಬಂಧ ಕೊಂಚವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ, ಗುಂಡಾ ಕಾಯ್ದೆಗೆ ಒಳಪಡಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಿ ನೌಕರಸ್ಥರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಚಿಂಚೋಳಿ ತಾಲೂಕು ಶಾಖೆಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ಪಾಲಾಮೂರ, ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್ ಅವರು ಮಾತನಾಡಿ,ʼಕರ್ತವ್ಯ ನಿರತ ಸರಕಾರಿ ನೌಕರರ ರಕ್ಷಣೆಗೆ ಕಾಯ್ದೆ ರೂಪಿಸಿ ಜಾರಿಗೆ ತಂದು ಜೀವದ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರಸ್ಥರಿಗೆ ಧೈರ್ಯ ತುಂಬಬೇಕುʼ ಎಂದು ಮನವಿ ಮಾಡಿದರು.
ಪ್ರತಿಭಟನೆಗೆ ಬೆಂಬಲಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ, ಗೋಪಾಲ ಗಾರಂಪಳ್ಳಿ, ಆರ್ಡಿಪಿಆರ್ ನೌಕರರ ಸಂಘದ ಅಧ್ಯಕ್ಷ ಪವನ ಮೇತ್ರಿ, ನಿರ್ದೇಶಕ ಜಗನ್ನಾಥರೆಡ್ಡಿ, ಪಿಡಿಓ ಮಲ್ಲಿಕಾರ್ಜುನ್ ಗಿರಿ ಅವರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ಚಿಂಚೋಳಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಪಂಪ್ ಆಪರೇಟರಗಳು, ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರಗಳು, ಶ್ರೀಧರ ವಗ್ಗಿ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.