ಕಲಬುರಗಿಯ ರಾಮ ನಗರ ಭಾಗ-2, ಸಂಜು ನಗರ ಭಾಗ-2 ಮತ್ತು ಯಾದಗಿರಿಲ್ಲಿರುವ ಅಘೋಷಿತ ಸ್ಲಂಗಳಾದ ಮೌನೇಶ್ವರ ನಗರ, ಮದನಪೂರ ಭಾಗ-2, ತಪ್ಪಡಗೇರಾ, ಗಂಗಾನಗರ ಸ್ಲಂಗಳನ್ನು ಅಧಿಕೃತವಾಗಿ ಸ್ಲಂ ಎಂದು ಘೋಷಣೆ ಮಾಡಬೇಕು ಎಂದು ಜನಾಂದೋಲನ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಸ್ಲಂಗಳನ್ನು ಅಧಿಕೃತವಾಗಿ ಘೋಷಿಸದೆ ಸೌಲಭ್ಯಗಳಿಂದ ವಂಚಿತವಾಗುವಂತೆ ಮಾಡುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ ಸಾರವಾಡ ಮತ್ತು ದೇವಿಂದ್ರರನ್ನು ಅಮಾನತುಗೊಳಿಸಿ ಅತೀ ಶೀಘ್ರವಾಗಿ ಸ್ಲಂ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರುಗಡೆ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿ, ತಾಂತ್ರಿಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಧರಣಿ ಉದ್ದೇಶಿಸಿ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ, “ಸುಮಾರು ಮೂರು ವರ್ಷಗಳಿಂದ ಸದರಿ ಸ್ಲಂಗಳನ್ನು ಘೋಷಣೆ ಮಾಡಲು ಮನವಿ ಸಲ್ಲಿಸಿದರೂ ಸ್ಲಂ ಬೋರ್ಡ್ ಅಧಿಕಾರಿ ಶ್ರೀಧರ ಸಾರವಾಡ ಮತ್ತು ದೇವಿಂದ್ರಕುಮಾರ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ. ಪ್ರತೀ ಬಾರಿ ಹಾರಿಕೆ ಉತ್ತರ ನೀಡುತ್ತಿದ್ದು, ಸ್ಲಂ ಜನರನ್ನು ಬಹಳ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು” ಎಂದು ದೂರಿದರು.
ಇದನ್ನೂ ಓದಿ: ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ
“ಕಲಬುರಗಿ ಸ್ಲಂಗಳಿಗೆ ಸಂಬಂಧಪಟ್ಟಂತೆ ಘೋಷಣೆ ಬಗ್ಗೆ ವಿಚಾರಿಸಿದರೆ, ಆ ಸ್ಲಂಗಳ ಭೂಮಿ ತಕರಾರು ಇದೆ ಎಂದು ಸುಳ್ಳು ಸೃಷ್ಟಿ ಮಾಡಿ ಸ್ಲಂ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಯಾದಗಿರಿ ಸ್ಲಂಗಳಿಗೆ ಸಂಬಂಧಪಟ್ಟಂತೆ ಒಂದು ದಾಖಲೆ ಕೂಡ ಸಂಗ್ರಹಿಸಿಲ್ಲ. ಅದೇ ರೀತಿ ಒಂದು ಸ್ಲಂಗೂ ಭೇಟಿ ನೀಡಿರುವುದಿಲ್ಲ. ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿಲ್ಲ” ಎಂದು ಆರೋಪಿಸಿದರು.
“ಒಂದು ವೇಳೆ ಇದೇ ಧೋರಣೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಕಚೇರಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು” ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಗೌರಮ್ಮ ಮಾಕಾ, ಯಾದಗಿರಿ ಜಿಲ್ಲಾಧ್ಯಕ್ಷ ಹಣಮಂತ ಶಹಾಪೂರಕರ್, ಕಾರ್ಯದರ್ಶಿ ಶರಣು ಕಣ್ಣಿ, ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.