ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಮಲ್ಲಬಾದ ಗ್ರಾಮದಲ್ಲಿ ಮೂಲಮೂತ ಸೌಕರ್ಯಗಳೇ ಮರೀಚಿಕೆಯಾಗಿವೆ. ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿಗೆ ಮನೆ-ಮನೆಗೂ ನಲ್ಲಿಗಳನ್ನು ಅಳವಡಿಸಲಾಗಿದ್ದರೂ, ಈ ಗ್ರಾಮದತ್ತ ಮಾತ್ರ ನಲ್ಲಿಗಳು ಇನ್ನೂ ಸುಳಿದಿಲ್ಲ. ಗ್ರಾಮದ ದಲಿತರು ಕುಡಿಯುವ ನೀರಿಗಾಗಿ ಬಾವಿ ನೀರನ್ನೇ ಅವಲಂಬಿಸಿದ್ದಾರೆ. ತೆರೆದ ಬಾವಿಯ ನೀರು ಕುಡಿಯುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಅವರಲ್ಲಿದೆ.
ಆ ಬಾವಿಯೂ ದೂರದಲ್ಲಿದ್ದು, ದಿನನಿತ್ಯ ಬಿಂದಿಗೆಗಳನ್ನು ಹೊತ್ತು, ನಡೆದು ಬರಬೇಕು. ನೀರು ತರಲು ಹೋಗಿ ವೃದ್ಧರು ಕ್ವಾರಿಯಲ್ಲಿ ಬಿದ್ದು, ಗಾಯಗಳಾಗಿರುವ ಉದಾಹರಣೆಗಳೂ ಇವೆ.
ಗ್ರಾಮಕ್ಕೆ ಈದಿನ.ಕಾಮ್ ಪ್ರತಿನಿಧಿ ಭೇಟಿ ನೀಡಿದ್ದಾಗ ದಲಿತ ಕುಟುಂಬ ರೇಣುಕಾ ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. “ದಲಿತರ ಓಟು ಬೇಕು. ಆದರೆ ದಲಿತರ ಸಮಸ್ಯೆ ಬಗ್ಗೆ ಯಾರು ಯೋಚನೆ ಮಾಡುವುದಿಲ್ಲ. ಗ್ರಾಮದಲ್ಲಿ ಇನ್ನೂರಕ್ಕೂ ಹೆಚ್ಚು ದಲಿತರ ಮತದಾರರಿದ್ದಾರೆ. ನಮ್ಮ ಮತಗಳನ್ನು ಪಡೆದವರು ನಮಗೆ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಮುರಿದು ಬೀಳುವ ಮನೆಯಲ್ಲಿ, ಗುಡಿಸಲುಗಳಲ್ಲಿ ಜೀವನ ಮಾಡ್ತಿದ್ದೀವಿ. ರಸ್ತೆ, ನಾಲೆ, ನಲ್ಲಿ ನೀರು, ಸಾರ್ವಜನಿಕ ಶೌಚಾಲಯ ಯಾವ ವ್ಯವಸ್ಥೆಯೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೃದ್ದೆ ಮಹಿಳೆ ಸೀತಮ್ಮ ಮಾತನಾಡಿ, “ನೀರು ತರಲು ಬಾವಿಗೆ ಹೋಗಿದ್ದಾಗ ರಸ್ತೆ ಸರಿ ಇಲ್ಲದರಿಂದ ಕ್ವಾರಿಯಲ್ಲಿ ಕಾಲು ಜಾರಿ ಬಿದ್ದುಬಿಟ್ಟೆ. ಸೊಂಟ ಮುರಿದುಕೊಂಡು ಒಂದು ವರ್ಷವಾಯಿತು. ನೆಲ ಹಿಡಿದಿರುವೆ ಆರಾಮಾಗಿ ಓಡಾಡಿ ಕೆಲಸ ಮಾಡುತ್ತಿದೆ. ಆದರೆ, ಅದಗೆಟ್ಟ ರಸ್ತೆ ನನ್ನನ್ನು ಮೂಲೆಗೆ ದೂಡಿದೆ” ಎಂದು ಅಳಲು ತೋಡಿಕೊಂಡರು.
ಮಲ್ಲಬಾದ್ ಜೇವರ್ಗಿ ತಾಲೂಕಿನ ಗಡಿ ಭಾಗದ ಹಳ್ಳಿಗಳಲ್ಲಿ ಒಂದು. ಗ್ರಾಮಕ್ಕೆ ನಾಲ್ಕು ಬಸ್ಗಳು ಬರುತ್ತವೆ. ಆದರೆ, ಅವೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ರಸ್ತೆ ಸರಿ ಇಲ್ಲ. ರಸ್ತೆ ದುರಸ್ಥಿಯಾದರೆ ಬಸ್ ಬಿಡ್ತಿವಿ ಅಂತ ಸಾರಿಗೆ ಅಧಿಕಾರಿಗಳು ಹೇಳುತ್ತಾರೆ. ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಹೋಗಲು, ಮರಳಿ ಊರಿಗೆ ಬರಲು ಗಂಟೆಗಟ್ಟಲೆ ಬಸ್ಗಾಗಿ ಕಾಯಬೇಕು ಎಂದು ಗ್ರಾಮದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ವಿಜಯಲಕ್ಷ್ಮಿ ಮಾತನಾಡಿ, “ಮಲ್ಲಬಾದದಿಂದ ವಿದ್ಯಾರ್ಥಿಗಳು ಹೈಸ್ಕೂಲ್ಗೆ ಬಳಬಟ್ಟಿ ಶಾಲೆಗೆ 5 ಕಿ.ಮೀ. ನಡೆದುಕೊಂಡು ಹೋಗುತ್ತೇವೆ. ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲ. ನಮಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು” ಎಂದರು.
ಸುರೇಶ್ ವಿಶ್ವಕರ್ಮ ಮಾತನಾಡಿ, “ನಮ್ಮ ಊರಿನಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತವೆ. ಬಲಭೀಮೇಶ್ವರ್ ದೇವಸ್ಥಾನ ಹತ್ತಿರ ಕೊಳಚೆ ನೀರು ಮಡುಗಟ್ಟಿ ನಿಲುತ್ತವೆ. ಆದಷ್ಟು ಬೇಗಾ ಸಮಸ್ಯೆ ಬಗೆಹರಿಸಿಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಮುಸ್ಲಿಮರಿಗೆ ಬಾಯ್ಕಾಟ್ – ಹಿಂದು ವ್ಯಾಪಾರಿಗಳಿಗೆ ಆದಾಯ ಕ್ಷೀಣ; ವಿಎಚ್ಪಿ ತಂದ ಆಪತ್ತು
ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಜನಾರಾಯಣಗೌಡ ಮಾತನಾಡಿ, “ನಾವು ಕಾಂಗ್ರೆಸ್ ಕಾರ್ಯಕರ್ತರು. ಊರಿನ ಜನ ಎಲ್ಲರೂ ನಮಗೆ ಬೈತಾರೆ. ಚುನಾವಣೆ ಸಂದರ್ಭದಲ್ಲಿ ಓಡಾಡಿ ಮತ ಹಾಕಿಸುತ್ತೀರಿ. ಇವಾಗ ಊರಿನ ಅಭಿವೃದ್ಧಿ ಬಗ್ಗೆ ಯಾಕೆ ನಿರ್ಲಕ್ಷ ಮಾಡುತೀರಾ? ನೀವುಗಳು ಶಾಸಕರ ಜೊತೆಗಿದ್ದೀರಿ.ಅವರಿಗೆ ಹೇಳಿ ಕೆಲಸ ಮಾಡಿಸಿ ಅಂತ ದಿನನಿತ್ಯ ಬೈಯುತ್ತಾರೆ. ಆದರೆ, ಶಾಸಕರು ನಮ್ಮ ಊರಿನ ಕಡೆಗೆ ತಿರುಗಿಯೂ ನೋಡುತ್ತಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಇದೆ ರೀತಿ ಮುಂದುವರೆದರೆ ನಾವುಗಳು ಅವರ ವಿರುದ್ಧ ನಿಲ್ಲಬೇಕಾಗುತ್ತದೆ. ಕ್ಷೇತ್ರ ಅಭಿವೃದ್ಧಿ ಮಾಡದೇ ಇದಲ್ಲಿ ಅವರು ಇನ್ನೊಮ್ಮೆ ಗೆಲ್ಲುವುದು ಕಠಿಣ ಆಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರನ್ನು ಈದಿನ.ಕಾಮ್ ಪ್ರತಿನಿಧಿ ಭೇಟಿ ಮಾಡಿದ್ದು, “ಮಾಹಿತಿ ಪಡೆದು ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುತ್ತೇವೆ” ಎಂದು ಶಾಸಕರು ಹೇಳಿದರು.