ಬೌದ್ಧರ ಐತಿಹಾಸಿಕ ಸ್ಥಳ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ದಿ ಪಡಿಸಿ ಅಂತಾರಾಷ್ಟ್ರೀಯ ತಾಣವಾಗಿ ಮಾರ್ಪಾಡು ಮಾಡುವಂತೆ ಭಾರತೀಯ ಬೌದ್ಧ ಮಹಾಸಭಾ ಕಮಲಾಪುರ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ತಾಲೂಕು ಸಮಿತಿಯ ವತಿಯಿಂದ ಕಮಲಾಪುರ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ರಮೇಶ ಆರ್ ಬೆಳಕೋಟಿ, “ಕರ್ನಾಟಕದಲ್ಲಿ ಕಲೆ ಸಾಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ತಮ್ಮ ನೇತೃತ್ವದ ಸರ್ಕಾರವು ಅನೇಕ ಪ್ರಾಧಿಕಾರಗಳಿಗೆ ಮೂಲಭೂತ ಸೌಕರ್ಯ ಮತ್ತು ಸದರಿ ಪ್ರಾಧಿಕಾರಗಳ ವ್ಯಾಪ್ತಿ ಪ್ರದೇಶವನ್ನು ಅಭಿವೃದ್ಧಿಪಡಿಸಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳಾಗಿ ಪರಿವರ್ತನೆಗೆ ಸರ್ಕಾರದ ಪ್ರಯತ್ನ ಶ್ಲಾಘನೀಯ” ಎಂದರು.
“ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕನಗನಹಳ್ಳಿ, ಸನ್ನತಿ, ಯಾದಗಿರಿ ಜಿಲ್ಲೆಯ ಶಹಾಪುರ್ ಹೀಗೆ ಅನೇಕ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯ ನಡೆಸಿ ವಿಶ್ವ ವಿಖ್ಯಾತ ಬೌದ್ಧ ಧರ್ಮದ ಬಗ್ಗೆ ಅನೇಕ ಶಿಲಾ ಶಾಸನಗಳು ಮತ್ತು ಪ್ರಿಯದರ್ಶಿ ಸಾಮ್ರಾಜ್ಯ ಅಶೋಕರ ಕಾಲವನ್ನು ನೆನಪಿಸುವ ಶಾಸನಗಳು ಅಲ್ಲಿ ಸ್ವತಃ ಸಾಮ್ರಾಟ್ ಅಶೋಕ ರಾಜ ಮತ್ತು ಅವರ ಮಗ ಮಹೇಂದ್ರ ಕೊಟ್ಟ ಅನೇಕ ಶಿಲಾ ಲೇಖನಗಳು ಪಾಲಿ ಭಾಷೆಗಳಲ್ಲಿ ದೊರಕಿದೆ. ಇದು ರಾಜ್ಯ ಮತ್ತು ರಾಷ್ಟ್ರಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿ ಮತ್ತು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದೆ. ರಾಜ್ಯ ಸರ್ಕಾರವು ಬೌದ್ಧ ಪಾರಂಪರೆ ಕಲೆ ಸಾಹಿತ್ಯ ರೂಪಿಸಿ ಅಭಿವೃದ್ಧಿಪಡಿಸಲು ಸನ್ನತಿ ಪ್ರಾಧಿಕಾರ ರಚಿಸಲಾಗಿ ಇದರ ಜೊತೆಯಲ್ಲಿ ಕೂಡಲಸಂಗಮ ಮತ್ತು ಬಸವಕಲ್ಯಾಣ ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಹವಾಗಿದೆ. ಆದರೆ ಬಸವಕಲ್ಯಾಣ ಮತ್ತು ಕೂಡಲಸಂಗಮ ಪಾಧಿಕಾರಗಳಿಗೆ ನೀಡಲಾದ ಅಭಿವೃದ್ಧಿ ಅನುದಾನ ಸನ್ನತಿ ಪ್ರಾಧಿಕಾರಕ್ಕೆ ನೀಡಿರುವುದಿಲ್ಲ. ರಾಜ್ಯ ಬೌದ್ಧ ಉಪಾಸಕ-ಉಪಾಸಕಿಯರಿಗೆ ನೋವುಂಟು ಮಾಡಿದೆ” ಎಂದು ತಿಳಿಸಿದರು.

ಈ ಹಿಂದೆ ಸಚಿವ ಸಂಪುಟ ಸಭೆ ನಡೆಯುವ ಮುನ್ನಾ ಸನ್ನತಿ ಪ್ರಾಧಿಕಾರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಿಯಾಂಕ್ ಖರ್ಗೆ ಇವರಿಗೆ ಎಲ್ಲ ಸಂಘಟನೆಗಳು ಜಂಟಿಯಾಗಿ ಮನವಿ ಪತ್ರ ನೀಡಿದ್ದರು. ಆದರೆ ಇದೆ ತಿಂಗಳು ಸೆಪ್ಟೆಂಬರ್ 17ರಂದು ನಡೆದ ಸಚಿವ ಸಂಪುಟದಲ್ಲಿ ಸನ್ನತಿ ಪ್ರಾಧಿಕಾರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಆದ್ದರಿಂದ ರಾಜ್ಯ ಬೌದ್ಧ ಉಪಾಸಕ ಮತ್ತು ಉಪಾಸಕಿಯರ ಪರವಾಗಿ ಭಾರತೀಯ ಬೌದ್ಧ ಮಹಾಸಭಾ ಕಮಲಾಪೂರ ತಾಲೂಕ ಸಮಿತಿಯ ವತಿಯಿಂದ ಸನ್ನತಿ ಪ್ರಾಧಿಕಾರಕ್ಕೆ 500 ಕೋಟಿ ಹಣ ಬಿಡುಗಡೆ ಮಾಡಲು ತಾವು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಹದಗೆಟ್ಟ ರಸ್ತೆ: ಕಬ್ಬು ಸಾಗಿಸಲಾಗದೆ ಹೈರಾಣಾದ ರೈತರು; ಡಾಂಬರೀಕರಣಕ್ಕೆ ಆಗ್ರಹ
ಮನವಿ ಸಲ್ಲಿಸುವ ಸಂದರ್ಭದಲ್ಲಿ ನಾಗೇಶ ಭೂಪತಿ, ಮೋಹನ್ ಮುಸ್ತಾರಿ, ವಿದ್ಯಾಧರ ಮಾಳಗೆ, ರಮೇಶ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ, ರಮೇಶ ಕಟ್ಟಿಮನಿ, ಕುಪೇಂದ್ರ ಹೈಬತ್ತಿ, ಗಿರೇಪ್ಪಾ ಶಾಖಾ, ದಿಲೀಪ ಚಕ್ರವರ್ತಿ, ಕೈಲಾಸ ಕಟ್ಟಿಮನಿ ಮತ್ತಿತರರಿದ್ದರು.
