ಕನಕಪುರದಲ್ಲಿ ಶುಕ್ರವಾರದಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಂದಾಳತ್ವದಲ್ಲಿ ಶಾಸಕ ಮುನಿರತ್ನರನ್ನು ಶಾಸಕ ಸ್ಥಾನ ವಜಾ ಮಾಡಿ, ಗಡಿಪಾರು ಮಾಡಬೇಕೆಂದು ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಬಸಪ್ಪ ವೃತ್ತದಲ್ಲಿರುವ ಅಶೋಕ ಸ್ಥಂಭದ ಬಳಿ ನೂರಾರು ಪ್ರತಿಭಟನಾಕಾರರು ಜಮಾವಣೆಗೊಂಡು, ಮುನಿರತ್ನ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಎಂಜಿ ರಸ್ತೆಯ ಮೂಲಕ ತಾಯಿ ಮತ್ತು ಮಗು ಆಸ್ಪತ್ರೆ ವೃತ್ತದವರೆಗೆ ಸಾಗಿದರು.
ನಂತರ, ಅವರು ರೂರಲ್ ಕಾಲೇಜು ಮುಂಭಾಗ ತಲುಪಿ, ರಸ್ತೆಯಲ್ಲಿ ನೂರಾರು ಜನರಿಂದ ಬೃಹತ್ ಮಾನವ ಸರಪಳಿ ರಚಿಸಿದರು. ಈ ಪ್ರಕ್ರಿಯೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು.
ಈ ವೇಳೆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹಿರಿಯ ದಲಿತ ಮುಖಂಡ ಜೆ ಎಂ ಶಿವಲಿಂಗಯ್ಯ ಮಾತನಾಡಿ, “ಮುನಿರತ್ನ ದಲಿತ ಹಾಗೂ ಒಕ್ಕಲಿಗ ಸಮುದಾಯವನ್ನು ನಿಂದಿಸಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಇಂತಹ ವ್ಯಕ್ತಿಯನ್ನು ಒಂದು ಕ್ಷಣವೂ ಇಲ್ಲಿ ಇರಿಸಬಾರದು, ಶಾಶ್ವತವಾಗಿ ಗಡಿಪಾರು ಮಾಡಬೇಕು. ಇಂತಹವರಿದ್ದರೆ ದಲಿತರು, ಹಿಂದುಳಿದವರು ಹಾಗೂ ಮಹಿಳೆಯರು ಶಾಂತಿಯಾಗಿ ಬದುಕಲು ಸಾಧ್ಯವಿಲ್ಲ” ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, “ಶಾಸಕರ ಹೇಳಿಕೆ ಅಮಾನವೀಯವಾಗಿದೆ. ಬಿಜೆಪಿ ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ನ್ಯಾಯಾಲಯವು ಇಂತಹವರಿಗೆ ಜಾಮೀನು ನೀಡುವುದು ಸರಿಯಲ್ಲ. ಇವರು ಪರಿವರ್ತನೆಗೊಳ್ಳುವುದು ಕಷ್ಟ. ಇಂತಹವರು ಸಮಾಜಕ್ಕೆ ಅಪಾಯವಾಗಿರುವುದರಿಂದ ಅವರನ್ನು ಜೈಲಿನಲ್ಲಿರಿಸಬೇಕು” ಎಂದು ಹೇಳಿದರು.
ದಲಿತ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಶಾಸಕ ಮುನಿರತ್ನರ ಹಿನ್ನೆಲೆಯನ್ನು ಗಮನಿಸಿದರೆ ರೌಡಿಸಂ ಹಿನ್ನೆಲೆಯಿಂದ ಬಂದವರು. ಇಂತವರಿಂದ ಕೀಳು ವರ್ತನೆಯಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದರು.
ರೈತ ಸಂಘದ ಚೀಲೂರು ಮುನಿರಾಜು ಮಾತನಾಡಿ, ಯಾವುದೇ ಸಮುದಾಯದ ಅವಹೇಳನ ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ತಹಶೀಲ್ದಾರ್ ಮಂಜುನಾಥ್,”ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಿ ಪ್ರತಿಕ್ರಿಯೆ ಬಂದ ನಂತರ ತಮಗೆ ತಿಳಿಸುತ್ತೇನೆ” ಎಂದರು.
ಇದನ್ನು ಓದಿದ್ದೀರಾ? ಉಡುಪಿ | ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು: ಚಿಂತಕ ಶಿವಸುಂದರ್
ಪ್ರತಿಭಟನೆಯಲ್ಲಿ ದಲಿತಪರ ಮುಖಂಡರಾದ ಪ್ರಶಾಂತ್ ಹೊಸದುರ್ಗ, ಮಳಗಾಳು ದಿನೇಶ್, ನಟರಾಜ್, ನೀಲಿ ರಮೇಶ್, ನವೀನ್ ಕುಮಾರ್, ಛಲವಾದಿ ನವೀನ್, ರಾಜ್ ಕೆಆರ್ಎಸ್ ಪಕ್ಷದ ಶಿವಮ್ಮ, ಗೋಪಿ, ಸೋಮಣ್ಣ, ಜೀವನ್, ಕನ್ನಡ ಭಾಸ್ಕರ್, ಶೇಷಣ್ಣ , ಮಲ್ಲೇಶ್, ಶಾಂತಣ್ಣ, ಗುಂಡಣ್ಣ, ಕುರುಬರಹಳ್ಳಿ ನವೀನ್, ನಲ್ಲಹಳ್ಳಿ ಶ್ರೀನಿವಾಸ್, ಮುಂತಾದವರು ಹಾಜರಿದ್ದರು.
