1,500 ಕೋಟಿ ರೂಪಾಯಿ ವಂಚನೆಯಾದ ಕಣ್ವ ಸಹಕಾರ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಸಂತ್ರಸ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಾದ್ಯಂತ 23,000ಕ್ಕೂ ಹೆಚ್ಚು ಠೇವಣಿದಾರರು ಕಣ್ವ ಹಗರಣದಲ್ಲಿ ಹಣ ಕಳೆದುಕೊಂಡಿದ್ದೇವೆ. ಹಗರಣದ ತನಿಖೆ ನಡೆಸಿ, ತಮಗೆ ನ್ಯಾಯ ಒದಗಿಸುವಂತೆ ಹಲವು ಭಾರಿ ಮನವಿ ಮಾಡಿದರೂ, ಸರ್ಕಾರಗಳು ಕೇವಲ ಭರವಸೆಯನ್ನಷ್ಟೇ ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಕಣ್ವ ಹಗರಣದ ಹಕ್ಕುದಾರರ ಹಿತರಕ್ಷಣಾ ವೇದಿಕೆಯ ಮುಖಂಡರು ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಶಶಿಲ್ ಜಿ ನಮೋಶಿ ಭೇಟಿ ಮಾಡಿದ್ದಾರೆ. ಹಗರಣದ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.
“45 ತಿಂಗಳ ತನಿಖೆಯಲ್ಲಿ ಕೇವಲ ಒಂದು ಮಧ್ಯಂತರ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲ ತನಿಖಾ ತಂಡ ವಿಫಲವಾಗಿದೆ. ತಮ್ಮ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಂಪನ್ಮೂಲಗಳಿಲ್ಲದೆ ನರಳುತ್ತಿರುವ ಸಾವಿರಾರು ಜನರು ನ್ಯಾಯ ಸಿಗದೆ ಪರದಾಡುತ್ತಿದ್ದಾರೆ” ಎಂದು ವೇದಿಕೆಯ ಆಡಳಿತಾಧಿಕಾರಿ ಮುರಳೀಧರ ಲಕಣ್ಣವರ ಹೇಳಿದ್ದಾರೆ.
1985ರಲ್ಲಿ ‘ಶ್ರೀ ಕಣ್ವ ಸೌಹಾದ್ರ ಸಹಕಾರಿ ಕ್ರೆಡಿಟ್ ಲಿಮಿಟೆಡ್’ನಲ್ಲಿ ಆರ್ಡಿ ಮತ್ತು ಎಫ್ಡಿಗಳ ರೂಪದಲ್ಲಿ ಹಣವನ್ನು ಠೇವಣಿ ಮಾಡುವಂತೆ ಜನರನ್ನು ಗುಂಪೊಂದು ಪ್ರೇರೇಪಿಸಿತ್ತು. 5.5 ವರ್ಷಗಳಲ್ಲಿ 12% ಬಡ್ಡಿದರ ಅಥವಾ ಠೇವಣಿ ದ್ವಿಗುಣಗೊಳಿಸುವ ಭರವಸೆಯನ್ನೂ ಆ ಗುಂಪು ನೀಡಿತ್ತು. ಅವರ ಮಾತುಗಳನ್ನು ನಂಬಿದ ಹಲವರು ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿ ಇಟ್ಟಿದ್ದರು. ಅವರಲ್ಲಿ ಕೆಲವರು 2019ರ ಅಕ್ಟೋಬರ್ನಲ್ಲಿ ಹಣವನ್ನು ಹಿಂಪಡೆಯಲು ಮುಂದಾದಾಗ ಹಗರಣ ಬಯಲಿಗೆ ಬಂದಿತ್ತು.
ಅಂದಿನ ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ್ದರು. ಸಾರ್ವಜನಿಕ ಒತ್ತಡ ಕೇಳಿಬಂದ ಹಿನ್ನೆಲೆ ಪ್ರಕಣವನ್ನು ಸಿಬಿಐಗೆ ಹಸ್ತಾಂತರಿಸುವುದಾಗಿ 2023ರ ಜನವರಿಯಲ್ಲಿ ಭರವಸೆ ನೀಡಿದ್ದರು. ಆದರೆ, ಅವರ ಮಾತು ಭರವಸೆಯಾಗಿಯೇ ಉಳಿಯಿತು.
ಸಂತ್ರಸ್ತರಲ್ಲಿ ಒಬ್ಬರಾಗಿರುವ ರಾಜಾಜಿನಗರದ ನಿವಾಸಿ ವಿಮಲಾ ಅವರು 2018ರಲ್ಲಿ ತಮ್ಮ ಉಳಿತಾಯದ ಹಣ 5 ಲಕ್ಷವನ್ನು ಎಫ್ಡಿ ಇಟ್ಟಿದ್ದರು. ಬರುವ ಹಣದಲ್ಲಿ ತಮ್ಮ ಅಸ್ವಸ್ಥ ಮಗನಿಗೆ ಚಿಕಿತ್ಸೆ ಮತ್ತು ಶಿಕ್ಷಣ ಕೊಡಿಸಲು ಇಚ್ಛಿಸಿದ್ದರು. ಆದರೆ, ಈಗ ಅವರು ಮೋಸಹೋಗಿದ್ದಾರೆ. ಅವರ ಪತಿ ಕೂಡ ಎರಡು ವರ್ಷಗಳ ಹಿಂದೆ ಸಾವಪ್ಪಿದ್ದಾರೆ. ಇದೆಲ್ಲದರ ಪರಿಣಾಮ ಅವರು ದೈನಂದಿನ ಜೀವನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ.