ವಿಧಾನಪರಿಷತ್ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜು ಪೂಜಾರಿ ಗೆಲುವು ಖಚಿತ ಎಂದು ಕಾಂಗ್ರೆಸ್ ಮುಖಂಡ ಡಿ ಆರ್ ರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ಪ್ರಕಾಶ್ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ರಾಜು ಪೂಜಾರಿಯವರು ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ರಾಜಕಾರಣಿ. ಕಾರ್ಕಳದಲ್ಲಿ ಗೋಪಾಲ ಭಂಡಾರಿಯವರಂತಹ ಸರಳ ವ್ಯಕ್ತಿತ್ವದ ರಾಜು ಪೂಜಾರಿಯವರಿಗೆ ಕಾಂಗ್ರೆಸ್ ಈ ಬಾರಿ ಅವಕಾಶ ನೀಡಿದೆ. ರಾಜು ಪೂಜಾರಿಯವರು ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ
ಜನಪ್ರತಿನಿಧಿಯಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿಕೊಂಡು ಸ್ಥಳೀಯ ಆಡಳಿತ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸುಮಾರು 6 ಸಾವಿರ ಮತಗಳ ಪೈಕಿ ಸುಮಾರು 1800 ಕಾಂಗ್ರೆಸ್ ಪಕ್ಷದ ಮತಗಳಿದ್ದು, ಮಾತ್ರವಲ್ಲದೇ ರಾಜು ಪೂಜಾರಿಯವರ ಒಳ್ಳೆಯತನ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಉಳಿದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗಲಿವೆ” ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ ಆರ್ ರಾಜು ಅವರು, “ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಯಾಪೈಸೆ ಅನುದಾನ ಬಿಡುಗಡೆ ಮಾಡದೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಕಾಮಗಾರಿ ಮಾಡಿಸಿದ್ದಾರೆ. ಆದರೆ ಕಾಮಗಾರಿಯ ಬಳಿಕ ಗುತ್ತಿದೆಗಾರರಿಗೆ ಒಂದು ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ” ಎಂದು ಆರೋಪಿಸಿದರು.
ಕಸ್ತೂರಿರಂಗನ್ ವರದಿ ಜಾರಿಯ ವಿಚಾರವಾಗಿ ಮಾತನಾಡಿದ ಅವರು, “ಈ ಯೋಜನೆ ಜಾರಿಯಾದರೆ ಸಾವಿರಾರು ಅರಣ್ಯವಾಸಿ ಕುಟುಂಗಳಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರೂ ಕೂಡ ಕಸ್ತೂರಿ ರಂಗನ್ ವರದಿ ಜಾರಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಶಿಕ್ಷಣದ ಉದ್ದೇಶ ಸಮಾಜದ ಔನ್ನತ್ಯಕ್ಕೆ ದಾರಿದೀಪವಾಗಬೇಕು: ಪ್ರೊ. ರಾಮ್ ರಾಮಸ್ವಾಮಿ
“ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಪ್ರಮುಖವಾಗಿ ಸ್ಥಳೀಯಮಟ್ಟದ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಹಾಗೂ ಬದ್ಧತೆ ಕೊರತೆಯಿಂದ ಈ ಸಮಸ್ಯೆ ಉದ್ಭವಿಸಿದೆ. ಅಂದು ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ಚಕಾರ ಎತ್ತದೇ ಈ ಗೊಂದಲಕ್ಕೆ ಎಡೆಮಾಡಿದೆ. ಆದರೆ ಕೇರಳದಲ್ಲಿ ಅಲ್ಲಿನ ಸರ್ಕಾರ ಈ ವರದಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಪರಿಣಾಮ ಈ ವರದಿ ಜಾರಿಯನ್ನು ಕೈಬಿಡಲಾಗಿದೆ” ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಭಾಕರ ಬಂಗೇರ, ತಾರಾನಾಥ ಕೋಟ್ಯಾನ್, ಮಾಜಿ ಪುರಸಭಾ ಅಧ್ಯಕ್ಷ ಸುಬಿತ್ ಏನ್ ಆರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಇದ್ದರು.
