ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿನ ಅವ್ಯವಹಾರಗಳ ಬಗ್ಗೆ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಸಂಸ್ಥೆಗೆ ಸರ್ಕಾರದಿಂದ ಬಂದಿರುವ 6.90 ಕೋಟಿ ರೂ.ಗಳ ಬಗ್ಗೆಯೂ ಸುದ್ದಿಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಅನುದಾನದ ಚರ್ಚೆಗೆ ಕಾರಣ ಸಂಸ್ಥೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಎಂಬ ಆರೋಪಗಳಿವೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯದಲ್ಲಿರುವ 50ಕ್ಕೂ ಹೆಚ್ಚು ಆದಿವಾಸಿ, ಬುಡಕಟ್ಟು ಸಮುದಾಯಗಳಿಗೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಪರಿಶಿಷ್ಟ ಸರ್ಕಾರದ ಯೋಜನೆ/ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಲು ಮುಂದಾಗಿದೆ. ಅದಕ್ಕಾಗಿ, ಕಾರ್ಯಾಗಾರ, ಉದ್ಯೋಗ ಖಾತ್ರಿ ಶಿಕ್ಷಣದ ಮಹತ್ವ ಕುರಿತು ಕಾರ್ಯಗಾರ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಬುಡಕಟ್ಟು ಸಮುದಾಯದ ಜನಪ್ರತಿನಿಧಿಗಳಿಗೆ ಹಾಗೂ ಅರಣ್ಯ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತರಬೇತಿ ನೀಡಲು, ಕೇಂದ್ರ ಸರ್ಕಾರದ ಪೋಷನ್ ಮಾಹೆ ಅಭಿಯಾನ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಳ್ಳುವ ಕುರಿತು ಶಿಬಿರಗಳನ್ನು ನಡೆಸಲು ಸಂಸ್ಥೆಗೆ 2021-22ನೇ ಸಾಲಿನಲ್ಲಿ 6.90 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಈ ಹಣವನ್ನು ಹಾಲಿ ನಿರ್ದೇಶಕರುಗಳು KMCAಗೆ ಕೊಟ್ಟು ವೆಚ್ಚ ಮಾಡಲು ಮುಂದಾಗಿದ್ದರು. ಆಗ ರಾಜ್ಯದ್ಯಂತ ಎಲ್ಲ ಆದಿವಾಸಿಗಳು ವಿರೋಧಿಸಿ, ಪ್ರತಿಭಟನೆ ನಡೆಸಿದ್ದರಿಂದ ಅವರ ಉದ್ದೇಶ ಈಡೇರಲಿಲ್ಲ. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೂಡ 6.90 ಕೋಟಿ ಅನುದಾನದ ಬಗ್ಗೆ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳನ್ನು ಸಭೆ ಕರೆದು ಅವರ ಅಗತ್ಯತೆಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಸಂಸ್ಥೆಯಿಂದಲೇ ಕಾರ್ಯಕ್ರಮಗಳನ್ನು ರೂಪಿಸಬೇಕು. ಆ ಹಣವನ್ನು ಖರ್ಚು ಮಾಡುವಂತೆ ಸೂಚನೆಯನ್ನು ನೀಡಿತ್ತು.
ಆದರೆ, ಯಾವ ಆದೇಶಕ್ಕೂ ಕಿವಿಕೊಡದ ಅಧಿಕಾರಿಗಳು, ಈ ಸಂಬಂಧ ಯಾವುದೇ ಸಭೆ ಕರೆಯದೆ ತಮ್ಮ ವಿವೇಚನೆಗೆ ತಕ್ಕಂತೆ ಹಾಗೂ ತಮಗೆ ಬೇಕಾದಂತೆ ಕ್ರಿಯಾಯೋಜನೆ ರೂಪಿಸಿ, ಹಣ ಬಳಕೆಯ ರಸೀದಿಗಳನ್ನು ಸಿದ್ದಪಡಿಸಿಕೊಂಡು 6.90 ಕೋಟಿ ಅನುದಾನವನ್ನು ಖರ್ಚು ಮಾಡುವ ಮೂಲಕ ಆದಿವಾಸಿ ಮತ್ತು ಬುಡಕಟ್ಟುಗಳಿಗೆ ಅಗತ್ಯವಿಲ್ಲದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೊರಟಿದ್ದಾರೆ. ಇದು ನಿಜಕ್ಕೂ ವಿಷಾಧನೀಯ ಸಂಗತಿ.

ಈ ಸಂಸ್ಥೆಯ ಅಧಿಕಾರಿಗಳಿಗೆ ಆದಿವಾಸಿ ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿ ಬೇಕಾಗಿಲ್ಲ. ಜೊತೆಗೆ ಈ ಜನರು ಇಂದಿಗೂ ಕಾಡುಮೇಡುಗಳಲ್ಲಿ ಶಿಕ್ಷಣವಿಲ್ಲದೆ ಬದುಕುತ್ತಿದ್ದಾರೆ. ಇವರಿಗೆ ಸಂಘಟನೆಗಳಿಲ್ಲದೆ ಅಸಂಗಡಿತರಾಗಿ ರಾಜಕೀಯ ಜ್ಞಾನಗಳಿಲ್ಲದೆ ಇರುವುದು ಅಧಿಕಾರಿಗಳಿಗೆ ವರವಾಗಿ ಪರಿಣಮಿಸಿದೆ.
ಆದ್ದರಿಂದ, ಸರ್ಕಾರವು ಮೂಲ ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿಗದಿ ಮಾಡಿರುವ 6.90 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಸ್ಪಷ್ಟ ನಿರ್ದೇಶನ ನೀಡಬೇಕಾಗಿದೆ. ಈ ಸಂಬಂಧ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರಗಳ ಸಭೆ ಕರೆದು ಅವರ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕಿದೆ. ಆ ಮೂಲಕವೇ ಅನುದಾನದ ಸದ್ಬಳಕೆ ಮಾಡಬೇಕಾಗಿದೆ. ಇಲ್ಲವಾದರೆ, ಕೇವಲ ಅನುದಾನ ಮಾತ್ರ ಬಳಕೆಯಾಗುತ್ತದೆ. ಆದರೆ, ಅದು ಯಾರಿಗೆ, ಯಾವ ಉದ್ದೇಶಕ್ಕೆ ಬಳಕೆಯಾಗಬೇಕೋ ಆ ಉದ್ದೇಶ ಈಡೇರುವುದಿಲ್ಲ.
ಸಂಸ್ಥೆಯ ಹಾಲಿ ನಿರ್ದೇಶಕರು ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಲಭ್ಯವಿಲ್ಲ. ಅವರಿಗೆ ಕರೆ ಮಾಡಿದರೂ ಫೋನ್ ಸ್ವೀಕರಿಸುವುದಿಲ್ಲ. ಹಾಗಾಗಿ, ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಮೈಸೂರಿನಲ್ಲಿ ಲಭ್ಯವಿರುವ ಯಾವುದಾದರೂ ಅಧಿಕಾರಿಗಳಿಗೆ ಸಂಸ್ಥೆಯ ನಿರ್ದೇಶಕ ಸ್ಥಾನ ನೀಡಬೇಕು. ಇಲ್ಲವಾದರೆ, ಕೂಡಲೇ ಸಂಸ್ಥೆಗೆ ಒಬ್ಬ ಕಾಯಂ ನಿರ್ದೇಶಕರನ್ನು ನೇಮಕ ಮಾಡಬೇಕು. ಜೊತೆಗೆ, ನವಡಿಜಿಟಲ್ ಯುಗದ ಅರಿವೇ ಇಲ್ಲದೆ ಕಾಡಿನಲ್ಲಿ ಬದುಕುತ್ತಿರುವ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಮಂಜೂರಾಗಿರುವ 6.90 ಕೋಟಿ ಹಣವನ್ನು ನೈಜ ಫಲಾನುಭವಿಗಳ ಶ್ರೇಯೋಭಿವೃದ್ಧಿಗೆ ಬಳಸಬೇಕು.