ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನವೆಂಬರ್ ತಿಂಗಳಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ ಪುಷ್ಪಾ ಅಮರನಾಥ್ ಹೇಳಿದರು.
ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೆ ತಲುಪಲು ಪ್ರತಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಸಮೀಕ್ಷೆ ನಡೆಸಬೇಕು. ಅಗತ್ಯ ದಾಖಲೆಗಳು ಇಲ್ಲದಿರುವವರು ಇರುವುದರಿಂದ ಅಂತಹ ಕುಟುಂಬಗಳಿಂದ ಮಾಹಿತಿ ಪಡೆದು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಗ್ಯಾರಂಟಿ ಯೋಜನೆಗಳು ಬಡಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಈ ಕಾರ್ಯಕ್ರಮಗಳನ್ನು ಪ್ರತಿ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಸಾರ್ವಜನಿಕರ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕವನ್ನು ಅಳವಡಿಸಬೇಕು. ಇದರಿಂದ ಗ್ಯಾರಂಟಿ ಯೋಜನೆ ಪಡೆಯಲು ಸಹಕಾರಿಯಾಗಲಿದೆ” ಎಂದು ಹೇಳಿದರು.
“ಇಡೀ ರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಗಳ ಪದವನ್ನು ಬಳಸಿದ್ದು ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದೊಳಗೆ ಜಾರಿ ಮಾಡಿದೆ. ವಾರ್ಷಿಕವಾಗಿ ₹56 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ ಎಂಬುದನ್ನು ಯಾರೂ ಸಹ ಮರೆಯುವಂತಿಲ್ಲ” ಎಂದು ವಿವರಿಸಿದರು.
“ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಪಾವತಿಗೆ ಬಾಕಿಯಿದ್ದು, ಶೀಘ್ರ ಪಾವತಿಯಾಗಲಿದೆ” ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, “ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಬೇಕು. ಅದರಲ್ಲೂ ಜಿಲ್ಲೆಯಲ್ಲಿ ಆದಿವಾಸಿ ಕುಟುಂಬಗಳು ಸರ್ಕಾರದ ಯೋಜನೆ ಪಡೆಯಲು ಪರಿತಪಿಸುತ್ತಿದ್ದಾರೆ. ಆದಿವಾಸಿ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಅಂತಹ ಆದಿವಾಸಿ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಕಡ್ಡಾಯವಾಗಿ ಗ್ಯಾರಂಟಿ ಯೋಜನೆ ತಲುಪಿಸುವಂತಾಗಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ನಟರಾಜು ಮಾಹಿತಿ ನೀಡಿದ್ದು, “ಜಿಲ್ಲೆಯಲ್ಲಿ 1,16,594 ಮಂದಿ ನೋಂದಣಿಯಾಗಿದ್ದು, 1,15,425 ಮಂದಿ ಫಲಾನುಭವಿಗಳಿಗೆ ನೇರ ನಗದು ಪಾವತಿಯಾಗುತ್ತಿದೆ. ಈವರೆಗೆ ₹23.08 ಕೋಟಿ ಪಾವತಿಯಾಗಿದೆ” ಎಂದು ಮಾಹಿತಿ ನೀಡಿದರು.
“ಗೃಹಜ್ಯೋತಿ ಯೋಜನೆಯಡಿ 1,56,622 ಮಂದಿಯಲ್ಲಿ 1,55,508 ಮಂದಿ ಹೆಸರು ನೋಂದಾಯಿಸಿದ್ದು, 1,114 ಮಂದಿ ಬಾಕಿ ಇದ್ದಾರೆ. ಒಟ್ಟಾರೆ ಗೃಹಜ್ಯೋತಿ ಯೋಜನೆಯಡಿ ಶೇ.99.29ರಷ್ಟು ಪ್ರಗತಿ ಸಾಧಿಸಲಾಗಿದ್ದು, ₹7,959 ಲಕ್ಷ ಸಹಾಯಧನ ಕಲ್ಪಿಸಲಾಗಿದೆ” ಎಂದು ಸೆಸ್ಕ್ ಇಇ ಅನಿತಾ ಬಾಯಿ ಮಾಹಿತಿ ನೀಡಿದರು.
“ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 99,168 ಅರ್ಹ ಪಡಿತರ ಚೀಟಿದಾರರಲ್ಲಿ 97,570 ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. 1,598 ಮಂದಿಗೆ ನಗದು ವರ್ಗಾವಣೆಗೆ ಬಾಕಿಯಿದ್ದು, ಶೇ 98.39ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ಮಾಹಿತಿ ನೀಡಿದರು.
“ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 71,12,191 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 1,49,740 ಹೆಣ್ಣುಮಕ್ಕಳು ಹಾಗೂ ಶಾಲೆ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಯೋಜನೆಯ ಪ್ರಯೋಜನ ಪಡೆದಿದ್ದು, ಸರಾಸರಿ ₹15,098 ಮಂದಿ ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ. ಸೆಪ್ಟೆಂಬರ್ 24ರವರೆಗೆ ಒಟ್ಟು ಮೊತ್ತ ₹28,58,64,957 ರಷ್ಟು ಸಂಸ್ಥೆಗೆ ಆದಾಯ ಬಂದಿರುತ್ತದೆ. ಸರಾಸರಿ ಒಂದು ದಿನದ ಆದಾಯ ₹5,94,314 ಆಗಿದೆ” ಎಂದು ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮಹಮದ್ ಅಲಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಚಿಕ್ಕನರಗುಂದ ಗ್ರಾ ಪಂ ಪಿಡಿಒ ಎಚ್ ಕೆ ಅರಳಿಕಟ್ಟಿ ಅಮಾನತಿಗೆ ಆಗ್ರಹ
ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ರೇಖಾ ಗಣಪತಿ, “ಜಿಲ್ಲೆಯಲ್ಲಿ 1,189 ಮಂದಿ ಹೆಸರು ನೋಂದಾಯಿಸಿದ್ದು, 1,015 ಮಂದಿಗೆ ಡಿಬಿಟಿ ಮೂಲಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶೇ 85ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದರು.
ಜಿ ಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್ ಐಶ್ವರ್ಯ, ಗ್ಯಾರಂಟಿ ಯೋಜನೆಯ ಪ್ರಶಾಂತ್, ಗಿರೀಶ, ಕೆ ಸಿ ಭೀಮಯ್ಯ, ನಾಸೀರ್, ಅಣ್ಣಯ್ಯ, ಕೆ ಎಂ ಬಸೀರ್, ಮುಸ್ತಾಫಾ, ಧನ್ಯ, ಕೆ ಜಿ ಪೀಟರ್, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಸೇರಿದಂತೆ ಇತರರು ಇದ್ದರು.