ಕೋಲಾರ ನಗರಸಭೆಯಲ್ಲಿ ಕೆಲಸ ಮಾಡುವ 74 ಮಂದಿ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 9 ತಿಂಗಳಿನಿಂದ ವೇತನ ನೀಡದಿರುವ ಕಾರಣ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಸ ವಿಲೇವಾರಿ ವಾಹನ ಚಾಲಕರು, ಯುಜಿಡಿ ವಾಹನ ಚಾಲಕರು, ಕಸ ತುಂಬುವವರು(ಲೋಡರ್ಸ್), ಸ್ಯಾನಿಟೈರ್ಸ್ ಸೂಪರ್ವೈಸರ್ಗಳು, ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಹಾಗೂ ಇನ್ನಿತರ ಪೌರಕಾರ್ಮಿಕರು ಹಲವಾರು ಬಾರಿ ತಮ್ಮ ವೇತನಕ್ಕಾಗಿ ಒತ್ತಾಯಿಸಿದರೂ ಸ್ಪಂದನೆ ಸಿಗುತ್ತಿಲ್ಲ.
ಮೂರ್ನಾಲ್ಕು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ನಿತ್ಯ ಮುಂಜಾನೆ 5.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಲಾರ ನಗರದ 35 ವಾರ್ಡ್ಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಮುಂದಿನ ವಾರ ಗೌರಿ ಗಣೇಶ ಹಬ್ಬವಿದ್ದು, ಅದರೊಳಗಾದರೂ ವೇತನ ನೀಡುವಂತೆ ಈ ಸ್ವಚ್ಛತಾ ಕಾರ್ಮಿಕರು ಆಗ್ರಹಿಸಿದ್ದಾರೆ. ಕನಿಷ್ಠ ಮೂರ್ನಾಲ್ಕು ತಿಂಗಳ ವೇತನವನ್ನಾದರೂ ನೀಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾ ನಗರಾಭಿವೃದ್ಧಿ ಕಚೇರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

“ಹಲವಾರು ಬಾರಿ ಹಿಂದಿನ ಪೌರಾಯುಕ್ತರು, ಈಗಿನ ಪೌರಾಯುಕ್ತರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ತಿಂಗಳುಗಟ್ಟಲೇ ವೇತನವಿಲ್ಲದೆ ಬದುಕುವುದು ಹೇಗೆಂದು ಪ್ರಶ್ನಿಸಿದ್ದೇವೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ” ಎಂದು ಹೊರಗುತ್ತಿಗೆ ಪೌರಕಾರ್ಮಿಕರು ದೂರಿದ್ದಾರೆ.
“ಕಳೆದ ತಿಂಗಳ 28ರಂದು ಪೌರಾಯುಕ್ತರು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ಕೂಡ ನಡೆದಿತ್ತು. ಗಣೇಶ ಚತುರ್ಥಿ ಹಬ್ಬದೊಳಗೆ 4 ತಿಂಗಳ ವೇತನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಇನ್ನುಳಿದ ಕುಂದುಕೊರತೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ನಮಗೆ ವೇತನ ಸಿಕ್ಕಿಲ್ಲ. ಬಡ ಕಾರ್ಮಿಕರಾದ ನಮಗೆ ಅನ್ಯಾಯವಾಗುತ್ತಿದ್ದು, ಕುಟುಂಬ ಪೋಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ” ಎಂದು ಕಾರ್ಮಿಕರು ಅವಲತ್ತುಕೊಂಡಿದ್ದಾರೆ.

“ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವೇತನ ನೀಡಬೇಕು. ಇಲ್ಲವಾದಲ್ಲಿ ಮತ್ತೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ನಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತರುತ್ತೇವೆ. ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸುತ್ತೇವೆ. ಆಗಲೂ ನಮಗೆ ವೇತನ ಸಿಗದಿದ್ದರೆ ಎಲ್ಲ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ನಾವು ಕೆಲಸವನ್ನು ಸ್ಥಗಿತಗೊಳಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನಗರದಲ್ಲಿ ಅನೈರ್ಮಲ್ಯ ಉಂಟಾಗುತ್ತದೆ. ಆಗ ನಗರಸಭೆ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ನಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಶೀಲಿಸಿ ವೇತನವನ್ನು ಬಿಡುಗಡೆ ಮಾಡಲು ಕ್ರಮವಹಿಸಬೇಕು” ಎಂದು ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಎಸ್ ಮಂಜುನಾಥ್ ಮನವಿ ಮಾಡಿದ್ದಾರೆ.
ಇತ್ತ ಆರ್ಥಿಕ ಸಂಕಷ್ಟದಲ್ಲಿರುವ ಕೋಲಾರ ನಗರಸಭೆ ಅಧಿಕಾರಿಗಳೂ ಕೂಡ ಹಣ ಹೊಂದಿಸಲು ಪರದಾಡುತ್ತಿರುವುದು ಗೊತ್ತಾಗಿದೆ. ಸರಿಯಾಗಿ ತೆರಿಗೆ ಸಂಗ್ರಹವಾಗದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ? ಹಾವೇರಿ | ನಿರಂತರ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತ ರೈತ
ಕೋಲಾರ ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಈ ದಿನ.ಕಾಮ್ಗೆ ಈ ಕುರಿತು ಪ್ರತಿಕ್ರಿಯಿಸಿದ್ದು, “ನಗರಸಭೆ ಹೊರಗುತ್ತಿಗೆಯ ಡ್ರೈವರ್ಸ್, ಲೋಡರ್ಸ್ ಹಾಗೂ ಕ್ಲಿನರ್ಸ್ಗಳಿಗೆ ಮೂರು ದಿನಗಳ ಹಿಂದಷ್ಟೇ ವೇತನ ಕೊಟ್ಟಿದ್ದೇವೆ. ಆದರೆ ಇನ್ನೂ ಕ್ರೇಡಿಟ್ ಆಗಿಲ್ಲ. ಹೊರಗುತ್ತಿಗೆ ಟೆಂಡರ್ ಕಂಡೀಷನ್ ಪ್ರಕಾರ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಗುತ್ತಿಗದಾರ ವೇತನ ನೀಡಬೇಕು. ನಾವು ನಗರಸಭೆಯಿಂದ ಗುತ್ತಿಗೆದಾರರಿಗೆ ಹಣ ಕೊಡ್ತೀವಿ. ಅವರು ಪ್ರತಿ ತಿಂಗಳು ಹೊರಗುತ್ತಿಗೆ ನೌಕರರಿಗೆ ಕೊಡಬೇಕು. ಅವರು ಡಿಲೇ ಮಾಡಿರುವ ಹಿನ್ನೆಲೆಯಲ್ಲಿ ನಾವು ನೋಟಿಸ್ ಕೊಡುತ್ತೇವೆ ಹಾಗೂ ಹೊರಗುತ್ತಿಗೆ ನೌಕರರಿಗೆ ನ್ಯಾಯಯುತವಾಗಿ ವೇತನ ನೀಡುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.