ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಅವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಗೌರವ ನಮನ ಸಲ್ಲಿಸಿದರು.
ಮುಖ್ಯ ಅತಿಥಿ ರಾಜಶೇಖರ್ ನಾರನಾಳ ಮಾತನಾಡಿ, “ನಾವು ಎಡ, ನಾವು ಬಲ ಎಂಬ ಪ್ರತಿಷ್ಠೆ ಬಿಟ್ಟು ಎಲ್ಲರೂ ಸಮಾಜ ಕಟ್ಟುವ ಕೆಲಸ ಮಾಡಬೇಕು. ಎಡ-ಬಲವೆಂದು ಕಚ್ಚಾಡುವುದೂ ಕೂಡ ನಮಲ್ಲಿ ನಾವು ಶ್ರೇಷ್ಠರೆಂದು ತೋರಿಸಿಕೊಳ್ಳುವ ಮಾನಸಿಕ ರೋಗ” ಎಂದರು.
“ಜಗತ್ತಿನ ಮಹಾ ಪುರುಷರ ಜೀವನ ಬಡತನದಲ್ಲಿ ಬಂದಿರುತ್ತದೆ. ಅವರ ಜೀವನ ನಮಗೆ ಆದರ್ಶವಾಗಿದೆ. ಜಗಜೀವನರಾಮ್ ಅವರ ತಂದೆ ಬ್ರಿಟಿಷ್ ಸರ್ಕಾರದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಡಾ.ಬಾಬು ಜಗಜೀವನರಾಮ್ ಅವರು 1931ರಲ್ಲಿ ಪದವಿ ಮುಗಿಸಿ ದಲಿತ ಶೋಷಿತರಿಗಾಗಿ ಕೆಲಸ ಮಾಡಲು ಆರಂಭಿಸುತ್ತಾರೆ. ಬನಾರಸನಲ್ಲಿ ಅಸ್ಪ್ರಶ್ಯ ಸಮುದಾಯಕ್ಕೆ ಕ್ಷೌರ ಮಾಡಲು ಬಹಿಷ್ಕಾರ ಹಾಕುತ್ತಾರೆ. ಆದರೆ, ಜಗಜೀವನರಾಮ್ ಅದಕ್ಕೆ ವಿರುದ್ಧವಾಗಿ ಬಹಿಷ್ಕಾರ ಹಾಕುತ್ತಾರೆ. ‘ಅಸ್ಪ್ರಶ್ಯರು ತಮ್ಮ ಕುಲನಾಮ ತ್ಯಜಿಸಬೇಕು’ ಎಂದು ಹೇಳುತ್ತಾರೆ. ಅಂತರ್ಜಾತಿ ಮದುವೆ ಕಡ್ಡಾಯ ಮಾಡಬೇಕು ಹಾಗೂ ಸ್ವಜಾತಿ ವಿವಾಹ ಕಾನೂನು ಬಾಹಿರ’ವೆಂದು ಕಾನೂನು ಮಾಡಬೇಕೆಂದು ಪ್ರತಿಪಾದಿಸಿದವರು ಜಗಜೀವನರಾಮ್ ಅವರು ಮಾತ್ರ” ಎಂದರು.
ಜಗಜೀವನರಾಮ್ ಹಾಗೂ ಅಂಬೇಡ್ಕರ್ ನಡುವೆ ಅಷ್ಟೊಂದು ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಸರ್ಕಾರದ ಹೊರಗಿದ್ದು ಸಮಾಜ ಕಟ್ಟುವ ಕೆಲಸ ಅಂಬೇಡ್ಕರ್ ಮಾಡಿದರೆ, ಡಾ.ಬಾಬು ಜ.ಜೀ.ರಾಮ್ ಸರ್ಕಾರದ ಒಳಗೇ ಇದ್ದು ಸಮಾಜ ಕಟ್ಟುವ ಕಲಸ ಮಾಡಿದರು. ಎಡಬಲ ಬಿಟ್ಟು ಸಮಸಮಾಜ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಡಾ. ಓ ನಾಗರಾಜು ವಿರಚಿತ ʼಹಿಂದೂಪುರʼ ಕಾದಂಬರಿ ಜನಾರ್ಪಣೆ
ಸಂಸದ ಕೆ ರಾಜಶೇಖರ ಬಸಬವರಾಜ ಹಿಟ್ನಾಳ ಮಾತನಾಡಿ, “ಡಾ.ಬಾಬು ಜಗಜೀವನರಾಮ್ ಅವರು ಉಪ ಪ್ರಧಾನಿಯಾಗಿ, ಕೇಂದ್ರ ಮಂತ್ರಿಯಾಗಿ 8 ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದವರು” ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಮದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಗುರುರಾಜ ಹಲಗೇರಿ, ವಿರೂಪಾಕ್ಷಪ್ಪ ಮೋರನಾಳ, ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಯಪ್ಪ, ರಾಮಣ್ಣ ಕಂದಾರಿ, ಗ್ಯಾನಪ್ಪ ಪೂಜಾರಿ, ಲಿಂಗರಾಜ, ಪರಶುರಾಮ ಕೆರಳ್ಳಿ, ಯಲ್ಲಪ್ಪ ಮುದ್ದಾಪುರ, ನಿಂಗಜ್ಜ ಹರ್ಲಾಪುರ ಸೇರಿದಂತೆ ಇತರರು ಇದ್ದರು.
