ಕೊಪ್ಪಳ ನಗರದ ಡಿಸಿ ಕಚೇರಿ ಹತ್ತಿರದಲ್ಲಿರುವ ಎಸ್ಟಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಕಳಪೆ ಮಟ್ಟದ ಧಾನ್ಯಗಳಿಂದ ಅಡುಗೆ ಮಾಡಲಾಗುತ್ತಿದೆ. ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ ಎಂದು ಎಐಡಿವೈಒ ಮುಖಂಡ ಶರಣು ಗಡ್ಡಿ ಹೇಳಿದರು.
ಕೊಪ್ಪಳ ನಗರದ ಎಸ್ಟಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದರು.
“ಎಸ್ಟಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು, ಗ್ರಂಥಾಲಯದಲ್ಲಿ ಪುಸ್ತಕಗಳು, ಶೌಚಾಲಯ ಸ್ವಚ್ಛತೆ ಇಲ್ಲ. ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ, ಕಂಪ್ಯೂಟರ್ಗೆ ಇಂಟರ್ನೆಟ್, ಕೀ ಬೋರ್ಡ್, ಮೌಸ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿವೆ. ಊಟದ ಮೆನು ಚಾಟ್ ಬದಲಿಸದೆ ಇರುವುದು, ವಸತಿ ನಿಲಯದ ಚರಂಡಿ ಸ್ವಚ್ಛತೆ ಮಾಡದಿರುವುದು, ದುರ್ವಾಸನೆ ತಡೆಗಟ್ಟದೇ ಇರುವುದು, ಕಸವನ್ನು ಹಾಕಲು ಕಸದ ತೊಟ್ಟಿ ಇಲ್ಲ. ಶೌಚಾಲಯದ ಬಾಗಿಲುಗಳು ಮುರಿದು ಹೋದರೂ ರಿಪೇರಿ ಮಾಡಿಲ್ಲ” ಎಂದು ದೂರಿದರು.

“ಇಷ್ಟೆಲ್ಲ ಸಮಸ್ಯೆಗಳ ಕುರಿತು ವಸತಿ ನಿಲಯದ ವಾರ್ಡನ್ ಅವರ ಗಮನಕ್ಕೆ ತಂದಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಆಶ್ವಾಸನೆಗಳನ್ನು ಕೊಡುತ್ತ ಸಮಸ್ಯೆಗಳನ್ನು ಇಟ್ಟುಕೊಂಡು ವಸತಿಗಳನ್ನು ನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿದರು.
ವಿದ್ಯಾರ್ಥಿ ಪ್ರಕಾಶ್ ಮಾತನಾಡಿ, “ಸಮಸ್ಯೆಗಳನ್ನು ಕೇಳಿದರೆ ಮೇಲಧಿಕಾರಿಗಳಿಂದ ಒತ್ತಡ ತಂದು ಇಲ್ಲಸಲ್ಲದ ಆರೋಪವನ್ನು ವಿದ್ಯಾರ್ಥಿಗಳ ಮೇಲೆ ಮಾಡಲಾಗುತ್ತಿದೆ. ಇಲ್ಲಸಲ್ಲದ ಸಬೂಬು ಹೇಳುತ್ತ ಯಾವ ವಿದ್ಯಾರ್ಥಿ ಸಮಸ್ಯೆ ಹೇಳುತ್ತಾನೋ ಆ ವಿದ್ಯಾರ್ಥಿಯ ಮೇಲೆ ವೈಯಕ್ತಿಕವಾಗಿ ಗುರಿಯಾಗಿಸಿ ವಿದ್ಯಾರ್ಥಿ ಕುಟುಂಬಸ್ಥರಿಗೆ ಫೋನ್ ಮಾಡಿ, ಆ ವಿದ್ಯಾರ್ಥಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಸಮಸ್ಯೆ ಕೇಳಿದರೆ ವಾರ್ಡನ್ ಬೇರೊಂದು ಸಮಸ್ಯೆಯನ್ನು ಹುಟ್ಟು ಹಾಕುತ್ತಾರೆ. ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಪರಶುರಾಮ್ ಮಾತನಾಡಿ, “ಊಟದ ಗುಣಮಟ್ಟ ಮತ್ತು ವಸತಿ ನಿಲಯದ ಸ್ವಚ್ಛತೆ, ಶೌಚಾಲಯ, ಕನಿಷ್ಠ ಅವಶ್ಯಕತೆಗಳು ಕುರಿತು ಮಾತನಾಡಬಾರದೆಂದರೆ ಇದು ಯಾವ ನ್ಯಾಯ? ಇದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ವಾರ್ಡನ್ ಪ್ರತಿದಿನ ವಸತಿ ನಿಲಯಕ್ಕೆ ಹಾಜರಾಗುವುದಿಲ್ಲ. ನಮ್ಮ ಮೇಲೆ ಅಸಭ್ಯ ಪದಗಳಿಂದ ನಿಂದುಸುತ್ತಾರೆ. ನಮ್ಮ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಇಲ್ಲಸಲ್ಲದ ಆರೋಪ ಮಾಡುವುದು, ನಾಮಕಾವಸ್ತೆಗೆ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಮಾಡುತ್ತಾರೆ. ಉದಾಹರಣೆ ಸ್ವಾಮಿ ವಿವೇಕಾನಂದ ಜಯಂತಿ. ಸಮಸ್ಯೆಗಳ ಕುರಿತು ಯಾವುದೇ ಸಭೆ ಆಯೋಜಿಸುವುದಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಆಗ್ರಹ
“ವಾರ್ಡನ್ ವಸತಿ ನಿಲಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ ಕೂಡಲೇ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಒಳ್ಳೆಯ ವಾತಾವರಣ ಮತ್ತು ಹಾಸ್ಟೆಲ್ನಲ್ಲಿ ಮೂಲಸೌಕರ್ಯವನ್ನು ಒದಗಿಸಿ ಕೊಡಬೇಕು” ಎಂದು ಒತ್ತಾಯಿಸಿದರು.
ವಸತಿ ನಿಲಯಗಳ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ತಾಲೂಕು ಅಧಿಕಾರಿ ಶರಣಪ್ಪ ಆಶಾಪುರ ಅವರು, ಒಂದು ವಾರದೊಳಗೆ ಸಮಸ್ಯೆಯನ್ನು ಪರಿಹಾರಿಸುವುದಾಗಿ ಭರವಸೆ ನೀಡಿದರು.
ಪ್ರಕಾಶ್, ಪರಶುರಾಮ್, ನಾಗರಾಜ್, ಬಸವರಾಜ್, ವಿನಾಯಕ್, ಮೂರ್ತಿ, ಯಮನೂರ್, ಕನಕರಾಯ, ಹನುಮೇಶ್, ಹರಿಕೃಷ್ಣ, ಶರಣಬಸವ, ಮಹೇಶ್ ಮುಂತಾದ ವಿದ್ಯಾರ್ಥಿಗಳು ಇದ್ದರು.