ಕೊಪ್ಪಳದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆ, ಮನೆ/ವಸತಿಗೆ ₹6 ಲಕ್ಷ ಸಹಾಯಧನ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರು ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಎಸ್ ಎ ಗಫಾರ್ ಮಾತಾನಾಡಿ, “ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ಹಣವನ್ನು ಮನಸೋಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧವಾಗಿ ಮಂಡಳಿಯಿಂದ ಹಲವಾರು ರೀತಿಯ ಕಿಟ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಗಳು, ಶಾಲಾ ಕಿಟ್ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಾಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇತ್ಯಾದಿ ಹೆಸರಿನಲ್ಲಿ ಮಂಡಳಿಯು ದುಂದುವೆಚ್ಚ ಮಾಡಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
“ಕಾರ್ಮಿಕ ಸಚಿವರು ಆಗಸ್ಟ್ 2024ರಂದು ಸಭೆ ನಡೆಸಿ ಒಂದು ತಿಂಗಳ ಒಳಗಾಗಿ ಕಾರ್ಮಿಕರ ನೈಜ ಬೇಡಿಕೆಗಳನ್ನು ಈಡೇರಿಸಲು ವಾಗ್ದಾನ ಮಾಡಿದ್ದರು. ಆದರೆ ಐದು ತಿಂಗಳು ಕಳೆದರೂ ಈವರೆಗೂ ಸಭೆ ನಿಗದಿ ಮಾಡಿಲ್ಲ. ಕೂಡಲೇ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನವನ್ನು ನ್ಯಾಯಾಲಯದ ಆಶಯದಂತೆ ಕೂಡಲೇ ಬಿಡುಗಡೆ ಮಾಡಬೇಕು. ಈಗಾಗಲೇ ಖಾಸಗಿಯವರಿಂದ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ನಿಲ್ಲಿಸಿ ಬಿಡುಗಡೆ ಮಾಡಿರುವ ಹಣವನ್ನು ವಾಪಸ್ ಪಡೆಯಬೇಕು. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು” ಎಂಬ ಬೇಡಿಕೆ ಮಂಡಿಸಿದರು.
ತುಕಾರಾಮ ಬಿ ಪಾತ್ರೋಟ್ ಮಾತನಾಡಿ, “2016ರಿಂದ ಬಾಕಿಯಿರುವ ಎಲ್ಲ ಸೌಲಭ್ಯಗಳ ಧನ ಸಹಾಯವನ್ನು ಕೂಡಲೇ ವಿಲೇವಾರಿ ಮಾಡಬೇಕು. ಈಗಾಗಲೇ 60 ವರ್ಷ ತುಂಬಿರುವ ಫಲಾನುಭವಿಗಳಿಗೆ ಪಿಂಚಣಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಮಾಡಬಾರದು, ನಿವೃತ್ತಿಯ ನಂತರ ಯಾವಾಗಬೇಕಾದರೂ ಅರ್ಜಿ ಸಲ್ಲಿಸಿದರೂ ಹಿಂಬಾಕಿ ಪಿಂಚಣಿ ನೀಡಬೇಕು. ಪಿಂಚಣಿಯನ್ನು ₹6,000ಕ್ಕೆ ನಿಗದಿ ಮಾಡಬೇಕು” ಎಂದು ಒತ್ತಾಯಿಸಿದರು.
ಮೌಲಾಹುಸೇನ್ ಹಣಗಿ ಮಾತನಾಡಿ, “5 ವರ್ಷ ಸೇವೆ ಪೂರೈಸಿದ ಫಲಾನುಭವಿಗೆ ವಸತಿ ನಿರ್ಮಾಣಕ್ಕೆ ಕನಿಷ್ಠ ₹6 ಲಕ್ಷ ಸಹಾಯಧನ ನೀಡಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕಟ್ಟಡ ಕಾರ್ಮಿಕರ ನಕಲಿ ಕಾರ್ಡ್ಗಳನ್ನು ತಕ್ಷಣ ರದ್ದುಪಡಿಸಿ ಮಂಡಳಿ ಅಭಿವೃದ್ಧಿಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು ಹಾಗೂ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ನಿವಾರಿಸಬೇಕು. ತಾಂತ್ರಿಕ ಸಮಸ್ಯೆ ಸಮಯದಲ್ಲಿ ಅರ್ಜಿ ಸಲ್ಲಿಸಲಾಗದ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ಎಐಟಿಯುಸಿ ಸಂಯೋಜಿತ)ಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು. ಶ್ರಮ ಸಾಮರ್ಥ್ಯ ಯೋಜನೆಯನ್ನು ನಿರ್ಮಿತಿ ಕೇಂದ್ರದ ಸಯೋಗದಲ್ಲಿ 2017-18ರಲ್ಲಿ ಜಾರಿಮಾಡಿ, 2020ರ ಲಾಕ್ ಡೌನ್ ಸಂದರ್ಭದಿಂದ ಸ್ಥಗಿತಗೊಳಿಸಿದ್ದು, ಇದರಲ್ಲಿ ಕಟ್ಟಡ ನಿರ್ಮಾಣದ ಆಯಾ ವೃತ್ತಿಗನುಗುಣವಾಗಿ 30 ದಿನಗಳ ಪ್ರಾಯೋಗಿಕ ಹಾಗೂ ಬೋಧನಾ ತರಬೇತಿ, ಮಧ್ಯಾಹ್ನದ ಊಟ, ಚಹಾ, ದಿನಭತ್ಯೆ, ಸಲಕರಣೆಗಳ ಕಿಟ್, ಪ್ರಮಾಣ ಪತ್ರ ಹೊಂದಿರುವ ಕಟ್ಟಡ ಕಾರ್ಮಿಕರ ಕೌಶಲ್ಯ ವೃದ್ಧಿಸುತ್ತದೆ. ಶ್ರಮ ಸಾಮರ್ಥ್ಯ ಯೋಜನೆ ಪುನಃ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | 10 ವರ್ಷಗಳಿಂದ ನಡೆಯದ ಗ್ರಾ.ಪಂ ಚುನಾವಣೆ; ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತ
ಸಚಿವ ಸಂತೋಷ್ ಲಾಡ್ ಮನವಿ ಸ್ವೀಕರಿಸಿ ಮಾತನಾಡಿ, “ಎರಡು ತಿಂಗಳು ತಡೆಯಿರಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಲು ಅಂಬೇಡ್ಕರ್ ಸೇವಾ ಕೇಂದ್ರ ಅಂತ ಮಾಡಿದ್ದೇವೆ. 43 ಸೆಕ್ಟರ್ಗಳಿಗೆ 43 ವ್ಯಾನ್ಗಳನ್ನು ಮಾಡಿದ್ದೇವೆ. ವ್ಯಾನ್ಗಳೇ ಮನೆ ಮನೆಗೆ ಹೋಗಿ ಪರಿಶೀಲಿಸಿದ ಬಳಿಕ ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳನ್ನು ರದ್ದು ಮಾಡಲಾಗುತ್ತದೆ. ಶ್ರಮ ಸಾಮರ್ಥ್ಯ ಯೋಜನೆ ಮರು ಜಾರಿಗೊಳಿಸಲಾಗುತ್ತದೆ” ಎಂದು ಆಶ್ವಾಸನೆ ನೀಡಿದರು.
ಎಸ್ ಎ ಗಫಾರ್, ತುಕಾರಾಮ ಬಿ, ಪಾತ್ರೋಟಿ, ಮೌಲಾ ಹುಸೇನ್ ಹಣಗಿ, ಆದಿತ್ಯ ಟಿ, ಪಾತ್ರೋಟಿ, ಪ್ರಸಾದ್ ಕಾಳೆ, ಪ್ರಕಾಶ್ ಎಸ್ ದೇವರಮನಿ ಮುಂತಾದವರು ಇದ್ದರು.