ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ. ಯುವಜನ, ವಿದ್ಯಾರ್ಥಿ ಸಂಘಟನೆಗಳ ಕ್ರಿಯಾಶೀಲತೆಯಿಂದ ದೇಶದ ಗಂಡಾಂತರಗಳನ್ನು ಹೋಗಲಾಡಿಸಬೇಕಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ ನಾಯ್ಕ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸಂಘಟನಾತ್ಮಕವಾಗಿ ಬೆಳೆಯಲು, ತಾವರಗೆರೆಯ ಬುದ್ಧ ವಿಹಾರದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಎರಡು ದಿನದ ಕರ್ಯಾಗಾರದಲ್ಲಿ ಮಾತನಾಡಿದರು.
“ಭವಿಷ್ಯವನ್ನ ರೂಪಿಸಿಕೊಳ್ಳಬೇಕಾದ ಇಂದಿನ ಯುವಕರು ದ್ವೇಷ ದಳ್ಳುರಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಧಾರ್ಮಿಕವಾದಿಗಳು ಶಾಲೆ-ಕಾಲೇಜು ವಿದ್ಯಾರ್ಥಿಗಳನ್ನು ಧರ್ಮದ ನಶೆಯಲ್ಲಿ ಮಿಂದೇಳಿಸುತ್ತಿದ್ದು, ಅವರ ಮನದಾಳಲ್ಲಿ ವಿಷದ ಬೀಜ ಬಿತ್ತಿ ವಿದ್ಯಾರ್ಥಿ ಜೀವನವನ್ನೇ ನರಕದ ಕೂಪಕ್ಕೆ ತಳ್ಳುತ್ತಿದ್ದಾರೆ. ಇದನ್ನು ಕೆವಿಎಸ್ ಸಂಘಟನೆ ಕೆಲವು ದ್ವೇಷ ಹರಡುವ ಸಂಘಟನೆಗಳಿಂದ ಹೊರ ತಂದು ಸುಭದ್ರ ದೇಶ ಕಟ್ಟುವಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಬೇಕು. ಅಂತಹ ಕೂಪದಿಂದ ಹೊರ ತರಬೇಕಾದದ್ದೂ ಕೂಡ ಇಂತಹ ಸಂಘಟನೆಗಳ ಪ್ರಮುಖ ಪಾತ್ರವಾಗಿದೆ” ಎಂದು ಹೇಳಿದರು.

ಸಿರಾಜ್ ಅಹ್ಮದ್ ಮಾತನಾಡಿ “ಕೆವಿಎಸ್ ಸಂಘಟನೆ ಚೊಕ್ಕಟವಾಗಿದ್ದು, ಬಹಳ ಕ್ರಿಯಾಶೀಲವಾಗಿದೆ. ಈ ಸಂಘಟನೆಗೆ ನಮ್ಮ ಎಲ್ಲ ಸಹಕಾರವನ್ನು ಕೊಡುತ್ತೇವೆ” ಎಂದು ಭರವಸೆ ಕೊಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿಯರ ಸಾವಿನ ಪ್ರಕರಣ ತಡೆಯುವಲ್ಲಿ ಸಚಿವ ದಿನೇಶ್, ಶರಣಪ್ರಕಾಶ್ ವಿಫಲ; ರಾಜೀನಾಮೆಗೆ ಕೆಆರ್ಎಸ್ ಆಗ್ರಹ
ರಫಿ ಮಹ್ಮದ್ ಮಾತನಾಡಿ, “ಬಾಬಾ ಸಾಹೇಬರ ಆಶಯ ಸಾಕಾರಗೊಳಿಸಬೇಕಾಗಿದೆ. 2014ರಿಂದ ದೇಶದಲ್ಲಿ ಧರ್ಮ ಧರ್ಮಗಳ ಮಧ್ಯ, ಜಾತಿಗಳ ಮಧ್ಯ, ಭಾಷೆಗಳ ಹೆಸರಲ್ಲಿ ಬಹುದೊಡ್ಡ ಕಂದಕ ಸೃಷ್ಟಿಯಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಬಡತನ- ಹಸಿವಿನ ಹಾಹಾಕಾರ ಹೆಚ್ಚಾಗಿದೆ. ಇಷ್ಟೆಲ್ಲಾ ಸಮಸ್ಯಗಳು ಇದ್ದರೂ ವಿದ್ಯಾರ್ಥಿ ಯುವ ಜನತೆ ಧರ್ಮದ ಹೆಸರಲ್ಲಿ, ಹುಸಿ ದೇಶ ಪ್ರೇಮದ ಹೆಸರಲ್ಲಿ ಅನ್ಯಧರ್ಮೀಯರ ವಿರುದ್ಧ ದ್ವೇಷ ಕಾರುವ ಮನಸ್ಥಿತಿಯವರಾಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಸರೋವರ ಬೆಂಕಿಕೆರೆ, ದುರ್ಗೇಶ ಬರಗೂರಿ, ಮರಿಸ್ವಾಮಿ ಬರಗೂರು, ನೀಲಕಂಠ ಬಡಿಗೇರ, ಮಮತಾ ಚಿತ್ರದುರ್ಗ, ದೀಪಾ, ಯಮುನಾ, ಪ್ರಗತಿ, ಲಕ್ಷ್ಮೀ, ಶ್ರೀದೇವಿ ಬರಗೂರು ಸೇರಿದಂತೆ ಬಹುತೇಕರು ಇದ್ದರು.