ಕಾಶ್ಮೀರದ ಪಹಲ್ಗಾಮ್ನಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದ ಭೀಕರ ಭಯೋತ್ಪಾದಕ ದಾಳಿ ದೇಶದ ಭದ್ರತೆಗೆ ಕಠಿಣ ಸವಾಲು ಎಸೆದಿದೆ. ಅಮಾಯಕರ ಜೀವ, ಜೀವನ ದ್ವಂಸಗೊಳಿಸಿದ ಈ ಕುಕೃತ್ಯವನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನ್ವಾದಿ) ಮಾಸ್ ಲೈನ್ ಕೇಂದ್ರ ಹಾಗೂ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
“ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ ಶಕ್ತಿಗಳು, ಎಲ್ಲಾ ಧಾರ್ಮಿಕ ಮೂಲಭೂತವಾದಿಗಳ ಮತ್ತು ಕೋಮುವಾದಿಗಳ ಪೋಷಕರಾಗಿದ್ದಾರೆ. ಈ ಭೀಕರ ಭಯೋತ್ಪಾದನೆಯ ದುರ್ಘಟನೆ ಕಾರ್ಪೊರೇಟ್ ಕುಳಗಳಿಗೆ ಖುಷಿ ತಂದಿರಬಹುದು. ಈ ದಾಳಿಯು, ಜನರಿಗೆ ಜಾತಿ, ಭಾಷೆ, ಧರ್ಮದ ನಶೆ ಏರಿಸಿ ಪರಸ್ಪರ ಬಡಿದಾಡಿಕೊಳ್ಳುವಂತೆ ಮತ್ತು ಸಾಮೂಹಿಕ ಹತ್ಯೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅವರ ಉದ್ದೇಶ ಫಲ ಕೊಟ್ಟಿದೆ. ದೇಶವನ್ನು ಲೂಟಿ ಮಾಡುವ ನೀತಿಗಳು ಮತ್ತು ಕಾಯ್ದೆಗಳು ಜನರಿಗೆ ಅರ್ಥವಾಗದಂತೆ ಮಾಡುವುದೇ ಅವರ ಮುಖ್ಯ ಅಜೆಂಡಾ. ಈ ಭೀಕರ ಭಯೋತ್ಪಾದಕ ದಾಳಿಯು ಕಾಶ್ಮೀರ ಒಟ್ಟಾರೆ ಪರಿಸ್ಥಿತಿಯನ್ನು ಸಂಪೂರ್ಣ ಸ್ಥಿರಗೊಳಿಸುವ ಮೋದಿ ಸರ್ಕಾರದ ಸಮರ್ಥನೆಯ ಪೊಳ್ಳನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ” ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಡಿ ಎಚ್ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
“370ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ರಾಜ್ಯವನ್ನು ಪೂರ್ಣ ಪ್ರಮಾಣದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು, ರಾಜಕೀಯ ಸಮಸ್ಯೆಗೆ ಸೂಕ್ತ ಉತ್ತರವಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಜನರ ಆಶೋತ್ತರಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮತ್ತು ಜನರಿಗೆ ಪೂರಕವಾದ ಅರ್ಥ ಪೂರ್ಣ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಡೆಸುವುದು ಪ್ರಾಥಮಿಕ ಆದ್ಯತೆಯಾಗಬೇಕು. ಕೋಮುವಾದಿ ಶಕ್ತಿಗಳ ವಿಶೇಷವಾಗಿ ಹಿಂದುತ್ವ ಶಕ್ತಿಗಳ ದ್ವೇಷದ ಪ್ರತಿಯೊಂದು ಪ್ರಯತ್ನವನ್ನು ವಿರೋಧಿಸಲು ನಾವು ಭಾರತದ ಜನರಿಗೆ, ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮನವಿ ಮಾಡುತ್ತೇವೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ
ಕೋಮು ಧ್ರುವೀಕರಣವನ್ನು ಮತ್ತು ಈ ಭಯೋತ್ಪಾದಕ ದಾಳಿಯನ್ನು ಕಾಶ್ಮೀರದ ಜನರು ಈಗಾಗಲೇ ಬಹಿರಂಗವಾಗಿ ಖಂಡಿಸಿದ್ದಾರೆ. ಮಾನವರನ್ನು ಬಲಿ ಪಡೆಯುವ ಮುಖ್ಯವಾಗಿ ಅಮಾಯಕ ಜನರನ್ನು ಕೊಲ್ಲುವ ಜಗತ್ತಿನ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸಿ ಹೋರಾಡಬೇಕು ಎಂದು ಸಿಪಿಐಎಂಎಲ್ ಮೂಲಕ ಕರೆ ನೀಡಿದರು.