ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದದಿಂದ ರೈತರು ಕಂಗಲಾಗಿದ್ದು, ನೂರಾರು ವರ್ಷಗಳಿಂದ ಬೇಸಾಯ ಮಾಡಿಕೊಂಡು ಬಂದಂತಹ ರೈತರಿಗೆ ಆತಂಕ ಶುರುವಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆ ವತಿಯಿಂದ ಕಾರಟಗಿ ನವಲಿ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಕೊಪ್ಪಳ ಜಿಲ್ಲೆಯ ಹಲವು ತಾಲೂಕುಗಳಲ್ಲಿ ನೋಟಿಸ್ ಕಳಿಸಿದ್ದು, ರೈತರಲ್ಲಿ ಆತಂಕಗಳನ್ನು ಸೃಷ್ಟಿಮಾಡಿದಂತಹ ಈ ವಕ್ಫ್ ಮಂಡಳಿಯು ಅವಾಂತರ ಮಾಡಿದೆ. ಇದರಿಂದ ಎಲ್ಲ ರೈತರಿಗೂ ತೊಂದರೆಯಾಗಿದ್ದು, ಕೂಡಲೇ ಇದನ್ನು ನಿಲ್ಲಿಸಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ಇರುವುದನ್ನು ತೆರವುಗೊಳಿಸಬೇಕು” ಎಂದು ಒತ್ತಾಯಿಸಿದರು.
ರೈತ ಸಂಘಟನೆಯ ಮುಖಂಡ ಶರಣಪ್ಪ ದೊಡ್ಡಮನಿ ಮಾತನಾಡಿ, “ವಕ್ಫ್ ಬೋರ್ಡ್, ರಾಜ್ಯದಲ್ಲಿ ರೈತರ ಭೂಮಿ, ದೇವಸ್ಥಾನ, ಶಾಲೆಗಳು, ಮಠ ಮಂದಿರಗಳ ಆಸ್ತಿಗಳನ್ನು ಕಬಳಿಕೆ ಮಾಡುತ್ತಿದೆ. 974ರಲ್ಲಿ ವಕ್ಫ್ ಬೋರ್ಡ್ ಸ್ಥಾಪನೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಅದನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
“ಕೇಂದ್ರದಲ್ಲಿ 1995 ರಂದು ಆದೇಶ ಹೊರಡಿಸಿದ್ದು, 2013ರಲ್ಲಿ ಜಾರಿಗೆ ಬಂದಿರುವ ವಕ್ಫ್ ಮಂಡಳಿಯನ್ನ ರದ್ದುಪಡಿಸಿ, ರೈತರ ಜಮೀನು ಉಳಿಸಿ, ರೈತರ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ರೈತರ ಪಹಣಿಗಳಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ವಕ್ಫ್ ಆಸ್ತಿಯೆಂದು ನಮೂದಿಸಿದ್ದು, ಕೂಡಲೇ ಅದನ್ನು ತೆಗೆದುಹಾಕಬೇಕು” ಎಂದರು.
“ವಕ್ಫ್ ಇಲಾಖೆಯ 1974ರ ಗೆಜೆಟ್ನಲ್ಲಿರುವ ರೈತರ ಆಸ್ತಿಗಳನ್ನು ತೆಗೆದು ಹಾಕಬೇಕು. ವಕ್ಫ್ ಇಲಾಖೆಯಿಂದ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲ ರೈತರ ಜಮೀನುಗಳಿಗೆ ತೊಂದರೆ ನೀಡುವುದಿಲ್ಲ ಯಾವುದೇ ಖಾತೆಯನ್ನು ಬದಲಾವಣೆ ಮಾಡುವುದಿಲ್ಲವೆಂದು ಆದೇಶ ಮತ್ತು ಮಾರ್ಗಸೂಚಿ ಹೊರಡಿಸಬೇಕು” ಎಂದರು.
“ರಾಜ್ಯದಲ್ಲಿರುವ ಕೆಲ ರೈತರ ಜಮೀನಿನಲ್ಲಿ ಇನಾಂ, ವಕ್ಫ್ ಎಂದು ನಮೂದಿಸಿದ್ದನ್ನು ಸರ್ಕಾರ ತಕ್ಷಣ ತೆಗೆದು ಹಾಕಬೇಕು. ವಕ್ಫ್ ಹೆಸರಿನಲ್ಲಿನ ರೈತರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗುತ್ತಿದ್ದು, ಇದನ್ನು ಇಲ್ಲಿಗೆ ಕೈಬಿಡಬೇಕು. ಅಲ್ಲದೆ ರಾಜ್ಯ ಸರ್ಕಾರ ಈ ಬಗ್ಗೆ ರೈತರಲ್ಲಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
“ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 257 ಎಕರೆ, ಗಂಗಾವತಿಯಲ್ಲಿ 167 ಎಕರೆ, ಕಾರಟಗಿ ತಾಲೂಕಿನಲ್ಲಿ 149 ಎಕರೆ ಜಮೀನು ಇದ್ದು ತಾಲೂಕಿನಲ್ಲಿ 997 ಎಕರೆ ಕುಕನೂರು ತಾಲೂಕಿನಲ್ಲಿ 974 ಎಕರೆ, ಕುಷ್ಟಗಿ ತಾಲೂಕಿನಲ್ಲಿ 67 ಎಕರೆ, ಯಲಬುರ್ಗಾ ತಾಲೂಕಿನಲ್ಲಿ 324 ಎಕರೆ ಜಮೀನಿದೆಯೆಂದು ಕೊಪ್ಪಳ ಜಿಲ್ಲಾ ವಕ್ಫ್ ಇಲಾಖೆ ಹೇಳುತ್ತಿದೆ. ಜಿಲ್ಲೆಯ ಎಲ್ಲ ಆಸ್ತಿಗಳನ್ನು ವಕ್ಫ್ ಇಲಾಖೆಯಿಂದ ಕೈಬಿಡಬೇಕು ಮತ್ತು ಇಲಾಖೆಯಿಂದ ಕೈ ಬಿಟ್ಟ ಬಗ್ಗೆ ರೈತರಿಗೆ ಆದೇಶ ಪ್ರತಿಯನ್ನು ನೀಡಿ ಮಾರ್ಗಸೂಚನೆ ಹೊರಡಿಸಬೇಕು” ಎಂದು ಒತ್ತಾಯಿಸಿದರು.
“ಮಣ್ಣಿನ ಮಕ್ಕಳ ಬಾಯಲ್ಲಿ ಮಣ್ಣು ಹಾಕಲು ಯಾವುದೇ ಸರ್ಕಾರ ಪ್ರಯತ್ನಪಟ್ಟರೆ ಅವರ ಮುಂದಿನ ರಾಜಕೀಯ ಜೀವನದಲ್ಲಿ ಮಣ್ಣಿನ ಮಕ್ಕಳು ಅವರಿಗೆ ಮಣ್ಣುಮುಕ್ಕಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ನೆಲಮಂಗಲ | ಕೃಷಿ ಭೂಮಿ ಸ್ವಾಧೀನ ಕೈಬಿಟ್ಟು, ಕೃಷಿಯನ್ನೇ ಅಭಿವೃದ್ಧಿಪಡಿಸಿ ; ರೈತರ ಆಗ್ರಹ
“ರಾಜ್ಯದ ರೈತರ ಹಿತ ಕಾಪಾಡಬೇಕು. ಒಂದು ವೇಳೆ ಇದರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಮಟ್ಟದಲ್ಲಿ ರಾಜ್ಯದ ಸಂಘದ ಮೂಲಕ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಸ್ತಫ ಮುಲ್ಲಾ, ಪಂಪಣ್ಣ ನಾಯಕ್, ಮರಿಸ್ವಾಮಿ, ಬರ್ಮಣ್ಣ ದೊಡ್ಡನಗೌಡ, ಸಿದ್ದು, ರಾಮಣ್ಣ, ಜಡಿಯಪ್ಪ ಸೇರಿದಂತೆ ಹಲವಾರು ರೈತರು, ರೈತ ಮುಖಂಡರು ಇದ್ದರು.
