ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆ ವಿರುದ್ಧ ಜನಪರ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಗವಿಮಠದ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಕೊಪ್ಪಳದ ಹಾಲವರ್ತಿ ಗ್ರಾಮದಲ್ಲಿ ₹54 ಸಾವಿರ ಕೋಟಿ ರೂಪಾಯಿ ಬಂಡವಾಳದ ಬೃಹತ್ ಸ್ಟೀಲ್ ಆ್ಯಂಡ್ ಪವರ್ ಘಟಕ ಸ್ಥಾಪನೆಗೆ ಬಲ್ಡೋಟಾ ಕಂಪನಿ ಮುಂದಾಗಿದೆ. ಆದರೆ, ಪರಿಸರ ಮಾಲಿನ್ಯ ಮತ್ತು ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಈ ವಿರೋಧ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಕೊಪ್ಪಳ ಬಂದ್ ಕೂಡ ಘೋಷಿಸಲಾಗಿದೆ. ಕಾರ್ಖಾನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜತೆಗೆ, ಅದರಿಂದಾಗುವ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯ” ಎಂದು ಸಂಘಟನೆ ಕಾರ್ಯಕರ್ತರಾದ ಸಂಜಯ್ಯಾ ಚಿಕ್ಕಮಠ, ಕೊಪ್ಪಳ ವಿವೇಕ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
“ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಹಾಲವರ್ತಿ ಗ್ರಾಮದಲ್ಲಿ ಬಲ್ಡೋಟಾ ಕಂಪನಿ ರಾಜ್ಯದ ಎರಡನೇ ಅತಿದೊಡ್ಡ ಸ್ಟೀಲ್ ಆ್ಯಂಡ್ ಪವರ್ ಪ್ಲ್ಯಾಂಟ್ ತೆರೆಯಲು ಮುಂದಾಗಿದೆ. ಆದರೆ, ಈ ಕಾರ್ಖಾನೆ ಆರಂಭಕ್ಕೆ ಕೊಪ್ಪಳದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧಿ ಹೋರಾಟಕ್ಕೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದರು.
“ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಹೊರವಲಯದಲ್ಲಿ ಎಂಎಸ್ಪಿಎಲ್ ಸ್ಟೀಲ್ ಘಟಕವಿದ್ದು, ಇದೀಗ ಅದನ್ನು ದೊಡ್ಡ ಪ್ರಮಾಣದ ವಿಸ್ತರಣೆಗೆ ಮುಂದಾಗಿದೆ. ಸರಿಸುಮಾರು ₹54 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಹೂಡುತ್ತಿದ್ದು, ಇಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನೆ ಸಾಮಾರ್ಥ್ಯದ ಘಟಕದ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಅನೇಕ ವರ್ಷಗಳ ಹಿಂದೆಯೇ ಕಂಪೆನಿ 380 ರೈತರಿಂದ ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು ಪಡೆದಿದ್ದು, ಇದೀಗ ಘಟಕ ಆರಂಭದ ಕೆಲಸ ಆರಂಭಿಸಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೂಡಾ ಸರ್ಕಾರ ಮತ್ತು ಕಂಪನಿ ಒಡಬಂಡಿಕೆಗೆ ಸಹಿ ಹಾಕಿವೆ. ಈ ಘಟಕದಿಂದ 15ಸಾವಿರ ಜನರಿಗೆ ಉದ್ಯೋಗ ಸಿಗಲಿದೆಯೆಂದು ಕಂಪನಿ ಹೇಳಿದೆ. ಆದರೂ ದೊಡ್ಡ ಸ್ಟೀಲ್ ಘಟಕ ಆರಂಭವಾಗುತ್ತಿರುವುದು ಕೊಪ್ಪಳ ಜಿಲ್ಲೆಯ ಜನರ ಸಂಕಟಕ್ಕೆ ಕಾರಣವಾಗಿದೆ” ಎಂದರು.
“ಜಿಲ್ಲೆಯಲ್ಲಿ ಸರಿಸುಮಾರು 200ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಈಗಾಗಲೇ ಕಾರ್ಖಾನೆಗಳಿಂದ ಹೊರಸೂಸುವ ಧೂಳಿನಿಂದ ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಹದಗೆಡುತ್ತಿದೆ. ಇದೀಗ ದೊಡ್ಡ ಕಾರ್ಖಾನೆ ಆರಂಭದಿಂದ ಜನರ ಜೀವನ ಮತ್ತಷ್ಟು ಹಾಳಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾರ್ಖಾನೆ ಬೇಡವೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ ವಿಶ್ವವಿದ್ಯಾಲಯದ ಉಳಿವಿಗೆ ಎಸ್ಎಫ್ಐ, ಡಿವೈಎಫ್ಐ ಹೋರಾಟ
“ಒಂದಡೆ ಕಾರ್ಖಾನೆ ಆರಂಭಕ್ಕೆ ಸಿದ್ದತೆ ನಡೆದರೆ, ಇನ್ನೊಂದೆಡೆ ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ವಿರೋಧಿ ಹೋರಾಟ ತೀರ್ವ ಸ್ವರೂಪ ಪಡೆಯುತ್ತಿದೆ. ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಈಗಾಗಲೇ ಪೆಬ್ರವರಿ 24ಕ್ಕೆ ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಕೊಪ್ಪಳ ಗವಿಮಠದ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬುಧವಾರ ಗವಿಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿದ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟಕರು, ಹೋರಾಟಕ್ಕೆ ತಮ್ಮ ನೇತೃತ್ವ ಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ಸ್ವಾಮೀಜಿ ಎಲ್ಲರ ನೇತೃತ್ವದಲ್ಲಿ ಹೋರಾಟ ಮಾಡೋಣಾ ಅಂತ ಹೇಳಿದ್ದಾರೆ” ಎಂದು ತಿಳಿಸಿದರು.
“ಕಾರ್ಖಾನೆಯಿಂದ ಕೊಪ್ಪಳಕ್ಕೆ ದೊಡ್ಡ ಮಟ್ಟದ ತೊಂದರೆಯಾಗುತ್ತದೆ. ತೊಟ್ಟಿಲುಗಳ ಸಂಖ್ಯೆ ಕಡಿಮೆಯಾಗಿ ಸ್ಮಶಾನಗಳ ಸಂಖ್ಯೆ ಹೆಚ್ಚಾಗುತ್ತವೆ. ಹೀಗಾಗಿ ನಮ್ಮ ಭಾಗದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ತೆರೆಯದಂತೆ ನೋಡಿಕೊಳ್ಳೋಣ”ವೆಂದು ಗವಿಮಠದ ಸ್ವಾಮೀಜಿ ಸಂಘಟಕರಿಗೆ ಬೆಂಬಲ ವ್ಯಕ್ತಪಡಿಸಿರುವುದು ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸಿವೆ.
