ಉತ್ತರ ಕರ್ನಾಟಕದಲ್ಲಿಯೇ ತಿಂಗಳಾನುಗಂಟಲೆ ಜರುಗುವ ಜಾತ್ರೆ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ. ಗವಿಮಠದ ಜಾತ್ರೆ 2010 ವರ್ಷಗಳ ಐತಿಹಾಸಿಕ ಪರಂಪರೆಯಿ. 1816ರಲ್ಲಿ ಗವಿಸಿದ್ಧೆಶ್ವರರ ರಥೋತ್ಸವ ನಡೆಯುತ್ತ ಬಂದಿದೆ.
ಜಾತ್ರೆಯ ತಯಾರಿ: ಒಂದು ತಿಂಗಳಿಂದ ಜಾತ್ರೆಯ ತಯಾರಿ ನಡೆದಿದ್ದು, ಹದಿನಾರು ಎಕರೆ ಪ್ರದೇಶದ ಆವರರಣದಲ್ಲಿ ವ್ಯಾಪಾರಿಗಳಿಗೆ ಮಳಿಗೆಗಳು, ಫಲಪುಷ್ಪ ಪ್ರದರ್ಶನದಂತಹ ತಯಾರಿಗಳು ನಡೆದವು.
ಜಾಗೃತಿ ಜಾಥಾ ಅಭಿಯಾನ-2025: ಸಕಲಚೇತನ ಎಂಬ ಶೀರ್ಷಿಕೆಯಲ್ಲಿ ವಿಕಲಚೇತನರ ನಡೆ ಸಕಲಚೇತನರ ಕಡೆ ಎಂಬ ಘೋಷ ವಾಕ್ಯದಲ್ಲಿ ಉಚಿತವಾಗಿ ಕೃತಕ ಕೈ-ಕಾಲು, ಶ್ರವಣ ಸಾಧನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಜೀವನಕ್ಕೆ ಊರುಗೋಲು ಆಗುವ ಸಂಕಲ್ಪ ಮಾಡಲಾಯಿತು.
ಭಕ್ಷ್ಯ-ಬೋಜನ ದಾಸೋಹ: ತಿಂಗಳಿನಿಂದಲೂ ದಾಸೋಹ ನಡೆಯುತ್ತಿದ್ದು, ಜಿಲ್ಲೆಯ ಸುತ್ತಲ ಗ್ರಾಮಸ್ಥರು, ಪರ ಜಿಲ್ಲೆಯವರು ದಾಸೋಹಕ್ಕೆ ಸಾವಿರಾರು ರೊಟ್ಟಿ ತಂದು ಕೊಡುತ್ತಿದ್ದು, ದವಸ-ಧಾನ್ಯ ಸ್ವಯಂ ಪ್ರೇರಿತರಾಗಿ ಮಠಕ್ಕೆ ದೇಣಿಯಾಗಿ ಕೊಡುತ್ತಾರೆ. ತರಹೇವಾರಿ ಸಿಹಿ ಪದರ್ಥಗಳಾದ ಹೊಳಿಗೆ, ಗರ್ಚಿಖಾಯಿ, ಕಡಬು, ಲಾಡು, ತರಕಾರಿ, ಚಟ್ನಿ ಸುಮಾರು ಇಪ್ಪತ್ತು ಕ್ವಿಂಟಾಲ್ ಸಾವಯವ ಬೆಲ್ಲದ ಜಿಲೇಬಿಯನ್ನು ಭಕ್ತರು ಪ್ರತಿ ವರ್ಷ ದಾನರೂಪದಲ್ಲಿ ಕೊಡುತ್ತಾರೆ.

ಪ್ರತಿವರ್ಷವೂ ವಿಶೇಷ ತಿನಿಸು ತಯಾರಿಸುವ ಸಿಂಧನೂರಿನ ಗೆಳೆಯರ ಬಳಗ ಈ ಬಾರಿ ಲಕ್ಷಂತಾರ ಜನಕ್ಕೆ ಸಾವಯವ ಬೆಲ್ಲದ ಜಿಲೇಬಿ ಉಣಬಡಿಸಲು ಸಿದ್ದತೆ ಮಾಡಿದೆ. ಈ ಗೆಳೆಯರ ಬಳಗ ಪ್ರತಿ ವರ್ಷ ತಮ್ಮೂರಿನ ಗ್ರಾಮಸ್ಥರು ಜಾತಿ, ಧರ್ಮ ಮೀರಿದ ಭಾವೈಕೆತೆಯಿಂದ ಆರು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆಯನ್ನು ತಯಾರಿಸಿಕೊಂಡು ಬಂದು ಇಲ್ಲಿನ ದಾಸೋಹಕ್ಕೆ ನೀಡುತ್ತಾರೆ. ಈ ಬಾರಿ ಮಠದ ಆವರಣದಲ್ಲಿಯೇ ಜಿಲೇಬಿ ತಯಾರಿಸುತ್ತಿದ್ದಾರೆ. ಸುಮಾರು ಹದಿನೆಂಟು ಲಕ್ಷ ಜಿಲೇಬಿಗಳನ್ನು ತಯಾರಿಸಲಾಗುತ್ತಿದ್ದು, ಜಿಲೇಬಿ ತಯಾರಿಕೆಯ ಹಂತಗಳಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಒಂದೇ ಜಾಗದಲ್ಲಿ ಜಿಲೇಬಿ ತಯಾರಿಸುವುದರಲ್ಲಿ ತೊಡಗಿದ್ದಾರೆ.

“ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ ನಡೆಯುವ ದಿನ ಮತ್ತು ಮರುದಿನ ಜಿಲೇಬಿಗಳನ್ನು ದಾಸೋಹದಲ್ಲಿ ನೀಡಲಾಗುತ್ತದೆ. ಇವೆಲ್ಲವೂ ತಯಾರಿಕೆಯ ಒಂದು ಭಾಗವಾದರೆ ಲಕ್ಷಾಂತರ ಜಿಲೇಬಿಗಳನ್ನು ಹೇಗೆ ತಯಾರಿಸಲಾಗುತ್ತಿದೆ ಎನ್ನುವ ಕುತೂಹಲದಿಂದ ಜನ ಜಿಲೇಬಿ ತಯಾರಿಕೆ ನೋಡಲು ಬರುತ್ತಿದ್ದಾರೆ. ಸಿಹಿ ತಯಾರಿಕೆಗೆ ಸುಮಾರು ಹದಿನೆಂಟಕ್ಕೂ ಲಕ್ಷಕ್ಕೂ ಹೆಚ್ಚು ಖರ್ಚಾಗಬಹುದು, ಇದಕ್ಕೆ ಮಠದ ಭಕ್ತರು ಹಣಕಾಸಿನ ಸಹಾಯ ಮಾಡಿರುತ್ತಾರೆ” ಎಂದು ಸ್ಥಳೀಯ ನಿವಾಸಿ ವಿಜಯ ಕುಮಾರ್ ತಿಳಿಸಿದರು.

“ಜಿಲೇಬಿ ತಯಾರಿಸಲು ಅನೇಕರು ಸೇವಾಮನೋಭಾವದಿಂದ ಬರುತ್ತಾರೆ. ಇನ್ನು ಕೆಲವರನ್ನು ಹಣ ನೀಡಿ ಕೆಲಸಕ್ಕೆ ಕರೆದುಕೊಂಡು ಬರಲಾಗಿದೆ” ಎಂದು ಸಮಾನ ಮನಸ್ಕ ಸ್ನೇಹಿತರ ತಂಡದ ಪ್ರಮುಖ ಸಂಗಪ್ಪ ಗೋರೆಬಾಳ ತಿಳಿಸಿದರು.


ಸಾಂಸ್ಕೃತಿಕ, ಕ್ರಿಡಾ ಉತ್ಸವ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷವೂ ಕ್ರೀಡೆಗಳನ್ನು ಆಯೋಜಿಸಲಾಗಿರುತ್ತದೆ. ಮ್ಯಾರಥಾನ್ ಒಳಗೊಂಡಂತೆ ದೇಶಿಯ ಕ್ರಿಡೆ ಮಲ್ಲಗಂಬ, ಮುಂಗೈ ಕುಸ್ತಿ, ಕುಸ್ತಿ, ಕಬಡ್ಡಿ, ಕಲ್ಲುಗುಂಡು ಎತ್ತುವುದು ಸೇರಿದಂತೆ ಹಲವು ಕ್ರೀಡೆಗಳ ಜತೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.

ಜಾನಪದ ಕಲಾ ತಂಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಕಲಾ ತಂಡಗಳಾದ ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು, ನಂದಿಕೋಲು ಮುಂತಾದ ಸಾಂಸ್ಕೃತಿಕ ಮೆರಗು ಕಂಡುಬಂದಿತು.
ಮದ್ದು ಸುಡುವ ಕಾರ್ಯಕ್ರಮ: ಗವಿಮಠದ ಜಾತ್ರೆಯ ಎರಡನೇ ದಿನ ರಾತ್ರಿ 11ರ ಸುಮಾರಿಗೆ ಮದ್ದು ಸುಡುವ ಕಾರ್ಯಕ್ರಮ. ಆಕಾಶದೆತ್ತರಕ್ಕೆ ಬೆಳಕಿನ ರಾಶಿ ಹರಡುತ್ತದೆ. ಜಾತ್ರೆಗೆ ಯಾವುದೇ ಅಡೆತಡೆಯಾಗದಂತೆ ನಡೆದ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುತ್ತದೆ. ಲಕ್ಷಾಂತರ ಮಂದಿ ಸೇರುವ ಅಂದಾಜಿದೆ.

ಆರೋಗ್ಯ ಚಿಕಿತ್ಸೆ: ಜಾತ್ರಾ ಉತ್ಸವಕ್ಕೆ ಆಗಮಿಸುವ ಜನಗಳ ಆರೋಗ್ಯ ಹಿತದೃಷ್ಠಿಯಿಂದ ವೈದ್ಯಕೀಯ ಸೇವೆ ಕಲ್ಪಿಸಲಾಗಿದೆ. ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ, ಸ್ಥಳಿಯ ವೈದ್ಯಕೀಯ ಸಿಬ್ಬಂದಿ, ವೈದ್ಯರು, ದಾದಿಯರು ಸೇರಿದಂತೆ ಔಷಧೋಪಚಾರ ವ್ಯವಸ್ಥೆ, ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ.
ರಕ್ತದಾನ ಶಿಬಿರ: ಕೊಪ್ಪಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜತೆಗೆ ರಕ್ತದಾನ ಶಿಬಿರವನ್ನು ಹದಿನೈದು ವೈದ್ಯರ ತಂಡ, ಹದಿನೈದು ಜನ ಪ್ರಯೋಗ ಶಾಲಾ ತಂತ್ರಜ್ಞರ ತಂಡ, ಇಪ್ಪತ್ತು ಜನ ಸ್ವಯಂ ಸೇವಕರು, ಐವತ್ತು ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಲು ಆಗ್ರಹ
ಫಲಪುಷ್ಪ ಪ್ರದರ್ಶನ: ಜಿಲ್ಲಾ ಮಟ್ಟದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೂವುಗಳಿಂದ ಅಲಂಕೃತಗೊಂಡ ವರಾಹ ರೂಪ ಪ್ರತಿಮೆ ಪ್ರದರ್ಶನ, ಹೂವುಗಳಿಂದ ಅಲಕೃತಗೊಂಡ ಸೈಕಲಯ, ಛತ್ರಿ, ವಾಟರ್ ಫಾಲ್, ಸ್ಥಬ್ದ ಚಿತ್ರ, ಹಣ್ಣ-ತರಕಾರಿ ಕೆತ್ತನೆ, ಅಣಬೆ ಬೇಸಾಯ, ಜೇನು, ಕೃಷಿ, ಮನೆ ತೋಟ, ತಾರಸಿ, ತೋಟ, ಪ್ರದರ್ಶನಕ್ಕೆ ಇಡಲಾಗಿದೆ. ತೋಟಗಾರಿಕೆ ತಂತ್ರಜ್ಞಾನ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಯೋಜನೆಗಳ ಮಾಹಿತಿ ನೀಡುವ ಕೇಂದ್ರವಿದೆ.
ಪಂಡಿತ ಪದ್ಮಶ್ರೀ ಎಂ ವೆಂಕಟೇಶ್ ಕುಮಾರ್, ತುಮಕೂರ ಸಿದ್ದಗಂಗಾ ಸಿದ್ದಗಂಗಾ ಸ್ವಾಮಿಗಳು, ಸಿದ್ದಾರೂಡ ಸ್ವಾಮಿಗಳು ಹುಬ್ಬಳ್ಳಿಮಠ, ಚಣ್ಮಖಾರುಢಮಠ ವಿಜಯಪುರ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್