ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಸೀಮಾದಲ್ಲಿ ಉದ್ದೇಶಿತ ಸಕ್ಕರೆ ಕಾರ್ಖಾನೆಗೆ ಎನ್ಒಸಿ ಕೊಡಬಾರದು, ೀ ಕುರಿತು ಕೂಡಲೇ ಗ್ರಾಮ ಸಭೆ ನಡೆಸುವಂತೆ ಒತ್ತಾಯಿಸಿ ಗೊಂಡಬಾಳ ಗ್ರಾಮಸ್ಥರು ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.
ಸರ್ಕಾರವು ಗೊಂಡಬಾಳ ಸಮೀಪದಲ್ಲಿ ಮೆ. ಯುಕೆಇಎಮ್ ಅಗ್ರಿ ಇನ್ಪ್ರಾ ಲಿಮಿಟೆಡ್ ಕಂಪನಿಗೆ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಅನುಮತಿ ನೀಡಲಾಗಿದ್ದು, ಈಗ ಕಾರ್ಖಾನೆಗೆ ಕಂಪನಿಯು ಗ್ರಾಪಂಗೆ ಎನ್ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಗ್ರಾಪಂನಿಂದ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ನೀಡಿದೆ. ಈ ಹಿನ್ನೆಲೆ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿ ಕಾರ್ಖಾನೆ ಸ್ಥಾಪನೆ ವಿರೋಧ ವ್ಯಕ್ತಪಡಿಸಿದ್ದಾರೆ.
“ಸಕ್ಕರೆ ಕಾರ್ಖಾನೆಯ ಸ್ಥಾಪಿಸಲು ಉದ್ದೇಶಿಸಿರುವ ಜಾಗವು ತಮ್ಮೂರಿನಿಂದ ಕೇವಲ 500-600 ಮೀಟರ್ ಅಂತರದಲ್ಲಿದ್ದು, ಇದರಿಂದ ಫಲವತ್ತಾದ ಭೂಮಿ, ಏತ ನೀರಾವರಿ ಸೌಲಭ್ಯ ಹಾಗೂ ಉತ್ತಮ ಪರಿಸರವೂ ಹಾಳಾಗಲಿದೆ. ಉದ್ದೇಶಿತ ಜಾಗದ ಸಮೀಪದಲ್ಲಿಯೇ ಸರಕಾರಿ ಪ್ರೌಢ ಶಾಲೆಗೆ ಜಾಗ ಮಂಜೂರಾಗಿದೆ. ಜೊತೆಗೆ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರವು ಅನುಮೋದನೆ ನೀಡಿದೆ. ಇದರಿಂದ ಮುಂದೆ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟಕ್ಕೆ ದೊಡ್ಡ ಪೆಟ್ಟು ಬೀಳಲಿದೆ” ಎಂದು ಮುಖಂಡರು ಒತ್ತಾಯಿಸಿದರು.
“ಜೀವನಾಡಿ ತುಂಗಭದ್ರ ನದಿ, ಕೊಳವೆ ಬಾವಿಗಳು ಮಾಲಿನ್ಯವಾಗಲಿವೆ. ಕಾರ್ಖಾನೆಯು ತುಂಗಾಭದ್ರಾ
ಅಚ್ಚುಕಟ್ಟು ಪ್ರದೇಶದಿಂದ 200ಮೀ ಅಂತರದಲ್ಲಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿ, ರೋಗರುಜಿನಕ್ಕೂ ದಾರಿಯಾಗಲಿದೆ. ಆದ್ದರಿಂದ, ಜಿಲ್ಲಾಡಳಿತ ಹಾಗೂ ಸರಕಾರ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಎನ್ಒಸಿ ನೀಡಬಾರದು’ ಎಂದು ಒತ್ತಾಯಿಸಿ ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನೂ ಓದಿ: ಕೊಪ್ಪಳ | ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸ್ಥಳೀಯರ ವಿರೋಧ; ಜಿಲ್ಲಾಧಿಕಾರಿಗೆ ಮನವಿ
ಈ ವೇಳೆ ಗೊಂಡಬಾಳದ ಪ್ರಭು ಹಳ್ಳಿಕೇರಿ, ಮುತ್ತು, ಬಸವರಾಜ ಸಜ್ಜನ್, ಶಾಂತಕುಮಾರ, ಬಸವರಾಜ ಆರೇರ್, ಶರಣಬಸವ ಪಲ್ಲೇದ, ಕಾರ್ತೀಕ ಹೂಗಾರ, ಬಸವರಾಜ, ಚೇತನ, ಮಂಜುನಾಥ ಸೋಂಪುರ, ಮಲ್ಲಪ್ಪ ಗುಗ್ರಿ ಹಾಗೂ ಇತರರು ಉಪಸ್ಥಿತರಿದ್ದರು.