ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪೂರ ಗ್ರಾಮದ ಊರ ಹೊರವಲಯದಲ್ಲಿ ಅನುಮಾನಿತ ಅಪರಿಚಿತರು ಸುಳಿದಾಡುತ್ತಿದ್ದು, ಅವರಿಂದ ಭಯವಾಗುತ್ತಿದೆ. ರಕ್ಷಣೆ ನೀಡಿ ಎಂದು ದಲಿತ ಒಂಟಿ ಮಹಿಳೆಯೊಬ್ಬರು ಕನಕಗಿರಿ ಪೊಲೀಸ್ ಠಾಣೆಗೆ ಮನವಿ ನೀಡಲು ಹೋದರೆ ಪೊಲೀಸರು ಅವರನ್ನು ಸಾಕ್ಷಿ ಕೇಳಿದ್ದು, ಬೆದರಿಸಿ ಕಳುಹಿಸಿರುವ ಘಟನೆ ನಡೆದಿದೆ.
ಕನಕಗಿರಿಯಿಂದ ಮುಸ್ಲಾಪೂರದ ರಸ್ತೆಯಲ್ಲಿ ರಾಂಪೂರ ಗ್ರಾಮದ ಸರ್ವೆ ನಂಬರ್ 20ರ ತಮ್ಮ ಸಾಗುವಳಿ ಜಮೀನಿನಲ್ಲಿ ದಲಿತ ಮಹಿಳೆ ಶೋಭಾ ಪೂಜಾರ ಅವರು ತಮ್ಮ 4 ಪುಟ್ಟ ಹೆಣ್ಣುಮಕ್ಕಳ ಜತೆಗೆ ವಾಸಿಸುತ್ತಿದ್ದಾರೆ. ಅದೂ ಕೂಡ ಒಂಟಿ ಮನೆ. ಸುತ್ತಲೂ ಯಾವುದೇ ಮನೆಗಳೂ ಇಲ್ಲ. ಈ ನಡುವೆ ಅಲ್ಲಿ ಆಗಾಗ ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಅವರ 9 ವರ್ಷದ ಮಗಳಿಗೆ ‘ಬಾ ಪುಟ್ಟಿ ಚಾಕೊಲೇಟ್ ಕೊಡುತ್ತೀನಿ’ ಎಂದು ಕರೆದಿದ್ದಾರೆ. ಮಗು ಭಯಗೊಂಡು ಓಡಿ ಹೋಗಿ ತಾಯಿಯನ್ನು ಕರೆದ ಬಳಿಕ ದುಷ್ಕರ್ಮಿಗಳು ಓಡಿ ಹೋಗಿರುವುದಾಗಿ ತಿಳಿದುಬಂದಿದೆ.
ಉಪ ಕಸುಬಾಗಿ ಮಹಿಳೆ ಮೇಕೆ, ಕೋಳಿಗಳ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಕರಡಿ, ತೋಳ ಹಾಗೂ ಚಿರತೆಗಳ ಹಾವಳಿ ಹೆಚ್ವಿದ್ದು, ಅವುಗಳಿಂದ ಸಾಕುಪ್ರಾಣಿಗಳು ಹಾಗೂ ತಮ್ಮ ರಕ್ಷಣೆಗಾಗಿ 6 ನಾಯಿಗಳನ್ನು ಕಾವಲಗಾಗಿ ಸಾಕಿಕೊಂಡಿದ್ದಾರೆ. ಯಾರೋ ದುಷ್ಕರ್ಮಿಗಳು ವಾರದ ಹಿಂದೆ ಎರಡು ನಾಯಿಗಳಿಗೆ ವಿಷ ಉಣಿಸಿ ಕೊಂದಿದ್ದಾರೆ. ಅಲ್ಲದೆ ಆಗಾಗ ಅಪರಿಚಿತರು ಸುಳಿದಾಡುವದನ್ನು ಕಂಡು ತಮಗೆ ಪರಿಚಿತರ ಗಮನಕ್ಕೆ ತಂದಾಗ, ಅವರು ‘ಯಾವುದಕ್ಕೂ ಪೊಲೀಸ್ ಠಾಣೆಗೆ ಹೋಗಿ ಒಂದು ದೂರು ಕೊಟ್ಟು ಬನ್ನಿ’ ಎಂದು ಸಲಹೆ ನೀಡಿದರೆಂದು ಶೋಭಾ ಪೂಜಾರ ಹೇಳುತ್ತಾರೆ.
ಅದರಂತೆ ಜೂನ್ 17ರಂದು ಕನಕಗಿರಿ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ಮನವಿ ಕೊಡಲು ಹೋದರೆ ಅವರ ಮನವಿಪತ್ರ ಸ್ವೀಕರಿಸದೆ “ಅವರು ಯಾರೆಂಬುದು ತಿಳಿಯದೆ ಮನವಿ ತೆಗೆದುಕೊಳ್ಳುವುದಕ್ಕೆ ಅಗುವುದಿಲ್ಲ. ಇಲ್ಲಿಂದ ಹೋಗಿ” ಎಂದು ಪೊಲೀಸ್ರು ಅವರನ್ನು ಬೆದರಿಸಿ ಕಳುಹಿಸಿರುವುದಾಗಿ ಆರೋಪಿಸಿದ್ದಾರೆ.
ಶೋಭಾ ಪೂಜಾರ ಈದಿನ.ಕಾಮ್ನೊಂದಿಗೆ ಮಾತನಾಡಿ, “ಕನಕಗಿರಿ ಹಾಗೂ ಮುಸ್ಲಾಪೂರ ರಸ್ತೆ ಪಕ್ಕದ ಹೊಲದಲ್ಲಿ ನಿರ್ಮಿಸಿಕೊಂಡಿರುವ ಚಿಕ್ಕ ಮನೆಯಲ್ಲಿ 4 ಹೆಣ್ಣುಮಕ್ಕಳೊಂದಿಗೆ ಒಬ್ಬಳೇ ವಾಸವಿದ್ದೇನೆ. ಶಾಲೆಗೆ ಹೋಗಿ ಬರುವ ನನ್ನ ಮಗಳಿಗೆ ಯಾರೋ ಅಪರಿಚಿತ ವ್ಯಕ್ತಿಗಳು ‘ಬಾ ಮಗು ಚಾಕೊಲೇಟ್ ಕೊಡುತ್ತೇನೆʼ ಎಂದು 2 ಬಾರಿ ಕರೆದಿರುವ ಘಟನೆ ನಡೆದಿದೆ. ಆ ಬಗ್ಗೆ ಮಗಳು ನನ್ನ ಗಮನಕ್ಕೆ ತಂದಿದ್ದಾಳೆ. ಸುಮಾರು ಸಲ ಅಪರಿಚಿತರು ಓಡಾಡುವುದನ್ನ ಕಂಡು ಯಾರು ನೀವು? ಎಂದು ಕೇಳಿದರೆ; ಮರು ಮಾತಾಡದೇ ಹೋಗಿದ್ದಾರೆ. ಹೀಗಾಗಿ ಪೊಲೀಸರಿಗೆ ಎರಡು ಬಾರಿ ಮನವಿ ಕೊಡಲು ಹೋದೆ. ಆದರೆ ‘ಅವರು ಯಾರು ಅಂತ ಹೇಳಮ್ಮ, ನಿನ್ನದೊಂದೇ ಕೆಲಸ ಅಲ್ಲ, ಠಾಣೆ ಕಾಯುವುದು ಬಿಟ್ಟು ನಿಮ್ಮದನ್ನೇ ಮಾಡುವುದಕ್ಕೆ ಆಗುವುದಿಲ್ಲʼವೆಂದು ಹೇಳಿ ಕಳುಹಿಸಿದರು” ಎಂದು ಪೊಲೀಸರ ಬೇಜವಾಬ್ದಾರಿ ಬಗ್ಗೆ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
“ಅದೇ ಸಮಯಕ್ಕೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು, ಪೋಲಿ ಹುಡುಗರು ರಸ್ತೆಯಲ್ಲಿ ಚುಡಾಯಿಸುತ್ತಿದ್ದಾರೆಂದು ರಕ್ಷಣೆ ಕೋರಿ ಬಂದರೆ ಆ ವಿದ್ಯಾರ್ಥಿನಿಗೆ ‘ಹೇ ಹೋಗಮ್ಮ ಮನೆಗೆ, ಬರೀ ಇದೇ ಆಯ್ತು. ನಮಗೇನು ಬೇರೆ ಕೆಲಸ ಬಗ್ಸಿ ಇಲ್ಲವೇನು. ನಿಮ್ಮನ್ನೇ ಕಾಯೋಣವೇನುʼ ಎಂದು ಆ ಹುಡುಗಿಯನ್ನೂ ಬೆದರಿಸಿ ಕಳಿಸಿದರು. ಹಾಗಾದರೆ ನಮಗೆ ಸಮಸ್ಯೆಗಳಾದರೆ ನಾವು ನಮ್ಮ ರಕ್ಷಣೆಗಾಗಿ ಯಾರ ಬಳಿ ಹೋಗಬೇಕು. ಪೊಲೀಸರ ಕರ್ತವ್ಯವೇನು? ಎಂದು ಶೋಭಾ ಪೂಜಾರ ಅಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ದಲಿತ ಯುವಕನ ಸಜೀವ ದಹನ ಪ್ರಕರಣ; ಸ್ಥಳಕ್ಕೆ ಸಿಐಡಿ ತಂಡ ಭೇಟಿ
“ಅಪರಿಚಿತ ದುಷ್ಕರ್ಮಿಗಳ ಓಡಾಟಕ್ಕೆ ಸಾಕು ನಾಯಿಗಳು ಅಡ್ಡಿಯಾಗಿದ್ದವೆಂದು ಎರಡು ನಾಯಿಗಳಿಗೆ ವಿಷವುಣಿಸಿದ್ದಾರೆ. ಅಪರಿಚಿತರ ದುಷ್ಕರ್ಮಿಗಳ ಗುರುತು ಹಿಡಿದು ದಲಿತ ಒಂಟಿ ಮಹಿಳೆ ಕನಕಗಿರಿ ಪೊಲೀಸರಿಗೆ ಸಾಕ್ಷಿ ಕೊಡುವುದಾದರೂ ಹೇಗೆ ಎಂಬ ಪ್ರಶ್ನೆಯಿದೆ. ಮುಂದೆ ಏನಾದರೂ ಅ ಒಂಟಿ ಮಹಿಳೆ ಹಾಗೂ ಮಕ್ಕಳ ಮೇಲೆ ಸಂಭವಿಸಬಾರದ ಘಟನೆ ಸಂಭವಿಸಿದರೆ ಇದಕ್ಕೆ ಹೊಣೆ ಯಾರು? ಇದಕ್ಕೆ ಪೊಲೀಸರೇ ಉತ್ತರ ಕೊಡಬೇಕು” ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.