ದೇವರ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಹೀಗೂ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂಬುದನ್ನು ಕೊಪ್ಫಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮಸ್ಥರು ನಿರೂಪಿಸಿದ್ದಾರೆ. ದೇಣಿಗೆ ರೂಪದಲ್ಲಿ ಬಂದ ಹಣವನ್ನು ದೇವಸ್ಥಾನದ ಕೆಲಸಕ್ಕೆ ಬಳಸದೆ ತಮ್ಮೂರಿನ ಶಾಲೆಯ ಕೊಠಡಿಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಹತ್ತಿರವಿರುವ ಸಣ್ಣ ಗ್ರಾಮ ವಣಗೇರಿ ಮೂಲಸೌಕರ್ಯದಿಂದ ವಂಚಿತವಾಗಿದೆ. 1ರಿಂದ 8ನೇ ತರಗತಿವರೆಗೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕೊಠಡಿ ಸೇರಿ ಇನ್ನಿತರ ಸೌಲಭ್ಯಗಳ ಕೊರತೆಯಿತ್ತು. ಇದನ್ನು ಗಮನಿಸಿದ ಶಿವನಮ್ಮದೇವಿ ದೇವಸ್ಥಾನದ ಟ್ರಸ್ಟ್ ಮುಖಂಡರು, ಗ್ರಾಮಸ್ಥರು ಸೇರಿ ದೇವಸ್ಥಾನದಲ್ಲಿ ದೇಣಿಗೆ ಡಬ್ಬಿಯಲ್ಲಿ ದಶಕಗಳಿಂದ ಸಂಗ್ರಹವಾಗುತ್ತ ಬಂದಿದ್ದ ₹20 ಲಕ್ಷ ಹಣವನ್ನು ಒಳ್ಳೆಯ ಕೆಲಸಕ್ಕೆ, ಅಭಿವೃದ್ಧಿ ಕಾರ್ಯಕ್ಕೆ ಬಳಸಲು ತೀರ್ಮಾನಿಸಿದ್ದು, ಗ್ರಾಮದ ಶಾಲೆಗೆ ಕೊಠಡಿಗಳ ಕೊರತೆ ಕಂಡು ಶಾಲಾ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿ ಮೂರು ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ.
“ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಯಾರನ್ನೂ ದೇಣಿಗೆ ಕೇಳದೆ ಸ್ವತಃ ಗ್ರಾಮದವರೇ ಸೇರಿ, ದೇವಸ್ಥಾನದ ದೇಣಿಗೆ ಹಣವನ್ನೂ ಒಟ್ಟುಗೂಡಿಸಿ ಶಾಲಾ ಕೊಠಡಿ ನಿರ್ಮಿಸಿದ್ದೇವೆ. ಎಲ್ಲದಕ್ಕೂ ಸರ್ಕಾರವನ್ನು ನೆಚ್ಚಿ ಕುಳಿತರೆ ನಮ್ಮ ಮಕ್ಕಳ ಶಿಕ್ಷಣ ಮತ್ತಷ್ಟು ಕುಂಠಿತಗೊಳ್ಳುತ್ತದೆ. ಅದಕ್ಕೆ ಗ್ರಾಮದವರೇ ಸೇರಿಕೊಂಡು ಮೂರು ಕೊಠಡಿ ನಿರ್ಮಿಸಿದ್ದೇವೆ. ಮಕ್ಕಳ ಭವಿಷ್ಯಕ್ಕಿಂತ ಬೇರೆ ಏನೂ ಇಲ್ಲ” ಎಂದು ಶಿವಪ್ಪ ಚೌಡ್ಕಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹುಳು ತುಂಬಿರುವ ಪಡಿತರ ಅಕ್ಕಿ, ಜೋಳ ವಿತರಣೆ; ಬಡವರ ಆರೋಗ್ಯದ ಜತೆಗೆ ಆಹಾರ ಇಲಾಖೆ ಚೆಲ್ಲಾಟ
“ಈ ವರ್ಷ ಎಲ್ಕೆಜಿ, ಯುಕೆಜಿ ಮತ್ತು ಅಂಗ್ಲ ಮಾಧ್ಯಮದ 1ನೇ ತರಗತಿ ಮಂಜೂರಾಗಿದೆ. ಕೊಠಡಿ ಸೇರಿ ಮೂಲಸೌಲಭ್ಯಗಳ ಕೊರತೆಯಿತ್ತು. ಗೋಮಾಳ ಭೂಮಿಯಲ್ಲಿ ಕಟ್ಟಡ ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಹಣವಿದ್ದರೂ ಜಾಗದ ಕೊರತೆಯಿತ್ತು. ಖಾಸಗಿ ಜಮೀನಿನ ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಸಾಧ್ಯವಾಗದೇ ಊರಿನ ಪಕ್ಕದಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳದ ಜಾಗದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಕಾದಿವೆ” ಎಂದು ತಿಳಿಸಿದರು.
“ಜನರ ಶೈಕ್ಷಣಿಕ ಕಾಳಜಿಗೆ ಪೂರಕವಾಗಿ ಗೋಮಾಳದ ಜಮೀನನ್ನು ಶಾಲೆಗೆ ಹಸ್ತಾಂತರಿಸಲು ಕಂದಾಯ ಇಲಾಖೆಯೂ ಮುಂದೆ ಬಂದಿದೆ. ಜಮೀನು ಹಂಚಿಕೆ ಪ್ರಕ್ರಿಯೆ ಬಗ್ಗೆ ಪತ್ರವ್ಯವಹಾರ ನಡೆಯುತ್ತಿದ್ದು, ಸರ್ಕಾರ ಶೀಘ್ರವೇ ಮಂಜೂರಾತಿ ನೀಡಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.
