ಯುವಜನತೆ, ಮಹಿಳೆಯರು ಮತ್ತು ರೈತರ ನಾಮಜಪ ಮಾಡುತ್ತಲೇ ಈ ಸಮುದಾಯಗಳನ್ನು ಕೇಂದ್ರ ಬಜೆಟ್ -2025 ಕಡೆಗಣಿಸಿದೆ. ನಯಮಂಡನೆಯಾದ 2025-26ರ ಬಜೆಟ್ ಮತ್ತೊಂದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೊಪ್ಪಳ ಜಿಲ್ಲಾ ಎಐಡಿವೈಒ ಅಸಮಾಧಾನ ವ್ಯಕ್ತಪಡಿಸಿದೆ.
ದೇಶದ ಯುವಜನರಲ್ಲಿ ಬಹಳ ಸಮಯದಿಂದ ಮಡುಗಟ್ಟಿರುವ ಹತಾಶ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಬಜೆಟ್ನ ಪತ್ರದ ತುಂಬೆಲ್ಲ ಯುವಜನರು, ಮಹಿಳೆಯರು ಮತ್ತು ರೈತರ ಬಗ್ಗೆ ಅಬ್ಬರದ ಮಾತುಗಳೇ ತುಂಬಿವೆ. ದೇಶದ ಜನಸಂಖ್ಯೆಯ ಶೇ.65ಕ್ಕಿಂತ ಹೆಚ್ಚಿನ ವಿಭಾಗವಾಗಿರುವ ದುಡಿಯುವ ವಯಸ್ಸಿನ(15-59ವರ್ಷಗಳು) 90 ಕೋಟಿಗೂ ಅಧಿಕ ಜನರ ಬದುಕಿನ ಮೇಲೆ ಕೇಂದ್ರ ಬಜೆಟ್ ಯಾವುದೇ ನಿಜವಾದ ಧನಾತ್ಮಕ ಪ್ರಭಾವವನ್ನೂ ಉಂಟುಮಾಡಿಲ್ಲ.
ನೇರವಾಗಿ ಉದ್ಯೋಗ ಸೃಷ್ಟಿಸುವ ಅಥವಾ ಅಸ್ತಿತ್ವದಲ್ಲಿರುವ ಲಕ್ಷಗಟ್ಟಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯಾವುದೇ ಪ್ರಸ್ತಾಪ ಬಜೆಟ್ನಲ್ಲಿ ಇಲ್ಲ. ಎಂಎಸ್ಪಿಇಗಳು, ಸಣ್ಣ ಉದ್ಯಮಗಳು, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ತಳಮಟ್ಟದಲ್ಲಿ ಉದ್ಯೋಗ ಸೃಷ್ಟಿಮಾಡುವ ಮಾತನಾಡುತ್ತ ಕೇವಲ ಕ್ರೆಡಿಟ್ ಗ್ಯಾರಂಟಿ ಕವರನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಿ ಅಬ್ಬರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ಆಯವ್ಯಯವನ್ನು ಮೀಸಲಿಟ್ಟಿರುವ ಬಜೆಟ್ನಲ್ಲಿ, ಸಾಮಾಜಿಕ ವೆಚ್ಚದ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮೊತ್ತವನ್ನು ತೀವ್ರವಾಗಿ ಕಡಿತಗೊಳಿಸಿದೆ.
ಎರಡೂ ಕ್ಷೇತ್ರಗಳ ವೆಚ್ಚದಲ್ಲಿ ತಲಾ ಸುಮಾರು ₹11,000 ಕೋಟಿ ಖೋತಾ ಆಗಿದೆ. ಶೇ.60ಕ್ಕಿಂತ ಹೆಚ್ಚು ಗ್ರಾಮೀಣ ಉದ್ಯೋಗಿಗಳನ್ನು ಮತ್ತು ಸುಮಾರು ಶೇ.10ರಷ್ಟು ನಗರ ಉದ್ಯೋಗಿಗಳನ್ನು ಹೊಂದಿರುವ ದೇಶದ ಅತಿ ದೊಡ್ಡ ಉದ್ಯೋಗದಾತ ಕ್ಷೇತ್ರವಾಗಿರುವ ಕೃಷಿ ರಂಗಕ್ಕೆ ಮೀಸಲಿರಿಸಿರುವ ಹಣದಲ್ಲಿ 2024ರ ಬಜೆಟ್ ಹಂಚಿಕೆಗೆ ಹೋಲಿಸಿದರೆ ₹9,000 ಕೋಟಿ ಕಡಿಮೆಯಾಗಿದೆ. ₹13 ಕೋಟಿಗೂ ಹೆಚ್ಚು ಸಕ್ರಿಯ ಕಾರ್ಮಿಕರು ಜೀವನೋಪಾಯಕ್ಕಾಗಿ ಅವಲಂಭಿಸಿರುವ ಉದ್ಯೋಗ ಖಾತ್ರಿ ಯೋಜನೆಗೆ ಇನ್ನಷ್ಟು ಹಣವನ್ನು ಕಡಿತಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶೈಕ್ಷಣಿಕ ಶುಲ್ಕ ಭರಿಸಲಾಗದೆ ವಿದ್ಯಾಭ್ಯಾಸ ಮೊಟಕು; ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀ ನೆರವು
₹12000 ಕೋಟಿ ಖರ್ಚು ಮಾಡುವ ಮೂಲಕ ದೇಶದ 500 ಪ್ರಮುಖ ಕಾರ್ಪೊರೇಟ್ಗಳಿಂದ ಇಂಟರ್ನ್ ಶಿಪ್ಗಳನ್ನು ಒದಗಿಸುವ ‘ಪಿಒ ಜಾಬ್ ಲಿಂಕ್ಡ್ ಇನ್ಸೆಂಟಿವ್ʼ ಎಂಬ ತನ್ನ ಕಳೆದ ಬಜೆಟ್ ನೀತಿಯ ಬಗ್ಗೆ 2025ರ ಬಜೆಟ್ ಸಂಪೂರ್ಣ ಮೌನವಾಗಿದೆ. ಪ್ರವಾಸೋದ್ಯಮ, ಮೀನುಗಾರಿಕೆ, ಆಹಾರ ಸಂಸ್ಕರಣೆ, ಜವಳಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಇತ್ಯಾದಿಗಳಲ್ಲಿ 21 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಾತುಗಳು ಬಜೆಟ್ನಲ್ಲಿವೆ. ಆದರೆ ಆ ದಿಸೆಯಲ್ಲಿ ಯಾವುದೇ ಸ್ಪಷ್ಟವಾದ ನೀತಿ ನಿರೂಪಣೆ ಬಜೆಟ್ನಲ್ಲಿ ಇಲ್ಲ.
ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿಗಾಗಿ ರೈತರು ಆಂದೋಲನ ನಡೆಸುತ್ತಿರುವ ಸಮಯದಲ್ಲಿ, ಅದರ ಅನುಷ್ಠಾನವನ್ನು ಒಪ್ಪದ ಸರ್ಕಾರವು ಈ ಬಜೆಟ್ ಮೂಲಕ ‘ಫಸಲ್ ವಿಮಾ ಯೋಜನೆ’ಯನ್ನು ಮತ್ತಷ್ಟು ಭದ್ರಗೊಳಿಸುತ್ತದೆ ಮತ್ತು ಶೇ.52ಕ್ಕಿಂತ ಅಧಿಕ ಲಾಭ ದೋಚುತ್ತಿರುವ ಈ ‘ಫಸಲ್ ವಿಮಾ ಕಂಪನಿ’ಗಳಿಗೆ ಭಾರೀ ಲಾಭವನ್ನು ಬಜೆಟ್ ನೀಡಲಿದೆ. ಈವರೆಗೆ ಕೇವಲ ಶೇ.9ರಿಂದ ಶೇ.12ರಷ್ಟು ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.