ಪೊಲೀಸರ ಸೋಗಿನಲ್ಲಿ ಬಂದವರನ್ನು ವಂಚಕರೆಂದು ತಿಳಿಯದೇ ಮಹಿಳೆಯೊಬ್ಬರು ಚಿನ್ನಾಭರಣ ಕಳೆದುಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ.
ʼಬಂಗಾರದ ಚೈನ್ ಅನ್ನು ಭದ್ರವಾಗಿ ಕಟ್ಟಿಕೊಡುತ್ತೇವೆ’ ಎಂದು ಮಹಿಳೆಗೆ ಕಲ್ಲು ಕಟ್ಟಿಕೊಟ್ಟು ಮೋಸ ಮಾಡಲಾಗಿದೆ. ಮನೆಗೆ ತೆರಳಿ ನೋಡಿದ ಮಹಿಳೆ ಕಲ್ಲುಗಳನ್ನು ಕಂಡು ಆಘಾತಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಕುಕನೂರು ಪಟ್ಟಣದ ನಿವಾಸಿ ಸುಮಾ ಅಲಬೂರ ಎಂಬವರ ಒಂದೂವರೆ ತೊಲೆಯ ಬಂಗಾರದ ಸರವನ್ನು ಪೊಲೀಸರ ಸೋಗಿನಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಸುಮಾ ಒಬ್ಬರೇ ಮನೆಯಿಂದ ಬ್ಯಾಂಕ್ಗೆ ಹೋಗುತ್ತಿದ್ದರು. ಆ ವೇಳೆ ಇಬ್ಬರು ಆಗಂತುಕರು ಬಂದು, ತಾವು ಪೊಲೀಸ್ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾರೆ. ‘ಪಟ್ಟಣದಲ್ಲಿ ಕಳ್ಳತನದ ಹಾವಳಿ ಹೆಚ್ಚಾಗಿದೆ. ಆಭರಣ ಮೈಮೇಲೆ ಧರಿಸಿ ಓಡಾಡಬೇಡಿ. ಹೀಗೆ ಓಡಾಡಿದರೆ ಯಾರಾದರೂ ಕಳ್ಳರು ಕದ್ದು ಪರಾರಿಯಾಗುತ್ತಾರೆ’ ಎಂದು ಹೇಳಿದ್ದಾರೆ.
ಮಹಿಳೆ ಅನುಮಾನಗೊಂಡು, ʼನೀವು ಪೊಲೀಸ್ ಡ್ರಸ್ ಹಾಕಿಲ್ಲʼ ಎಂದಿದ್ದಾರೆ. ‘ಪೊಲೀಸ್ ಸಮವಸ್ತ್ರದಲ್ಲಿ ಬಂದರೆ ಕಳ್ಳರು ಸಿಗುವುದಿಲ್ಲ. ಅದಕ್ಕೆ ಆ ಡ್ರಸ್ ಹಾಕಿಲ್ಲ’ ಎಂದು ವಂಚಕರು ಮಹಿಳೆಗೆ ಸಮಜಾಯಿಷಿ ಹೇಳಿ ನಂಬಿಸಿದ್ದಾರೆ. ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಇದೇ ರೀತಿ ಹೇಳಿ ಆತ ಬಿಚ್ಚಿಕೊಟ್ಟ ಉಂಗುರವನ್ನು ಪೇಪರ್ ಹಾಳೆಯಲ್ಲಿ ಸುತ್ತಿ ಮರಳಿ ಕೊಟ್ಟಿದ್ದಾರೆ.
ಬಳಿಕ ಸುಮಾ ಅವರ ಕೊರಳಲ್ಲಿದ್ದ ಬಂಗಾರದ ಸರವನ್ನು ಅವರಿಂದ ಪಡೆದು, ಪೇಪರ್ ಹಾಳೆಯಲ್ಲಿ ಮಡಚಿಕೊಡುವುದಾಗಿ ನಂಬಿಸಿ ಕಲ್ಲು ಸುತ್ತಿದ ಹಾಳೆಯ ಕವರ್ ನೀಡಿ ಮನೆಯಲ್ಲಿ ಭದ್ರವಾಗಿ ಇರಿಸುವಂತೆ ಹೇಳಿ ಸರ ಕದ್ದು ಪರಾರಿಯಾಗಿದ್ದಾರೆ.
ಈ ಸುದ್ಧಿ ಓದಿದ್ದೀರಾ?: ಕೊಪ್ಪಳ | ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಲು ಪ್ರಗತಿಪರ ಸಂಘಟನೆಗಳ ಒತ್ತಾಯ
ಮಹಿಳೆ ಮನೆಗೆ ಹೋಗಿ ಹಾಳೆ ಬಿಚ್ಚಿ ನೋಡಿದಾಗ ಅದರಲ್ಲಿ ಕಲ್ಲುಗಳು ಇರುವುದು ಕಂಡು ಕಂಗಾಲಾಗಿದ್ದಾರೆ. ಕೂಡಲೇ ಕುಕನೂರು ಪೋಲಿಸ್ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿದ್ದಾರೆ. ಪೊಲೀಸರ ಸೋಗಿನಲ್ಲಿ ಕಳ್ಳರು ತೋರಿದ ಚಳಕದಿಂದ ಸುಮಾ ಆತಂಕಗೊಂಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
