ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ನಾಳೆ (ಫೆ.22) ನಗರದ ಸಾಹಿತ್ಯ ಭವನದಲ್ಲಿ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಹೇಳಿದರು.
“ಕಾರ್ಯಕ್ರಮಕ್ಕೆ ಪರಿಸರವಾದಿ, ವಿಜ್ಞಾನಿ ನಾಗೇಶ್ ಹೆಗಡೆ, ಪರಿಸರ ತಜ್ಞ ಹೇಮಂತ್ ರಾಮಡಗಿ, ಕೈಗಾರಿಕೆಗಳಿಂದ ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ಜನಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಗಿಣಿಗೇರಿ ಸುತ್ತಮುತ್ತಲಿನ ಬೃಹತ್ ಕೈಗಾರಿಕೆಗಳಿಂದ ಈಗಾಗಲೇ ಪರಿಸರ ನಾಶ, ರೈತರ ಜಮೀನು ಒತ್ತುವರಿ, ಜನಗಳ ಆರೋಗ್ಯ, ಕೃಷಿ ಬೆಳೆ ಸರ್ವನಾಶವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಮತ್ತೊಂದು ಬೃಹತ್ ಕೈಗಾರಿಕೆ ಮಾಡುವುದರಿಂದ ಇರುವ ಅಲ್ಪಸ್ವಲ್ಪ ಭೂಮಿ ಕಳೆದುಕೊಳ್ಳುವುದರ ಜೊತೆಗೆ ಪರಿಸರ ನಾಶಕ್ಕೆ ನಾಂದಿ ಹಾಡಿದಂತಾಗುತ್ತದೆ. ಇದನ್ನು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಜನ ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಾರದು. ಅಣು ವಿದ್ಯುತ್ ಸ್ಥಾವರ ಕೂಡ ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಬಾರದು. ಈ ಎಲ್ಲ ವಿಷಯಗಳ ಕುರಿತು ಜನಗಳಿಗೆ ತಜ್ಞರಿಂದ, ಪರಿಸರವಾದಿಗಳಿಂದ, ಹೋರಾಟಗಾರರಿಂದ ಅರಿವು ಮೂಡಿಸಲು ಮತ್ತು ಬಾಧಿತ ಜನಗಳ ಅಳಲು ತೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಈ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳದ ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕು” ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಲಡಾಯಿ ಪ್ರಕಾಶಕ ಮತ್ತು ಸಾಮಾಜಿಕ ಹೋರಾಟಗಾರ ಬಸವರಾಜ್ ಸೂಳಿಬಾವಿ ಮಾತನಾಡಿ, “ನಾವು ಕೈಗಾರಿಕಾ ವಿರೋಧಿಗಳಲ್ಲ. ಆದರೆ ಒಂದೇ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿ ಜನರಿಗೆ ಮಾರಕವಾಗಿರುವ ವಿಷ ಅನಿಲ ಮತ್ತು ಧೂಳು ಇನ್ನಿತರ ಹಾನಿಕಾರಕ ತೊಂದರೆ ಉಂಟು ಮಾಡುತ್ತಿರುವ ಕಾರ್ಖಾನೆಗಳ ಮತ್ತು ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ. ಕೂಡಲೇ ೀ ಕುರಿತು ಕ್ರಮ ಕೈಗೊಳ್ಳಬೇಕೆಂದು” ಹೇಳಿದರು.
ಡಿ.ಎಚ್ ಪೂಜಾರ್ ಅವರು ಮಾತನಾಡಿ, “ಕೈಗಾರಿಕಾ ಕಾನೂನು ಉಲ್ಲಂಘನೆ ಮಾಡಿ ರೈತರ ಮತ್ತು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ದಮನ ಮಾಡಿ ಕಾರ್ಖಾನೆಯ ಮಾಲಿಕರು ಮೆರೆಯುತ್ತಿದ್ದಾರೆ. ರೈತರ ಜಮೀನು ಮತ್ತು ಸಾರ್ವಜನಿಕ ಕೆರೆಗಳನ್ನು ನುಂಗಿ ಕಾನೂನು ವಿರೋಧಿ ನಡೆಯನ್ನು ಬಿಎಸ್ಪಿಎಲ್ ಕಂಪನಿ ಮಾಡುತ್ತಿದೆ. ಈ ಕಂಪನಿಯ ನಡೆಯ ವಿರುದ್ಧ ಹಲವಾರು ವರ್ಷಗಳಿಂದ ನಾವು ಹೋರಾಟವನ್ನು ಸಂಘಟಿಸಿದ್ದೇವೆ ಮತ್ತು ಕೋರ್ಟ್ ಮೆಟ್ಟಿಲು ಏರಿದ್ದೇವೆ. ನ್ಯಾಯಕ್ಕಾಗಿ ಮುಂದೆಯೂ ಹೋರಾಡುತ್ತೇವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಫೆ.23 ರಂದು ʼನಿಮ್ಮೊಂದಿಗೆ ನಾವುʼ ಕಲಾವಿದರ ನಡೆ-ಜನಸಾಮನ್ಯರ ಕಡೆ ಕಾರ್ಯಕ್ರಮ
ಈ ವೇಳೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡ ಕಾಶಪ್ಪ ಚಲವಾದಿ, ಎಸ್ಎ ಗಫರ್, ಜ್ಯೋತಿ ಗೊಂಡಬಾಳ, ಬಸವರಾಜ್ ಶೀಲವಂತರ್, ಶರಣು ಗಡ್ಡಿ, ಮಹಾಂತೇಶ್ ಕೊತ್ತುಬಾಳ, ಶಿವಪ್ಪ ಹಡಪದ್, ಶರಣು ಶೆಟ್ಟರ್, ಈರಣ್ಣ ತಾಳ ಕನಕಪುರ, ಮಾರುತಿ ಇತರರು ಇದ್ದರು.
