ಲಕ್ಷಾಂತರ ರೂಪಾಯಿಗಳಷ್ಟು ತೆರಿಗೆ ಹಣಪಾವತಿ ಮಾಡದ ಶ್ರೀ ಶಿವಗಂಗ ಚಿತ್ರಮಂದಿರ, ಕಲ್ಯಾಣಮಂಟಪ ಹಾಗೂ ಹೋಟೆಲ್ ಗೆ ಬೀಗ ಹಾಕಿ ಸೀಲ್ ಮಾಡಿರುವ ಘಟನೆ ಶುಕ್ರವಾರ ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಕ್ಕಿರಾಂಪುರ ಮೂಲದ ಗಂಗಾಧರಪ್ಪ ಮಾಲೀಕತ್ವದ ಶ್ರೀ ಶಿವಗಂಗಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಗಳಿಗೆ ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ್ದು, ಪ್ರತಿಕ್ರಿಯಿಸದ ಮಾಲೀಕರ ಬೇಜವಾಬ್ದಾರಿ ವರ್ತನೆಗೆ ಸ್ಥಳಕ್ಕೆಭೇಟಿ ನೀಡಿದ ಪಟ್ಟಣಪಂಚಾತಿಯಿ ಮುಖ್ಯಾಧಿಕಾರಿ ಬೀಗಜಡಿದು ಬಾಗಿಲು ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಅನೇಕ ಬಾರಿ ನೋಟಿಸ್ ನೀಡಿದರು ಸುಮಾರು ೧೦ಲಕ್ಷ ರೂಗಳಷ್ಟು ತೆರಿಗೆ ಹಣವನ್ನು ಪಾವತಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ತೆರಿಗೆ ಹಣ ಪಾವತಿ ಮಾಡುವವರೆಗೂ ಚಿತ್ರಮಂದಿರ ಸೇರಿದಂತೆ ಕಲ್ಯಾಣ ಮಂಟಪ ಮತ್ತು ಹೋಟೆಲ್ ನಡೆಸದಂತೆ ಬೀಗ ಹಾಕಿಸಿದ್ದಾರೆ.
ಯಾವುದೇ ನೋಟಿಸ್ ನೀಡದೇ ಏಕಾಏಕಿ ಬಂದು ಪಟ್ಟಣ ಪಂಚಾಯಿತಿಯವರು ಬೀಗ ಹಾಕಿಸಿ ಬಾಗಿಲು ಮುಚ್ಚಿಸಿದ್ದು, ಚಿತ್ರಮಂದಿರಕ್ಕೆ ಇಂದು ಶುಕ್ರವಾರ ವಾದಕಾರಣ ಚಲನಚಿತ್ರವನ್ನು ಪ್ರರ್ದಶನ ಮಾಡಲಾಗಿತ್ತು, ಸಿನಿಮಾ ವೀಕ್ಷಣೆಗೆ ಬಂದ ಪ್ರೇಕ್ಷಕರು ವಾಪಾಸ್ಸು ಹೋಗಿದ್ದರಿಂದ ನಮಗೆ ನಷ್ಟ ಉಂಟಾಗಿದೆ ಎಂದು ವ್ಯವಸ್ಥಾಪಕ ಆಕ್ರೋಶ ವ್ಯಕ್ತಡಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಹೆಲ್ತ್ ಇನ್ಸ್ಪೆಕ್ಟರ್ ಮಹಮ್ಮದ್ ಹುಸೇನ್, ಆರ್ಐ ವೇಣುಗೋಪಾಲ್, ಶೈಲೇಂಧ್ರ, ವೆಂಕಟೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.
“ನೋಟಿಸ್ ನಲ್ಲಿರುವ ಪ್ರಕಾರ ಕಳೆದ ೩ದಿನಗಳ ಹಿಂದೆ ನೋಟಿಸ್ ನೀಡಬೇಕಿತ್ತು ಆದರೆ ಗುರುವಾರ ನೋಟಿಸ್ ಅಂಟಿಸಿ ಮರುದಿನ ಏಕಾಏಕಿ ಬಂದು ಗಡುವು ನೀಡದೆ ಬಾಗಿಲು ಮುಚ್ಚಿಸುವ ಕೆಲಸ ಮಾಡಿದ್ದಾರೆ. ನಮಗೆ ಇಲ್ಲಿಯವರೆಗೂ ಯಾವುದೇ ನೋಟಿಸ್ ಬಂದಿಲ್ಲ, ಕೋರ್ಟ್ ನಲ್ಲಿ ತಡೆಯಾಜ್ಞೆ ಇರುವ ಕಾರಣ ಕಂದಾಯ ಕಟ್ಟಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶವನ್ನು ಸ್ವೀಕರಿಸಿ ಪಟ್ಟಣಪಂಚಾಯಿತಿಗೆ ನೀಡಿ ಕಂದಾಯ ಪಾವತಿಸುತ್ತೇವೆ ಎಂದು ಶಿವಗಂಗ ಚಿತ್ರಮಂದಿರದ ಮ್ಯಾನೇಜರ್ ಅನಿಲ್ ಕುಮಾರ್ ತಿಳಿಸಿದ್ದಾರೆ.
” ಅನೇಕ ಬಾರಿ ನೋಟಿಸ್ ನೀಡಿದರೂ ಸರಿಯಾದ ರೀತಿ ತೆರಿಗೆ ಹಣಪಾವತಿ ಮಾಡಿದೆ ಸುಮಾರು ೧೦ಲಕ್ಷ ರೂಪಾಯಿಗಳಷ್ಟು ಹಣ ಬಾಕಿ ಉಳಿಸಿಕೊಂಡಿದ್ದರು. ಕಳೆದ ಬಾರಿ ಮಾಲೀಕರ ಮನವಿಗೆ ಕಾಲಾವಕಾಶ ನೀಡಿದ್ದು, ಆದರೆ ಮತ್ತೊಮ್ಮೆ ನೋಟಿಸ್ ನೀಡಲು ಬಂದಾಗ ನಿರಕರಿಸಿರುತ್ತಾರೆ ಆದ ಕಾರಣಕ್ಕೆ ಬಾಗಿಲು ಹಾಕಿಸುವ ಕೆಲಸ ಮಾಡಿದ್ದೇವೆ. ಪಟ್ಟಣದ ಅಂಗಡಿ, ಮಳಿಗೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಕಂದಾಯವನ್ನು ಪಾವತಿಸಲು ಈ ಮೂಲಕ ಮನವಿ ಮಾಡುತ್ತೇವೆ ಎಂದು ಕೊರಟಗೆರೆ ಪ.ಪಂ ಮುಖ್ಯಾಧಿಕಾರಿ ಕೆ.ಎಸ್ ಉಮೇಶ್ ತಿಳಿಸಿದ್ದಾರೆ.