“ಸಿದ್ದರಾಮಯ್ಯನವರು ನಿಜವಾಗಿಯೂ ಜನನಾಯಕರಲ್ಲ. ಅಹಿಂದ ನೆಲದಲ್ಲಿ ಹುಟ್ಟಿರುವ ನೀವು ದಲಿತ ದ್ರೋಹಿ ಎಂಬುದನ್ನು ಒಪ್ಪಿಕೊಳ್ಳಿ” ಎಂದು ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಸ್ಸಿಪಿ – ಟಿಎಸ್ಪಿ ಹಣ ದಲಿತರ ಕಲ್ಯಾಣಕ್ಕೆ ಉಪಯೋಗಿಸಿರುವ ಬಗ್ಗೆ ಕೂಡಲೇ ಶ್ವೇತ ಪತ್ರ ಹೊರಡಿಸಿ. ದಲಿತರಿಗೆ ಸುಲಭವಾಗಿ ಮೋಸ ಮಾಡಬಹುದು ಎಂಬ ನಿಮ್ಮ ಸಣ್ಣತನ ಯಾರಿಗೂ ಅರ್ಥವಾಗಲ್ಲ ಎಂದುಕೊಂಡಿದ್ದೀರಾ?” ಎಂದು ಗುಡುಗಿದರು.
“ರಾಜ್ಯದ ಮುಖ್ಯಮಂತ್ರಿಯಾಗಲು, ಅಹಿಂದ ನಾಯಕರಾಗಿ ಹೊರಹೊಮ್ಮಲು ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರದ ದಲಿತ ಸಮುದಾಯಗಳ ಕೊಡುಗೆ ಅಪಾರ. ಅಹಿಂದ ಹೆಸರಿನ ಬಲ ನಿಮಗೆ ಬೆಳ್ಳಿ ತಟ್ಟೆಯಲ್ಲಿಟ್ಟು ಅಧಿಕಾರವನ್ನು ಧಾರೆಯೆರೆದಿದೆ. ಇದಕ್ಕಾಗಿ ನಿಮ್ಮ ಶ್ರಮ ಏನೇನೂ ಇಲ್ಲ ಎಂಬುದು ನಿಮಗೂ ಗೊತ್ತಿದೆ. ರಾಜ್ಯದಲ್ಲಿ 5 ದಶಕಗಳಿಂದ ದಲಿತ ಸಂಘರ್ಷ ಸಮಿತಿ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸಿದೆ. ಕಳೆದ ಚುನಾವಣೆಯಲ್ಲಿ ನಿಮಗೆ ಅಧಿಕಾರ ಧಕ್ಕುವಂತೆ ಮಾಡಲು ಮೆಟ್ಟಿಲುಗಳಂತೆ ಕೆಲಸ ಮಾಡಿದ ದಲಿತ ಸಂಘಟನೆಯ ಮುಖಂಡರು, ಕಾರ್ಯಕರ್ತರನ್ನು ಅಧಿಕಾರಕ್ಕೇರಿದ ಮೇಲೆ ಕಾಲಕಸವಾಗಿ ಕಾಣುವ ನಿಮ್ಮ ವರ್ತನೆ ಸರಿಯಿಲ್ಲ. ಹೊಗಳು ಭಟ್ಟರು, ಭಟ್ಟಂಗಿಗಳೇ ನಿಮಗೆ ಪಥ್ಯವಾಗಿರುವುದು ಮಹಾ ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಪ್ರತಿರೋಧ ಪಡೆ ಕಟ್ಟುತ್ತೇವೆ
ದೇವರಾಜು ಅರಸು ಅವರಂತೆ ಜನನಾಯಕರಲ್ಲ ನೀವು. ಎಸ್ಸಿಪಿ – ಟಿಎಸ್ಪಿ ಅನುದಾನದ ದುರ್ಬಳಕೆ ವಿಚಾರದಲ್ಲಿ ನಿಮ್ಮ ಸಮರ್ಥನೆ ಸರಿಯಲ್ಲ. ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ. ನಮ್ಮ ಅನ್ನ ಕಿತ್ತುಕೊಳ್ಳಬೇಡಿ. ನಮಗೆ ದೊಡ್ಡ ದ್ರೋಹ ಮಾಡಿದ್ದೀರಿ. ನಿಮ್ಮ ದ್ರೋಹಕ್ಕೆ ಉತ್ತರ ಕೊಟ್ಟೇ ಕೊಡುತ್ತೇವೆ. ನಿಮ್ಮ ಕೊರಳ ಪಟ್ಟಿ ಹಿಡಿದು ತಮ್ಮ ಪಾಲನ್ನು ಕೇಳುವ ದಿನಗಳು ದೂರವಿಲ್ಲ. ಅದಕ್ಕಾಗಿ ರಾಜ್ಯಾದ್ಯಂತ ದಲಿತ ಪ್ರತಿರೋಧ ಪಡೆಯನ್ನು ಕಟ್ಟುತ್ತಿದ್ದೇವೆ ಎಂದು ಕೋಟಿಗಾನಹಳ್ಳಿ ರಾಮಯ್ಯ ಎಚ್ಚರಿಕೆ ನೀಡಿದರು.

ಒಳಮೀಸಲಾತಿ ಸಂಬಂಧ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಚರಿತ್ರಾರ್ಹವಾದ ತೀರ್ಪಾಗಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅನುಷ್ಠಾನದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಏಕೆಂದರೆ, ಕೆನೆಪದರದ ಪ್ರಸ್ತಾಪ ವ್ಯವಸ್ಥಿತವಾಗಿ ದಲಿತ ಸಮುದಾಯದ ಪ್ರತಿಭಾವಂತ ಮೇಲಧಿಕಾರಿಗಳನ್ನು ಉನ್ನತ ಹುದ್ದೆಗಳಿಂದ ವಂಚಿತರನ್ನಾಗಿ ಮಾಡುವ ದುರುದ್ದೇಶದಿಂದ ಕೂಡಿದೆ. ಇದು ಮೀಸಲಾತಿಯ ಉದ್ದೇಶವನ್ನೇ ಅಣಕಿಸುವಂತಿದೆ. ಆದ್ದರಿಂದ ಒಳಮೀಸಲಾತಿ ಜಾರಿಗೆ ಮುಂದಾಗುವ ರಾಜ್ಯ ಸರಕಾರ ಕೆನೆಪದರದ ವಿಷಯವನ್ನು ಪ್ರಧಾನ ಮಾಡದೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಒತ್ತು ನೀಡಬೇಕು. ಶೋಷಿತ ಸಮುದಾಯಗಳ ಒಳಗೆ ಮೀಸಲಾತಿಯಿಂದ ವಂಚಿತವಾಗಿರುವ ಸಮುದಾಯಗಳಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಕೊಡುವ ಕೆಲಸಕ್ಕೆ ಸರಕಾರ ಶೀಘ್ರಗತಿಯಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಆ.9ರಂದು ದಲಿತ ಶಾಸಕರ ಮನೆ ಮುಂದೆ ಧರಣಿ
ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಮೀಸಲಿರಿಸಿದ್ದ ಎಸ್ಸಿಪಿ – ಟಿಎಸ್ಪಿ 2 ಲಕ್ಷ 56 ಸಾವಿರ ಕೋಟಿ ರೂಪಾಯಿ ಹಣವನ್ನು ಕೂಡಲೇ ವಾಪಸ್ಸು ನೀಡಿ. ಅದನ್ನು ಅರ್ಹ ದಲಿತರಿಗೆ ತಲುಪುವಂತೆ ಮಾಡಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಈ ಅನುದಾನವನ್ನು ದಲಿತರ ಮಕ್ಕಳ ಸ್ಮಾರ್ಟ್ ಶಿಕ್ಷಣಕ್ಕೆ, ಉನ್ನತ ವ್ಯಾಸಂಗಕ್ಕೆ, ಆರ್ಥಿಕವಾಗಿ ಸಬಲರಾಗಲು ಬಳಸಬೇಕು. ಇದನ್ನು ಬಿಟ್ಟು ದಲಿತರೇ ವಾಸಿಸದ ಕೇರಿಗಳಿಗೆ ಸಿಮೆಂಟ್ ರಸ್ತೆ ಮಾಡಿಸಲು, ದೇವಾಲಯ ಕಟ್ಟಲು, ಸಮುದಾಯ ಭವನ ಕಟ್ಟಲು ದುರ್ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಸಮುದಾಯದ ಅನುದಾನ ಪಲ್ಲಟದ ಹೆಸರಿನಲ್ಲಿ ದುರ್ಬಳಕೆ ಆಗುತ್ತಿದ್ದರೂ ಪ್ರಶ್ನಿಸದೆ ಸುಮ್ಮನಿರುವ ದಲಿತ ಶಾಸಕರ ನಿವಾಸದ ಎದುರು ಆಗಸ್ಟ್ 9ರಂದು ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಗಡ್ಡಂ ವೆಂಕಟೇಶ್ ಮಾತನಾಡಿ, “ಒಳಮೀಸಲಾತಿ ಜಾರಿ ಸಂಬಂಧ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಶೋಷಿತ ಸಮುದಾಯಗಳ ಪಾಲಿಗೆ ಸಂತೋಷಕರವಾದ ತೀರ್ಪಾಗಿದೆ. ರಾಜ್ಯಗಳಿಗೆ ಪರಮಾಧಿಕಾರ ನೀಡಿದ್ದು, ಈ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ರೇವಂತ್ರೆಡ್ಡಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಎಸ್ಸಿಪಿ – ಟಿಎಸ್ಪಿ ಅನುದಾನವನ್ನು 7ಸಿ ಮೂಲಕ ಬೇರೆ ಕಾಮಗಾರಿಗಳಿಗೆ ಬಳಸಿರುವುದು ದಲಿತ ವಿರೋಧಿ ನಡೆಯಾಗಿದ್ದು, ದಸಂಸ ಇದನ್ನು ಖಂಡಿಸುತ್ತದೆ. ದಲಿತರಿಗೆ ಮಾಡಿರುವ ವಂಚನೆ ಬಗ್ಗೆ ಸರಕಾರಕ್ಕೆ ನಾಚಿಕೆಯಾಗಬೇಕಿದೆ. ಆದ್ದರಿಂದಲೇ ದಲಿತ ಶಾಸಕರ ಮನೆಗಳ ಮುಂದೆ ನಿಲ್ಲುತ್ತೇವೆ. ಮೊದಲಿಗೆ ಕೆ.ಜಿ.ಎಫ್ನಲ್ಲಿ ಆ.9ರಂದು ಶಾಸಕಿ ರೂಪಕಲಾ ಶಶಿಧರ್ ಮನೆ ಮುಂದೆ ನಡೆಸುತ್ತಿರುವ ಧರಣಿಗೆ ಜಿಲ್ಲೆಯಿಂದ 1 ಸಾವಿರ ಮಂದಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಮುನಿವೆಂಕಟಪ್ಪ, ಮುನಿರೆಡ್ಡಿ, ಸಿ.ಜಿ.ಗಂಗಪ್ಪ, ಬಿ.ಎನ್.ಪರಮೇಶ್, ವೆಂಕಟರಾಮ್, ವರ್ಲಕೊಂಡ ರಾಜು, ರವಿ, ತ್ಯಾಗರಾಜ್, ಮುನಿರಾಜ್ ಮತ್ತಿತರರು ಇದ್ದರು.
