ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಾಹಿತಿ, ಬರಹಗಾರರಲ್ಲಿ ಮಾತ್ರ ಅಲ್ಲದೆ ಪ್ರತಿಯೊಬ್ಬರಲ್ಲೂ ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಹೇಳಿದರು.
ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ʼಸಾಹಿತಿಗಳು ಮತ್ತು ಸಾಮಾಜಿಕ ಜವಾಬ್ದಾರಿʼ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ʼಸಾಮಾಜಿಕ ಜವಾಬ್ದಾರಿ ರೈತ, ಕ್ರೀಡೆ, ಸಂಗೀತ, ವಿದ್ಯಾರ್ಥಿ, ಶಿಕ್ಷಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕುʼ ಎಂದು ಹೇಳಿದರು.
ಸಾಹಿತಿಗಳು ಬರಹ, ಕಥೆ, ಕಾದಂಬರಿ, ಉಪನ್ಯಾಸ ಸೇರಿದಂತೆ ವಿವಿಧ ಪ್ರಕಾರದ ಸೃಜನಶೀಲ ಸಾಹಿತ್ಯದಿಂದ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಬರಹಗಾರರು ಯಾವಾಗಲೂ ಸತ್ಯವನ್ನು ಪ್ರತಿಪಾದಿಸಬೇಕು, ಸುಳ್ಳು ಬರೆಯುವುದು ಆತ್ಮವಂಚನೆಯಾಗುತ್ತದೆ. ಇತ್ತೀಚಿನ ಬಹುತೇಕ ಸಾಹಿತಿಗಳ ಬದುಕು ಮತ್ತು ಬರಹ ಭಿನ್ನವಾಗಿದೆʼ ಎಂದರು.
ʼಎಲ್ಲ ಸರ್ವಾಧಿಕಾರಿಗಳ, ಬಲಪಂಥೀಯರ ಮೊದಲ ಟಾರ್ಗೆಟ್ ಚಿಂತಕರು, ಸಾಹಿತಿಗಳಾಗಿದ್ದಾರೆ. ಸತ್ಯ ಹೇಳಲು ಪ್ರಯತ್ನಿಸುವವರ ಬಾಯಿ ಮುಚ್ಚಿಸುವ ಕೆಲಸಗಳು ನಡೆಯುತ್ತಿದೆ. ಸಾಮಾಜಿಕ ಜವಾಬ್ದಾರಿಯಿಂದ ಸತ್ಯ ಹೇಳುವರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಆದರೂ, ನಮ್ಮ ಇತಿಮಿತಿಯಲ್ಲಿ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ಮುಂದುವರೆಸಬೇಕುʼ ಎಂದು ಸಲಹೆ ನೀಡಿದರು.
ʼಬರಹಗಾರರು ಸಾಹಿತಿಗಳು ಓದುಗರಿಗೆ ನಿಷ್ಠುರವಾಗಿರಬೇಕು. ರಾಜಕಾರಣಿಗಳು ಕೂಡ ಮತದಾರರಿಗೆ ನಿಷ್ಠುರವಾಗಿರಬೇಕು. ಆದರೆ, ರಾಜಕಾರಣಿಗಳು ಜನರನ್ನು ಮೂಢರಾಗಿಸಲು ಬಯಸುತ್ತಾರೆ. ಬುದ್ಧ, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾಲದಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ ಇತ್ತು. ಆದರೂ, ಅವರು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು. ಇಂದು ಜಾಗೃತಿ ಸಾಧನಗಳ ಕೊರತೆ ಇಲ್ಲ. ಆದರೆ, ಇಚ್ಚಾಶಕ್ತಿ ಕೊರತೆಯಿದೆʼ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಬೀದರ್ ಕ್ರಾಂತಿ ಮತ್ತು ಕಾಯಕ ಚಳುವಳಿಯ ನೆಲ. ಇಲ್ಲಿ ವೈಚಾರಿಕತೆ ಪ್ರಜ್ಞೆಯ ಜನರಿದ್ದು ನೈತಿಕ ಮೌಲ್ಯಗಳಿವೆ. ಆದರೆ, ಶರಣರ ಹತ್ಯಾಕಾಂಡ ನಡೆಸಿದವರೊಂದಿಗೆ ಸಖ್ಯ ಬೆಳೆಸುತ್ತಿರುವುದರಿಂದ ವೈಚಾರಿಕ ನಿಲುವಿಗೆ ಪೆಟ್ಟು ಬೀಳುತ್ತಿದೆ. ಅನ್ಯ ಜಿಲ್ಲೆಯ ಲೇಖಕರ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮ ಭಾಗದಲ್ಲಿ ಗಟ್ಟಿ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆʼ ಎಂದು ಹೇಳಿದರು.
ಕರ್ನಾಟಕ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಪ್ರಭುತ್ವದಲ್ಲಿ ಸಾಹಿತಿಗಳು ಮುಕ್ತವಾಗಿ ಬರೆಯುವ ಮೂಲಕ ಜನರ ದನಿಯಾಗಬೇಕು. ಇಂದು ಓಲೈಕೆ ಸಾಹಿತ್ಯ ಎದ್ದು ಕಾಣುತ್ತಿದೆ. ಕೆಟ್ಟ ಸಾಹಿತ್ಯದಿಂದ ಯಾರಿಗೂ ಉಪಯೋಗವಿಲ್ಲ. ಅದರಿಂದ ಸಂಪನ್ಮೂಲ ಹಾಳಾಗುತ್ತದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಸೇರಿದಂತೆ ಸಾಮಾಜಿಕ ಚಿಂತಕರು, ಸಾಹಿತಿಗಳು, ಸಾಹಿತ್ಯಾಸ್ತಕರು ಭಾಗವಹಿಸಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಪ್ರೊ. ಶಿವಕುಮಾರ ಕಟ್ಟೆ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಟಿ.ಎಮ್. ಮಚ್ಚೆ ವಂದಿಸಿದರು.