ಲೋಕಾಪುರ-ಸವದತ್ತಿ-ಧಾರವಾಡ ಮರ್ಗದಲ್ಲಿ ಹೊಸ ರೈಲು ಮಾರ್ಗ ನಿರ್ಮಿಸುವಂತೆ ಬೆಳಗಾವಿ ಲೋಕಸಭಾ ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ನವದೆಹಲಿಯ ರೈಲ್ವೆ ಭವನದ ಅವರ ಕಚೇರಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ, “ಬೆಳಗಾವಿ ಜಿಲ್ಲೆಯ ಸುಕ್ಷೇತ್ರ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಾಥಮಿಕ ಹಂತದಲ್ಲಿ ಅವಶ್ಯವಿರುವ ಮಾರ್ಗ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು” ಎಂದು ಚರ್ಚೆ ಮಾಡಿದ್ದಾರೆ.
“2019ರಲ್ಲಿ ಪ್ರಸ್ತಾಪಿತ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಸಮೀಕ್ಷೆ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೊಂಡು, ಈ ಮಾರ್ಗದಲ್ಲಿ ಜನದಟ್ಟಣೆ ಇಲ್ಲವೆಂದು ಪ್ರಸ್ತಾಪಿಸಿ, ಯೋಜನೆ ಫಲಕಾಯವಲ್ಲವೆಂದು ವರದಿ ನೀಡಿತ್ತು. ಆದರೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ 2022-23 ನೇ ಸಾಲಿನಲ್ಲಿ(ಎಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ) ಅಂದಾಜು 1.23ಕೋಟಿ ಮಂದಿ ಭೇಟಿ ನೀಡಿದ್ದು, 87 ಲಕ್ಷ ಮಂದಿ ದರ್ಶನ ಪಡೆದಿದ್ದಾರೆ. ಜನಸಾಂದ್ರತೆ ಇದ್ದಿದ್ದರಿಂದ 35 ಲಕ್ಷ ಮಂದಿ ದರ್ಶನ ಪಡೆಯದೆ ವಾಪಸ್ಸಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ದೇಶದ ವಿವಿಧ ಭಾಗಗಳಿಂದ ದರ್ಶನಕ್ಕೆ ಬಂದು ಹೋಗಿದ್ದುದರ ಕುರಿತು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಈಗಾಗಲೇ ನೂರಾರು ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಮಾರ್ಗದ ರೈಲು ಮಾರ್ಗ ನಿರ್ಮಾಣಕ್ಕಾಗಿ ಪುನಃ ಸಮೀಕ್ಷೆ ಕಾರ್ಯ ಕೈಗೊಳ್ಳುವುದು ಅವಶ್ಯ” ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ ಡಾ.ಮಿರ್ಜಾ ಬಷೀರ್ ʼಅಬ್ರಕಡಬ್ರʼ ಕೃತಿ ಆಯ್ಕೆ
ವಿಷಯವನ್ನು ಅವಲೋಕಿಸಿದ ರೈಲ್ವೆ ಸಚಿವರು ಮುಂಬರುವ ದಿನಗಳಲ್ಲಿ ಲೋಕಾಪುರ-ಸವದತ್ತಿ- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಸಮೀಕ್ಷೆ ಕಾರ್ಯ ನಡೆಸುವ ವಿಷಯ ಪರಿಶೀಲಿಸುವ ಕುರಿತು ಭರವಸೆ ನೀಡಿದ್ದಾರೆ.
ಬೆಂಗಳೂರು-ಧಾರವಾಡ ನಡುವೆ ಸದ್ಯ ಚಲಿಸುತ್ತಿರುವ “ವಂದೇ ಭಾರತ್” ರೈಲು ಸಂಚಾರವನ್ನು ಬೆಳಗಾವಿ ನಗರದವರೆಗೆ ವಿಸ್ತರಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದು, ಸಮಯವನ್ನು ಹೊಂದಿಸಿಕೊಂಡು ರೈಲು ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸುವುದು ಸಾಧ್ಯ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರಂತೆ ಈ ಬೇಡಿಕೆಯನ್ನು ಈಡೇರಿಸುವುದಾಗಿ ರೈಲ್ವೆ ಸಚಿವರು ಭೇಟಿಯ ವೇಳೆ ತಿಳಿಸಿದ್ದಾರೆ.