ಜನದ್ರೋಹಿ ಕೇಂದ್ರ ಸರ್ಕಾರ, ಜಗಮೊಂಡ ರಾಜ್ಯ ಸರ್ಕಾರಗಳಿವೆ. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಶೋಷಿಸುತ್ತಿದೆ. ಬಿಜೆಪಿಯನ್ನು ಮಣಿಸಿ ಜನರು ಅಧಿಕಾರಕ್ಕೆ ತಂದ ರಾಜ್ಯ ಸರ್ಕಾರ ಜನರ ಮಾತಿಗೆ ಕಿವಿಗೊಡದೆ ಮೊಂಡುತನ ಮೆರೆಯುತ್ತಿದೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ದುಡಿಯುವ ಜನರ ಮಹಾಧರಣಿಯಲ್ಲಿ ಅವರು ಮಾತನಾಡಿದರು. “ನಮ್ಮೆಲ್ಲ ಸಮಸ್ಯೆಗಳಿಗೂ ಮೂಲ ಕಾರಣ ನಮ್ಮನ್ನಾಳುತ್ತಿರುವ ಸರ್ಕಾರಗಳು. ಬಲಾಢ್ಯರು ಜನರನ್ನು ದೋಚುತ್ತಿದ್ದಾರೆ. ಅವರಿಗೆ ಸರ್ಕಾರಗಳು ದಳ್ಳಾಳಿಗಳಂತೆ ಕೆಲಸ ಮಾಡುತ್ತಿವೆ. ಸರ್ಕಾರಗಳು ಬಲಾಢ್ಯರನ್ನು ನಿಯಂತ್ರಿಸಿ ಜನರನ್ನು ರಕ್ಷಿಸಬೇಕು. ಆದರೆ, ಆ ಕೆಲಸವನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ. ಬದಲಾಗಿ, ಬಲಾಢ್ಯರಿಂದ ಹಣ ಪಡೆದು, ಜನರನ್ನು ಶೋಷಿಸುತ್ತಿವೆ” ಎಂದರು.
“ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಮೋದಿಗೆ ಅಧಿಕಾರ ಕೊಟ್ಟೆವು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ, ಯುವಜನರಿಗೆ ಉದ್ಯೋಗ ಸಿಗುತ್ತೆ, ಕೃಷಿಗೆ ಬೆಂಬಲ ಬೆಲೆ ಸಿಗುತ್ತೆ, ಜನರಿಗೆ ಉತ್ತಮ ಜೀವನ ಸಿಗುತ್ತೆ ಅಂತ ನಾವು ಅವರಿಗೆ ಮತ ಹಾಕಿದೆವು. ಆದರೆ, ಆಗಿದ್ದೇನು, ಜನರು ಮತ್ತಷ್ಟು ಬಡವರಾದರು. ಅಂಬಾನಿ-ಅದಾನಿಗಳು ಮತ್ತಷ್ಟು ಶ್ರೀಮಂತರಾದರು. ಕೊರೊನಾ ಸಂದರ್ಭದಲ್ಲೂ ಜನರನ್ನು ಶೋಷಿಸಲಾಯಿತು” ಎಮದು ತಿಳಿಸಿದರು.
“ಕೊರೊನಾ ಸಂದರ್ಭದಲ್ಲೂ ಜಗ್ಗದೆ ಹೋರಾಟ ಮಾಡಿದವರು ರೈತರು. ಅವರ ಹೋರಾಟಕ್ಕೆ ಮೋದಿ ಸರ್ಕಾರ ಮಣಿಯಿತು. ರೈತ ವಿರೋಧಿ ಕೃಷಿ ನೀತಿಗಳನ್ನು ಹಿಂಪಡೆಯಿತು. ಆದರೆ, ಕಾರ್ಮಿಕರು ಅಂತದ್ದೊಂದು ಹೋರಾಟ ಮಾಡಲು ಸಾಧ್ಯವಿಲ್ಲ. ಅದರೂ, ಸರ್ಕಾರಕ್ಕೆ ತಕ್ಕ ಪಾಠ ಕಲಿಸಬಹುದು. ಹಾಗಾಗಿ, ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದೆವು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ, ಈ ಸರ್ಕಾರ ಏನು ಮಾಡುತ್ತಿದೆ. ರೈತರು, ಕಾರ್ಮಿಕರು, ದಲಿತರ ಜೊತೆ ಒಂದೇ ಒಂದು ಸಭೆಯನ್ನೂ ಮಾಡಲಿಲ್ಲ. ಯಾರ ಸಮಸ್ಯೆಗಳನ್ನೂ ಕೇಳಲಿಲ್ಲ. ಈ ಆಳುವವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ನಾವು ಕೇಂದ್ರ ಸರ್ಕಾರದ ವಿರುದ್ಧ ಏನು ಮಾಡಬೇಕು. ರಾಜ್ಯ ಸರ್ಕಾರಕ್ಕೆ ಪಾಠ ಕಲಿಸಲು ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕಿದೆ” ಎಂದು ಹೇಳಿದರು.
“ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯದ ಎಲ್ಲ ಸಚಿವರು ಇರುವಂತೆ ಸಿಂಗಲ್ ವಿಂಡೋ ಸಭೆಯನ್ನು ರಾಜ್ಯ ಸರ್ಕಾರ ಕರೆಯಬೇಕು. ಎಲ್ಲ ಸಮುದಾಯಗಳು, ಕ್ಷೇತ್ರಗಳ ಜನರ ಸಮಸ್ಯೆಗಳ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯಬೇಕು. ಅಂತಹ ಸಭೆಗೆ ಸರ್ಕಾರ ದಿನಾಂಕ ನಿಗದಿ ಮಾಡಬೇಕು. ನಮ್ಮ ಮುಂದೆ ಜನದ್ರೋಹಿ ಕೇಂದ್ರ ಸರ್ಕಾರ, ಜಗಮಂಡ ರಾಜ್ಯ ಸರ್ಕಾರಗಳಿವೆ. ಅವುಗಳ ವಿರುದ್ಧ ನಾವೆಲ್ಲರೂ ಒಟ್ಟುಗೂಡಬೇಕು. ಗಟ್ಟಿ ಹೋರಾಟವನ್ನು ಮಾಡಬೇಕು” ಎಂದು ಕರೆಕೊಟ್ಟರು.