ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ ಏಪ್ರಿಲ್ 5 ಮತ್ತು 6 ರಂದು ಸಾಹಿತ್ಯ ಅಕಾಡೆಮಿ, ವಿಶ್ವ ಮೈತ್ರಿ ಬುದ್ಧ ವಿಹಾರ , ತಥಾಗತ ಬುದ್ಧ ವಿಹಾರ ನಂಜನಗೂಡು, ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ‘ ಮಾನವ ಮೈತ್ರಿ ಬೌದ್ಧ ಸಮ್ಮೇಳನ ‘ ಮಾನಸ ಗಂಗೋತ್ರಿವಿಶ್ವ ವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆಯಲಿದೆ ಎಂದರು.
ಮಾನವ ಮೈತ್ರಿ ಬೌದ್ಧ ಸಮ್ಮೇಳನ ‘ Ambedkarites buddhist conference ‘ ಮೂಲಕ ‘ ಮಾನವ ಮೈತ್ರಿ ‘ ಕಮ್ಮಟವನ್ನು ಏರ್ಪಡಿಸಲಾಗಿದೆ. ವೇದಿಕೆಯಲ್ಲಿ ನಾಡಿನ ಹೆಸರಾಂತ ಚಿಂತಕರು, ಹೋರಾಟಗಾರರು, ಬರಹಗಾರರು, ರಂಗಕರ್ಮಿಗಳು, ಗಾಯಕರು ಜನ ಚಳುವಳಿಯಲ್ಲಿ ತೊಡಗಿಸಿಕೊಂಡ ನಾಡಿನ ಹಿರಿಯರು, ಮಹಿಳೆಯರು, ಯುವಕ, ಯುವತಿಯರು ಹಾಗೂ ಜನಪ್ರತಿನಿದಿಗಳು ಭಾಗಿಯಾಗಲಿದ್ದಾರೆ.
ಅಂಬೇಡ್ಕರ್ ಸಾಹಿತ್ಯ ಅಕಾಡೆಮಿಯು 2024 ರ ಅಕ್ಟೋಬರ್ 3 ರಂದು ಆರಂಭಿಸಿದ ‘ ಅಂಬೇಡ್ಕರ್ ಅರಿವಿನ ಮಾರ್ಗದಲ್ಲಿ ಧಮ್ಮ ಪಯಣ ‘ ಎಂಬ ವಿನೂತನ ಅರಿವಿನ ಪಯಣವನ್ನು ಹಳ್ಳಿ ಹಳ್ಳಿಗಳಲ್ಲಿ ಎಲ್ಲಾ ಜನ ಸಮೂಹಗಳನ್ನು ಒಳಗೊಂಡಂತೆ, ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ, 10,000 ಕಿಮೀಗಳ ಪಯಣವನ್ನು ಪೂರ್ಣಗೊಳಿಸಿದೆ.
ಹೀಗೆ, 150 ಗ್ರಾಮ, 35,000 ಕುಟುಂಬ, 3 ಲಕ್ಷಕ್ಕೂ ಅಧಿಕ ಜನರನ್ನು ನೇರವಾಗಿ ಸಂಪರ್ಕಿಸುತ್ತಾ, ಪ್ರತಿ ಮನೆ ಮನೆಯ ಮುಂದೆ ಸಾಗುತ್ತಾ , ಲಕ್ಷಾಂತರ ಅರಿವಿನ ದೀಪಗಳನ್ನು ಹಚ್ಚಲಾಗಿದೆ. ಮಹಿಳೆಯರು, ಮಕ್ಕಳು ಹಾಗೂ ದುಡಿಯುವ ವರ್ಗವನ್ನು ಒಳಗೊಳ್ಳುತ್ತಾ, ಈ ಅರಿವಿನ ಮಾರ್ಗವನ್ನು ಸಾಮಾನ್ಯ ಜನರೆಡೆಗೆ ಕೊಂಡಯ್ಯಲಾಗಿದೆ.

ಬಹು ಮುಖ್ಯವಾಗಿ ” ಮಾನವ ಪ್ರೇಮವನ್ನೇ ತನ್ನ ವಸ್ತುವನ್ನಾಗಿಸಿಕೊಂಡು, ಹಳ್ಳಿಗಳಲ್ಲಿ ವ್ಯಾಪಕವಾಗಿರುವ ಅಸ್ಪೃಶ್ಯತೆ, ಜಾತಿಯತೆ, ಕುಡಿತ, ಜೂಜು, ಮಾನವ ಸಂಬಂಧದ ಬಿರುಕುಗಳು, ಕಲಹಗಳು, ದ್ವೇಷ, ವೈಷಮ್ಯಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸುತ್ತಾ, ಬುದ್ಧನ ಶಾಂತಿ ಕರುಣೆ ಮೈತ್ರಿಗಳನ್ನು ಸಮುದಾಯಗಳ ನಡುವೆ ಬಿತ್ತುತ್ತಾ, ಸಾಮಾಜಿಕ ಸಾಮರಸ್ಯದ ಹಾದಿಯಲ್ಲಿ ನೈಜ ಸತ್ಯಗಳು, ಭವಿಷ್ಯದಲ್ಲಿ ಮಾನವ ಪ್ರೇಮದ ಹಾಜರಿ, ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿಗೆ ಆಲೋಚನೆಗಳನ್ನು ಹಸ್ತಾಂತರಿಸುವ ಬಗೆ, ನೈಜ ಜನ ಚಳುವಳಿಗಳ ಜೀವಂತಿಕೆಯ ಬಗೆ, ಬುದ್ಧ ಮತ್ತು ಆಲೋಚನೆಗಳು, ಅಂಬೇಡ್ಕರ್ ರವರ ದೃಷ್ಟಿ ಕೋನ ಹೀಗೆ ಜನ ಸಾಮಾನ್ಯರಲ್ಲಿ ಸದಾ ಜಾಗೃತಿಯನ್ನು ಬಿತ್ತುವುದೇ ಈ ಕಾರ್ಯಕ್ರಮದ ಧ್ಯೇಯವಾಗಿದೆ ” ಎಂದರು.
150 ಗ್ರಾಮಗಳಲ್ಲಿ ನಮ್ಮೊಟ್ಟಿಗೆ ನಿರಂತರವಾಗಿ ಹೆಜ್ಜೆ ಹಾಕಿದ, ಏಳು ಬೀಳುಗಳಲ್ಲಿ ಜೊತೆ ಇದ್ದ, ತಮ್ಮ ಕುಟುಂಬ ಸಮೇತರಾಗಿ ದುಡಿದ. ಹಸಿದಾಗ ಅನ್ನ ಹಾಕಿದ ಸಾಮಾನ್ಯ ಜನರೇ ರೂಪಿಸಿರುವ ಕಾರ್ಯಕ್ರಮ ಇದಾಗಿದ್ದು ಮಾನವ ಜಗತ್ತಿಗೆ ತಮ್ಮ ಚಿಂತನೆಗಳನ್ನು ಬಿತ್ತಬೇಕಿದೆ. ಹಾಗಾಗಿ, ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರೈತ ಕುಟುಂಬಗಳಿಗೆ ಅನ್ಯಾಯ; ಅಹೋರಾತ್ರಿ ಧರಣಿ
ಸಮ್ಮೇಳನದ ಪೋಸ್ಟರ್ ನ್ನು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್, ಅಹಿಂದ ಜವರಪ್ಪ, ಸಂಯೋಜಕ ಮಲ್ಕುಂಡಿ ಮಹಾದೇವ ಸ್ವಾಮಿ ಬಿಡುಗಡೆ ಮಾಡಿದರು.