ಹಣಕಾಸು ಗಳಿಸುವುದು ಮಾತ್ರ ಏಳಿಗೆಯ ಏಕೈಕ ಮಾನದಂಡ ಎಂಬ ಹುಚ್ಚು ಪೈಪೋಟಿಯಲ್ಲಿ ಸಾಗುತ್ತಿರುವ ಚೀನಾ, ಅಮೇರಿಕಾ, ಜಪಾನ್, ಯುರೋಪ್, ರಷ್ಯ, ಭಾರತ, ಇನ್ನಿತರೇ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದರಿಂದ ಮುಂದಿನ 50 ರಿಂದ 60 ವರ್ಷದಲ್ಲಿ ಕಲ್ಲಿದ್ದಲು, ತೈಲಬಾವಿಗಳು, ಖನಿಜ ಸಂಪತ್ತು ಬರಿದಾಗುತ್ತದೆ ಎಂದು ಬೆಂಗಳೂರಿನ ಎಸ್ಎಪಿಎಸಿಸಿ ವಿಜ್ಞಾನಿ ಡಾ. ಸುಧಿ ಶೇಷಾದ್ರಿ ತಿಳಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀ ನಗರದಲ್ಲಿರುವ ಭಾರತೀ ಶಿಕ್ಷಣ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘ, ಮಳವಳ್ಳಿ ಮತ್ತು ತುಮಕೂರಿನ ಗಾಂಧಿ ಸಹಜ ಬೇಸಾಯ ಶಾಲೆ ಸಹಯೋಗದಲ್ಲಿ ಎಸ್ಎಪಿಎಸಿಸಿ (ಸೌತ್ ಏಶಿಯನ್ ಪೀಪಲ್ಸ್ ಆಕ್ಷನ್ ಆನ್ ಕ್ಲೈಮೇಟ್ ಕ್ರೈಸಿಸ್) ನ ತಾಂತ್ರಿಕ ಪರಿಣಿತರೊಂದಿಗೆ “ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ ಮತ್ತು ರೈತರಿಗೆ ಸಿಗಬೇಕಾದ ಮನ್ನಣೆ” ವಿಚಾರ ಸಂಕಿರಣದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೈಗಾರಿಕೆ ಕ್ರಾಂತಿ, ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ವಾತಾವರಣದಲ್ಲಿ ತಾಪಮಾನ ಏರಿಕೆ ಉಂಟಾಗುತ್ತಿದೆ. ಇದರ ಹೊಡೆತ ಪರಿಸರದಲ್ಲಿರುವ ಸಕಲ ಜೀವರಾಶಿಗಳ ಮೇಲೆ ಆಗುತ್ತಿದೆ. ಇದರ ನೇರ ಬಲಿಪಶು ರೈತ ಮತ್ತು ಕೃಷಿ ಕ್ಷೇತ್ರವಾಗಿರುತ್ತದೆ. ಹವಾಮಾನ ವೈಪರೀತ್ಯವು ಕೃಷಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ ಹೆಸರಿನಲ್ಲಿ ಸುಸ್ಥಿರ ಏಳಿಗೆ ಸಾಧಿಸುವ ಯೋಜನೆ ರೂಪಿಸಲು ಮತ್ತು ಹವಾಮಾನ ಬದಲಾವಣೆ ನಿಧಿಯ ಹಣಕಾಸು ಸೌಲಭ್ಯಗಳನ್ನು ಬಳಸಿಕೊಳ್ಳಲು ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಸುಸ್ಥಿರ ಏಳಿಗೆ ಸಾಧಿಸಲು ಕೃಷಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕೃಷಿ ಕ್ಷೇತ್ರ ಮತ್ತು ರೈತರನ್ನು ಪರಿಗಣಿಸದೆ ಬಹುರಾಷ್ಟ್ರೀಯ ಕಂಪನಿಗಳು ತಯಾರಿಕೆ ಮಾಡುವ ಸೋಲಾರ್ ಎನರ್ಜಿ, ವಿಂಡ್ ಎನರ್ಜಿ, ಬ್ಯಾಟರಿ ಚಾಲಿತ ವಾಹನ ತಯಾರಿಕೆಯನ್ನು ಪ್ರಮುಖವಾಗಿ ತೆಗೆದುಕೊಂಡು ಇವುಗಳ ಮೇಲೆ ಹೆಚ್ಚು ಹಣಕಾಸು ನೆರವು ನೀಡುತ್ತಿರುವುದು ಒಂದು ದೊಡ್ಡ ದಂಧೆಯಾಗಿದೆ ಎಂದು ಅಭಿಪ್ರಾಯಿಸಿದರು.
ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಬಳಕೆಯಾಗುವ ಒಳಹರಿವಿನ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಒಳಹರಿವಿನ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೈಗಾರಿಕೆಗಳಲ್ಲಿ ತಾಂತ್ರಿಕತೆ ಮೂಲಕ ಬಳಕೆ ಮಾಡಿಕೊಳ್ಳುವ ಸೂರ್ಯನ ಶಕ್ತಿಯನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕವಾಗಿ ಆಗುವ ಸೂರ್ಯನ ಶಕ್ತಿಯ ಬಳಕೆಯನ್ನು ಕಡೆಗಣಿಸಲಾಗಿದೆ. ಹಣ ಮತ್ತು ಶಕ್ತಿಯ ಅಸಮಾನ ವಿನಿಮಯ ನೀತಿಯನ್ನು ಸರಿಪಡಿಸಬೇಕಿದೆ ಎಂದು ಡಾ. ಸುಧಿ ಶೇಷಾದ್ರಿ ತಿಳಿಸಿದರು.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳು ಸಂಭವಿಸುತ್ತಿದ್ದು, ಇದರಿಂದ ಭಾರತೀಯ ರೈತರಿಗೆ ಪ್ರತಿ ವರ್ಷ 5 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬೆಳೆ ನಷ್ಟವಾಗುತ್ತಿದೆ. ಈ ನಷ್ಟವನ್ನು ಹವಾಮಾನ ಬದಲಾವಣೆ ನಿಧಿಯಿಂದ ರೈತರಿಗೆ ಪರಿಹಾರ ರೂಪದಲ್ಲಿ ಭರಿಸಬೇಕು. ಮಾನವನ ಹಸಿವು ನೀಗಿಸಲು ಕೃಷಿ ಭೂಮಿಯಲ್ಲಿ ಬೆಳೆಯುವ ಆಹಾರ ಉತ್ಪಾದನೆಯಿಂದ ಆಗುವ ಹಸಿರು ಮನೆ ಅನಿಲ ಹೊರ ಸೂಸುವಿಕೆಯನ್ನು ಕೃಷಿ ಕ್ಷೇತ್ರಕ್ಕೆ ಆಂಟಿಸುವುದು ಸಮಂಜಸವಲ್ಲ. ಪೆಟ್ರೋಲ್, ಡೀಸೆಲ್ ಬಳಕೆಯಿಂದ ವಾಹನದಿಂದ ಹೊರಸುವ ಅನಿಲದ ಲೆಕ್ಕವನ್ನು ವಾಹನದ ಮೇಲೆ ಹಾಕಲಾಗುತ್ತದೆ ಹೊರತು ತೈಲ ಕಂಪನಿಯ ಮೇಲೆ ಹಾಕುವುದಿಲ್ಲ. ಇದೇ ರೀತಿ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರದ ಮೇಲೆ ಹೊರೆ ಹಾಕುವ ಕ್ರಮವನ್ನು ಕೈ ಬಿಡಬೇಕು ಎಂದರು.
ಇದನ್ನು ಓದಿದ್ದೀರಾ? ಕೊಪ್ಪಳ | ದಲಿತ ಯುವಕನ ಕೊಲೆ ಪ್ರಕರಣ: ಕುಟುಂಬಕ್ಕೆ ಪರಿಹಾರ ವಿತರಿಸಿದ ಸಚಿವ ಶಿವರಾಜ ತಂಗಡಗಿ
ಸಭೆಯಲ್ಲಿ ಎಂಎಲ್ಸಿ ಮಧು ಜಿ ಮಾದೇಗೌಡ, ಭಾರತೀ ಶಿಕ್ಷಣ ಸಂಸ್ಥೆ ಟ್ರಸ್ಟ್ನ ಕಾರ್ಯದರ್ಶಿ ಬಿ ಎಂ ನಂಜೇಗೌಡ, ಕಾರ್ಯಕ್ರಮದ ಆಯೋಜಕಾರದ ಮಳವಳ್ಳಿ ಮಹೇಶ್ ಕುಮಾರ್, ತುಮಕೂರು ಗಾಂಧಿ ಬೇಸಾಯ ಶಾಲೆಯ ಯತಿರಾಜು, ಡಾಕ್ಟರ್ ಮಂಜುನಾಥ್, ರವೀಶ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿಪಿ ಮಾಧವನ್, ಕೊಳ್ಳೇಗಾಲ ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್, ಸತ್ತೇಗಾಲದ ಪ್ರಶಾಂತ್ ಜಯರಾಮ್, ಕೆ. ಸಿ ವೆಂಕಟೇಶ್, ಹಲವು ರೈತ ಮುಖಂಡರು ಹಾಗೂ 150 ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.
ವರದಿ: ನಗರಕೆರೆ ಜಗದೀಶ್
