ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ. ಕಾನೂನಿನ ಅರಿವಿಲ್ಲದೆ ಅಪರಾಧವಾಯಿತು ಎಂದರೆ ಕ್ಷಮೆ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ಮಂಡ್ಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ. ಎಂ ಭೃಂಗೇಶ್ ತಿಳಿಸಿದರು.
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಎವಿಆರ್ ಕೊಠಡಿಯಲ್ಲಿ ನಡೆದ ನೂತನ ಅಪರಾಧ ಕಾನೂನು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಾನೂನಿನಲ್ಲಿ ಹೊಸದಾಗಿ ಸೇರ್ಪಡೆ ಮಾಡಿರುವ ನೂತನ ಅಪರಾಧ ಕಾನೂನುಗಳ ವಿಶೇಷ ಕಾರ್ಯಕ್ರಮ ಇದಾಗಿದೆ. ಎರಡು ದಿನಗಳ ಕಾಲ ನೂತನ ಅಪರಾಧ ಕಾನೂನುಗಳಿಗೆ ಸಂಬಂಧಿಸಿದಂತೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಹೊಸ ಕಾನೂನಿನ ಬಗ್ಗೆ ತಿಳಿಯಬಹುದು” ಎಂದರು.
“ಪ್ರಸ್ತುತ ಯುವಜನರಿಗೆ ಕನಿಷ್ಟ ಕಾನೂನುಗಳ ಅರಿವು ಇರಬೇಕು. ಇಲ್ಲವಾದರೆ ತಪ್ಪಿತಸ್ಥರಾಗುವ ಸಾಧ್ಯತೆಯಿದೆ. ತಪ್ಪಿತಸ್ಥರಾದ ಬಳಿಕ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಕಾನೂನಿನ ಅರಿವು ಇದ್ದರೆ ಸಾಕಷ್ಟು ಅನಾಹುತಗಳನ್ನು ತಪ್ಪಿಸಬಹುದು. ಜೀವನದಲ್ಲಿ ಸಂತೋಷವಾಗಿರಬಹುದು” ಎಂದರು.
“ಯುವಕರು ವಾಹನ ಚಲಾಯಿಸುವಾಗ ಸಿಗ್ನಲ್ ಜಂಪ್ ಮಾಡುವುದು , ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ವೀಲಿಂಗ್ ಮಾಡುವುದು ಹಾಗೂ ವಾಹನದ ಇನ್ಷೂರೆನ್ಸ್ ಮಾಡಿಸದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಹನ ಚಾಲಕರು ವಾಹನದ ಬಗ್ಗೆ ಕಾನೂನಿನ ಅರಿವು ಹೊಂದಿರುವುದು ಅತ್ಯವಶ್ಯಕವಾಗಿದೆ” ಎಂದರು.
“ಹೆಣ್ಣುಮಕ್ಕಳು ತಮ್ಮ ಮೊಬೈಲಿಗೆ ಬರುವ ಅಪರಿಚಿತ ಕರೆಯನ್ನು ಸ್ವೀಕರಿಸಬೇಡಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿ ಕಂಡುಬರುತ್ತಿವೆ. ಸ್ಮಾರ್ಟ್ ಮೊಬೈಲ್ಗಳನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸಬೇಕು” ಎಂದರು.
ನೂತನ ಅಪರಾಧ ಕಾನೂನು ಕುರಿತು ಛಾಯಾಚಿತ್ರ ಪ್ರದರ್ಶನ ಆಯೋಜಿಸಲು ಸಹಕರಿಸಿದಂತಹ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು.
ಮೈಸೂರು ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್ ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಒಳಗೊಂಡಂತೆ ಮೈಸೂರಿನಲ್ಲಿರುವ ಕ್ಷೇತ್ರ ಸಂವಹನ ಇಲಾಖೆ ಕೇಂದ್ರ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದ್ದು, ಛಾಯಾಚಿತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ” ಎಂದು ಮಾಹಿತಿ ನೀಡಿದರು.
“ಮೈಸೂರಿನ ಕೇಂದ್ರ ಸಂವಹನ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನೂತನ ಅಪರಾಧ ಕಾನೂನಿನ ಬಗ್ಗೆ ಅರಿವು ಮೂಡಿಸುವ ಜತೆಗೆ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಿ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗ್ಯಾರಂಟಿ ಯೋಜನೆಗೆ ಎಸ್ಸಿಎಸ್ಪಿ, ಟಿಎಸ್ಪಿ ಹಣ ಬಳಕೆ ಖಂಡಿಸಿ ಸ್ಲಂ ಜನಾಂದೋಲನ ಪ್ರತಿಭಟನೆ
ನೂತನ ಅಪರಾಧ ಕಾನೂನು ವಿಷಯದ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲೆ ಡಾ ಹೇಮಲತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲಾ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಲ್ಲು ಕಟ್ಟಡದ ಪ್ರಾಂಶುಪಾಲ ತಮ್ಮೇಗೌಡ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆ ರಾಜೇಶ್ ಕಾರಂತ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಭರತ್ ರಾಜ್, ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರವಿಕಾಂತ ಲಮಾಣಿ ಸೇರಿದಂತೆ ಇತರು ಇದ್ದರು.
