ದಕ್ಷಿಣ ಭಾರತಕ್ಕೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು. ಒಡನಾಡಿಗಳೇ ನಾವಿರುವ ಇಂಡಿಯಾ ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಬಹಳ ಬಲಿಷ್ಠವಾದದ್ದು. ಇಂತಹ ನ್ಯಾಯಾಂಗ ವ್ಯವಸ್ಥೆಯ ಸುಪ್ರೀಂ ಕೋರ್ಟ್ ನಮಗೆ ಎರಡೂವರೆ ಸಾವಿರ ಕಿಲೋಮಿಟರ್ ದೂರದ ದೆಹಲಿಯಲ್ಲಿರುವುದರಿಂದ ಜನಸಾಮಾನ್ಯರು ನ್ಯಾಯ ಪಡೆಯಲಾಗುತ್ತಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ(ಸೌತ್ ಇಂಡಿಯಾ) ಸ್ಥಾಪಿಸಬೇಕೆಂದು ಜನಾಭಿಪ್ರಾಯ ಮೂಡಿಸಿ, ಜನಪ್ರತಿನಿಧಿಗಳ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿಯ ಹನಕೆರೆ ಅಭಿಗೌಡ ತಿಳಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ನಾವು ದ್ರಾವಿಡ ಕನ್ನಡಿಗರ ಸಂಘಟನೆ ಆಯೋಜಿಸಿದ್ದ “ಸೌತ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು” ಸಾರ್ವಜನಿಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
“ಕನ್ನಡಿಗರಲ್ಲಿ ದ್ರಾವಿಡ ಅಂದರೆ ಬರೀ ತಮಿಳರು ಎಂಬ ಭಾವನೆ ಬಿತ್ತಿದ್ದಾರೆ. ನಮ್ಮ ಸುಪ್ರೀಂ ಕೋರ್ಟ್ ಪೀಠ ಏಕೆ ಬೇಕೆಂದು ತಿಳಿಯುವ ಮೊದಲು, ಸುಪ್ರೀಂ ಕೋರ್ಟ್ ಇಲ್ಲಿ ಸುಪ್ರೀಂ ಪದ ಬಳಕೆಯೇ ತಪ್ಪು. ಅದು ಯೂನಿಯನ್ ಇಲ್ಲವೇ ಫೆಡರಲ್ ಕೋರ್ಟ್ ಎಂದು ಆಗಬೇಕಿತ್ತು” ಎಂದು ಅಭಿಪ್ರಾಯಪಟ್ಟರು.
“1956ರಲ್ಲಿ ಜನರ ಹೋರಾಟಕ್ಕೆ ಮಣಿದು ಒಕ್ಕೂಟ ಸರ್ಕಾರ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿತು. ಕನ್ನಡಕ್ಕೆ ಕರ್ನಾಟಕ ರಾಜ್ಯ, ಪಂಜಾಬಿಗೆ ಪಂಜಾಬ್ ರಾಜ್ಯ ಹೀಗೆ ರಚನೆಯಾದವು. ಹಿಂದಿ ಒಂದು ಭಾಷೆಯಾಗಿದ್ದರೆ ಅದಕ್ಕೆ ಒಂದು ರಾಜ್ಯ ಏಕೆ ರಚನೆಯಾಗಲಿಲ್ಲ. ಅದು ಒಂದು ಭಾಷೆಯೇ ಅಲ್ಲ. ದ್ರಾವಿಡರನ್ನು ವಂಚಿಸಲು ಇರುವ ಅಸ್ತ್ರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದ್ರಾವಿಡ ನುಡಿಗಳಿಗೆ ಮಹಾಪ್ರಾಣ ಸೇರಿಸಿ ಸಂಸ್ಕೃತ ಭಾಷೆ ಮಾಡಿಕೊಂಡಿದ್ದಾರೆ. ಕನ್ನಡ ಭಾಷೆಗೆ ಹಕಾರ ಸೇರಿಸಿ ಇತರ ದ್ರಾವಿಡ ಭಾಷೆಗಳಿಂದ ಬೇರೆ ಮಾಡಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಹುನ್ನಾರ ಅಡಗಿದೆ. ಇದೆಲ್ಲವನ್ನು ದ್ರಾವಿಡರಾದ ನಾವು ಅರಿತುಕೊಂಡು ಒಗ್ಗಟ್ಟಾಗಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸಂಘಟನೆಗಳು ಮಡಿವಂತಿಕೆ ಬಿಟ್ಟು ಹೋರಾಟ ಮಾಡಬೇಕಿದೆ: ಕೆಂಪೂಗೌಡ
ಮಾದರಹಳ್ಳಿ ನವೀನ್ ಮಾತನಾಡಿ, “ಒಕ್ಕೂಟ ಸರ್ಕಾರವನ್ನು ಕೇಂದ್ರ ಸರ್ಕಾರವೆಂದು ಕರೆಯುವುದರಿಂದ ಎಲ್ಲ ಅಧಿಕಾರಗಳು ಅದರ ಬಳಿಯೇ ಇದೆಯೆಂಬುದು ಜನಸಾಮಾನ್ಯರಲ್ಲಿ ಭಾವನೆ ಮೂಡುತ್ತದೆ. ಒಕ್ಕೂಟ ಸರ್ಕಾರ ಪದ ಬಳಸಿದಾಗ ನಾವೂ ಕೂಡ ಅಧಿಕಾರದಲ್ಲಿ ಭಾಗಸ್ಥರು ಅನಿಸುತ್ತದೆ. ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿರುವ ಸುಪ್ರೀಂ ಕೋರ್ಟಿಗೆ ಹೋಗಬೇಕೆಂದರೆ ಹಣಕಾಸಿನ ತೊಂದರೆ, ಸಮಯದ ಅಭಾವದಿಂದಾಗಿ ನ್ಯಾಯ ಪಡೆಯುವುದು ಕಷ್ಟವಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ಡೀಸೆಂಟ್ರಲೈಸ್ ಮಾಡುವುದು. ನ್ಯಾಯಾಲಯ ಹತ್ತಿರದಲ್ಲಿದ್ದರೆ ಹೋರಾಟ ಮಾಡಿ ನ್ಯಾಯಪಡೆಯುತ್ತಾರೆ. ದೂರದಲ್ಲಿದ್ದರೆ ನ್ಯಾಯ ಹೋರಾಟವನ್ನೇ ಕೈಬಿಡುತ್ತಾರೆ” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಎಂ ವಿ ಕೃಷ್ಣ, ಕೆಂಬೂತಗೆರೆ ಶಿವಲಿಂಗಯ್ಯ, ಗೂಳಘಟ್ಟ ಉಜನಿಗೌಡ, ಕಾಗೆಪುರ ಚೇತನ್, ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಮನುಗೌಡ, ದಡದಪುರ ದರ್ಶನ, ಬಸವರಾಜು, ಉಪನ್ಯಾಸಕ ಮುನಿರಾಜು, ಶಿವಕೀರ್ತನ್ ಮಂಚನಹಳ್ಳಿ ಸೇರಿದಂತೆ ಇತರರು ಇದ್ದರು.