ಇತ್ತೀಚೆಗೆ ಎಲ್ ಅಂಡ್ ಟಿಯ ಅಧ್ಯಕ್ಷ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕೆಂದು ಹೊರಡಿಸಿರುವ ಫಾರ್ಮಾನು ಅವೈಜ್ಞಾನಿಕ, ಅಸಮರ್ಥನೀಯ ಹಾಗೂ ಅಮಾನವೀಯವಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸೈಯ್ಯದ್ ಮುಜೀಬ್ ಅಭಿಪ್ರಾಯ ಪಟ್ಟರು.
ಮಂಗಳೂರಿನ ಬೋಳಾರದಲ್ಲಿ ನಡೆಯುತ್ತಿರುವ ಸಿಐಟಿಯು ನೇತ್ರತ್ವದಲ್ಲಿ ನಡೆಯುತ್ತಿರುವ ಹಾಸನ ವಿಭಾಗ ಮಟ್ಟದ ಎರಡು ದಿನದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿರುವ ದೇಶದಲ್ಲಿ ವಾರದಲ್ಲಿ 70-90 ಗಂಟೆ ಕೆಲಸದ ಚರ್ಚೆಗಳು ಮತ್ತಷ್ಟು ನಿರುದ್ಯೋಗವನ್ನು ಹುಟ್ಟು ಹಾಕಲಿದೆ. ಮಾತ್ರವಲ್ಲದೆ ಅದು ಹಲವು ಸಾಮಾಜಿಕ ಸಮಸ್ಯೆಗಳನ್ನು ಹಾಗೂ ವಿವಿಧ ಆಯಾಮಗಳ ಸಮಸ್ಯೆಗಳನ್ನು ಉಲ್ಬಣಗೊಳಿಸಲಿದೆ. ಇದ್ಯಾವುದನ್ನೂ ಮುಂದಾಲೋಚಿಸದೆ ಬಂಡವಾಳಗಾರರು ಕೇವಲ ತಮ್ಮ ಲಾಭಕ್ಕಷ್ಟೇ ಆಲೋಚಿಸುತ್ತಿರುವುದು ಸಮಾಜದ ಒಟ್ಟಾರೆ ಬೆಳವಣಿಗೆಗೆ ಪೂರಕವಲ್ಲ” ಎಂದು ಅಸಮಾಧಾನಗೊಂಡರು.
“ಹತ್ತಾರು ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳು ಹೊಸ ಕಾಯ್ದೆಗಳ, ನಿಯಮಾವಳಿಗಳ ಹಾಗೂ ನೀತಿಗಳ ಮೂಲಕ ಜನರಿಗಿದ್ದ ಅಧಿಕಾರವನ್ನು ಕಸಿಯುತ್ತಿದ್ದು, ಜನರನ್ನು ಮತ್ತೆ ಗುಲಾಮರನ್ನಾಗಿಸುತ್ತಿವೆ. ಮಂಗಳೂರಿನಲ್ಲಿ ಜನರ ಧ್ವನಿಗಳಾದ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸ್ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯ ರಾಜಧಾನಿಯಲ್ಲೂ ಪ್ರತಿಭಟನೆಗಳಿಗೆ ಅವಕಾಶವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿದೆ. ಇದು ಜನರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿರುವುದರ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ ಬಾಲಕ್ರಷ್ಣ ಶೆಟ್ಟಿ ಮಾತನಾಡಿ, “ರಾಜ್ಯ ಕಾಂಗ್ರೆಸ್ ಸರ್ಕಾರ ಈಗಲೂ ಗ್ಯಾರಂಟಿ ಯೋಜನೆಗಳ ಅಮಲಿನಲ್ಲಿ ತೇಲಾಡುತ್ತಿದೆಯೇ ಹೊರತು ದುಡಿಯುವ ವರ್ಗದ ಪ್ರಶ್ನೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರ ಕೈಗೊಂಡ ಕಾರ್ಮಿಕ ವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿದೆ. ಇಂತಹ ಸರ್ಕಾರದ ವಿರುದ್ಧ ದೃಢ ಹೋರಾಟ ನಡೆಸಲು ಕಾರ್ಮಿಕ ವರ್ಗವನ್ನು ಸಜ್ಜುಗೊಳಿಸಲು ನಡೆಯುವ ಇಂತಹ ಕಾರ್ಯಾಗಾರಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸಲು ದುಡಿಯುವ ವರ್ಗದ ಚಳುವಳಿಯನ್ನು ಬಲಿಷ್ಠಗೊಳಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಕೊರಗಜ್ಜನ ಆಶೀರ್ವಾದ ಪಡೆಯುತ್ತಲೇ ಶ್ರೀಮಂತರು ಕೊರಗರನ್ನು ತುಳಿಯುತ್ತಿದ್ದಾರೆ: ಬೃಂದಾ ಕಾರಟ್
ಕಾರ್ಯಾಗಾರದಲ್ಲಿ ಸಿಐಟಿಯು ಉಪಾಧ್ಯಕ್ಷರಾದ ವಸಂತ ಆಚಾರಿ, ಮಾಲಿನಿ ಮೇಸ್ತಾ, ರಾಧಾ ಮೂಡಬಿದ್ರೆ, ಧರ್ಮೇಶ್, ಹಾಸನ ವಿಭಾಗ ಮಟ್ಟದ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಆಯ್ದ 120 ಮಂದಿ ಜಿಲ್ಲಾ ಮಟ್ಟದ ನಾಯಕರು, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಉಪಾಧ್ಯಕ್ಷ ಡಾ. ಕೆ ಪ್ರಕಾಶ್ ಉಪಸ್ಥಿತರಿದ್ದರು.
