ಭಾರತ ವಿರೋಧಿ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ವಿರುದ್ಧ ನಗರದ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, “ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಬರಹವನ್ನು ಹಂಚಿಕೊಂಡ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಡಾ. ಅತೀಫಾ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 353(ಕಿಡಿಗೇಡಿತನದ ಬರಹ ಪ್ರಕಟಿಸುವುದು) ಹಾಗೂ ಸೆಕ್ಷನ್ 196(ಧರ್ಮಗಳ ನಡುವೆ ದ್ವೇಷ ಹಬ್ಬಿಸಲು ಯತ್ನಿಸುವುದು)ರಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಹೇಳಿದರು.
“ವೈದ್ಯೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದೇವೆ. ಆಕೆಯ ಸಂದೇಶ ಹಂಚಿಕೊಳ್ಳಲು ಬಳಸಿದ ಮೊಬೈಲ್ ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಿದ್ದೇವೆ” ಎಂದು ತಿಳಿಸಿದರು.
“ಸಾಮಾಜಿಕ ಮಾಧ್ಯಮದಲ್ಲಿ ಬರಹವನ್ನು ಹಂಚಿಕೊಂಡ ವೈದ್ಯೆಯು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂಬ ಕಾರಣಕ್ಕೆ ಹೈಲ್ಯಾಂಡ್ ಆಸ್ಪತ್ರೆಯು ಆಕೆಯನ್ನು ಕೆಲಸದಿಂದ ವಜಾ ಮಾಡಿದೆ. ನಂತರ ಆಸ್ಪತ್ರೆಯ ಎಚ್ಆರ್ ವಿಭಾಗದವರು ವೈದ್ಯೆ ಡಯಟೀಷಿಯನ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರವಾಸಿಗರ ಮೇಲೆ ನಡೆದ ದಾಳಿ ಖಂಡಿಸಿ ಪ್ರತಿಭಟನೆ
ಈ ಘಟನೆ ಕುರಿತು ಸ್ಪಷ್ಟನೆ ನೀಡಿ ಹೈಲ್ಯಾಂಡ್ ಆಸ್ಪತ್ರೆಯ ಆಡಳಿತ ಮಂಡಳಿ ಟ್ವೀಟ್ ಮಾಡಿದ್ದು, “ದೇಶವಿರೋಧಿಯೆಂದು ಪರಿಗಣಿಸುವಂತಹ ಅಭಿಪ್ರಾಯಗಳನ್ನು ನಮ್ಮ ಸಂಸ್ಥೆಯು ಒಪ್ಪುವುದಿಲ್ಲ. ವೈದ್ಯೆಯು ತಮ್ಮ ಬರಹದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅದನ್ನು ನಾವೂ ಬಲವಾಗಿ ಖಂಡಿಸುತ್ತೇವೆ. ಇಂತಹ ದೇಶ ವಿರೋಧಿ ಭಾವನೆಗಳಿಂದ ನಾವು ಅಂತರ ಕಾಯ್ದುಕೊಳ್ಳುವ ಮೂಲಕ ದೇಶದ ಸಾರ್ವಭೌಮತೆ, ಐಕ್ಯತೆ ಹಾಗೂ ಭದ್ರತೆಯನ್ನು ಎತ್ತಿಹಿಡಿಯುತ್ತೇವೆ” ಎಂದು ತಿಳಿಸಿದೆ.
ವೈದ್ಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಬರಹವನ್ನು ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ ಜಂಟಿ ಕಾರ್ಯದರ್ಶಿ ಶರಣ್ ಪಂಪ್ವೆಲ್ ಫೇಸ್ಬುಕ್ನಲ್ಲಿ ಈಚೆಗೆ ಹಂಚಿಕೊಂಡಿದ್ದು, ಆಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.