ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಜೋತು ಬೀಳದೆ, ಪಠ್ಯೇತರ ಪುಸ್ತಕಗಳನ್ನೂ ಜ್ಞಾನ ಸಂಪಾದನೆ ಮಾಡುವ ಮೂಲಕ ಕೀಳರಿಮೆಗಳನ್ನು ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ತಿಳಿಸಿದರು.
ಅವರು ಬುಧವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನಗರದ ಬದ್ರಿಯಾ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಬದ್ರಿಯಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಬ್ಯಾರಿ ಸಾಹಿತ್ಯ ಕಮ್ಮಟ’ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಹೊಂದಿದರೆ ಮಾತ್ರ ಸಾಧಕರಾಗಲು ಸಾಧ್ಯ. ಕನಸುಗಾರರಾಗಿ ಬೆಳೆಯಬೇಕಾದ ಯುವಜನಾಂಗ ಮಾತೃ ಭಾಷೆಯ ಸೇವೆಗೂ ಮುಂದಾಗಬೇಕು ಎಂದು ಉಮರ್ ಯು ಹೆಚ್ ಹೇಳಿದರು.
ಬದ್ರಿಯಾ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸೀಮಾ ಎ.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶುಭಹಾರೈಸಿದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಉಳ್ಳಾಲ ಘಟಕದ ಅಧ್ಯಕ್ಷೆ ಸಿಹಾನ ಬಿ.ಎಂ. ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿ ಬ್ಯಾರಿ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ, ಕಾರ್ಯಕ್ರಮದ ಸಂಚಾಲಕಿ ಶಮೀರಾ ಜಹಾನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಯು.ಹೆಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಅಬ್ದುಲ್ ರಹೀಮ್ ಧನ್ಯವಾದವಿತ್ತರು.
ಅಕಾಡೆಮಿ ಸದಸ್ಯರಾದ ಹಾಜಿ ಯು.ಕೆ. ಹಮೀದ್, ಹಮೀದ್ ಹಸನ್ ಮಾಡೂರು, ಬಿ.ಎಸ್. ಮುಹಮ್ಮದ್, ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ, ಬದ್ರಿಯಾ ಪಪೂ ಕಾಲೇಜಿನ ಮಾಜಿ ಪ್ರಾಂಶುಪಾಲ ಯೂಸುಫ್ ಡಿ., ಪ್ರಾಧ್ಯಾಪಕರಾದ ಸಫ್ವಾನ್ ಕೆ., ಪುಟ್ಟಸ್ವಾಮಿ ಹಾಗೂ ಯಾಕೂಬ್ ಕಲ್ಲರ್ಪೆ ಮತ್ತಿತರರು ಉಪಸ್ಥಿತರಿದ್ದರು.
